إعدادات العرض
ಖಂಡಿತವಾಗಿಯೂ ನೀನು ಒಂದು ಮಹತ್ತರವಾದ ವಿಷಯದ ಬಗ್ಗೆ ಕೇಳಿದ್ದೀಯಾ. ಖಂಡಿತವಾಗಿಯೂ ಅಲ್ಲಾಹು ಯಾರಿಗೆ ಅದನ್ನು ಸುಲಭಗೊಳಿಸುತ್ತಾನೋ…
ಖಂಡಿತವಾಗಿಯೂ ನೀನು ಒಂದು ಮಹತ್ತರವಾದ ವಿಷಯದ ಬಗ್ಗೆ ಕೇಳಿದ್ದೀಯಾ. ಖಂಡಿತವಾಗಿಯೂ ಅಲ್ಲಾಹು ಯಾರಿಗೆ ಅದನ್ನು ಸುಲಭಗೊಳಿಸುತ್ತಾನೋ ಅವನಿಗೆ ಅದು ಸುಲಭವಾಗಿದೆ
ಮುಆದ್ ಇಬ್ನ್ ಜಬಲ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅವರು ಹೇಳಿದರು: ನಾನು ಹೇಳಿದೆನು: "ಓ ಅಲ್ಲಾಹನ ಸಂದೇಶವಾಹಕರೇ! ನನಗೆ ಸ್ವರ್ಗಕ್ಕೆ ಸೇರಿಸುವ ಮತ್ತು ನರಕದಿಂದ ದೂರ ಮಾಡುವ ಒಂದು ಕಾರ್ಯದ ಬಗ್ಗೆ ತಿಳಿಸಿರಿ". ಅವರು (ಪ್ರವಾದಿ) ಹೇಳಿದರು: "ಖಂಡಿತವಾಗಿಯೂ ನೀನು ಒಂದು ಮಹತ್ತರವಾದ ವಿಷಯದ ಬಗ್ಗೆ ಕೇಳಿದ್ದೀಯಾ. ಖಂಡಿತವಾಗಿಯೂ ಅಲ್ಲಾಹು ಯಾರಿಗೆ ಅದನ್ನು ಸುಲಭಗೊಳಿಸುತ್ತಾನೋ ಅವನಿಗೆ ಅದು ಸುಲಭವಾಗಿದೆ: ನೀನು ಅಲ್ಲಾಹನನ್ನು ಆರಾಧಿಸು, ಅವನೊಂದಿಗೆ ಯಾವುದನ್ನೂ ಸಹಭಾಗಿಯಾಗಿ ಮಾಡಬೇಡ (ಶಿರ್ಕ್ ಮಾಡಬೇಡ). ನಮಾಝ್ ಅನ್ನು ಸಂಸ್ಥಾಪಿಸು. ಝಕಾತ್ ಅನ್ನು ನೀಡು. ರಮದಾನ್ನಲ್ಲಿ ಉಪವಾಸ ಆಚರಿಸು. ಮತ್ತು ಹಜ್ಜ್ ಮಾಡು". ನಂತರ ಅವರು ಹೇಳಿದರು: "ನಾನು ನಿನಗೆ ಒಳಿತಿನ ದ್ವಾರಗಳನ್ನು ತೋರಿಸಬೇಡವೇ? ಉಪವಾಸವು ಒಂದು ಗುರಾಣಿಯಾಗಿದೆ. ನೀರು ಬೆಂಕಿಯನ್ನು ನಂದಿಸುವಂತೆ, ಸದಕಾ (ದಾನ) ಪಾಪವನ್ನು ನಂದಿಸುತ್ತದೆ. ಒಬ್ಬ ವ್ಯಕ್ತಿ ರಾತ್ರಿಯ ಮಧ್ಯದಲ್ಲಿ ಮಾಡುವ ನಮಾಝ್". ನಂತರ ಅವರು (ಕುರ್ಆನ್ನ ಈ ವಚನವನ್ನು) ಪಠಿಸಿದರು: "ಅವರ ಪಾರ್ಶ್ವಗಳು ಹಾಸಿಗೆಗಳಿಂದ ದೂರವಿರುತ್ತವೆ..." [ಸೂರಃ ಅಸ್ಸಜ್ದಾ: 16] "...ಅವರು ಮಾಡುತ್ತಿದ್ದ (ಕಾರ್ಯಗಳಿಗಾಗಿ)." [ಸೂರಃ ಅಸ್ಸಜ್ದಾ: 17] ವರೆಗೆ. ನಂತರ ಅವರು ಹೇಳಿದರು: "ನಾನು ನಿನಗೆ ವಿಷಯದ ಶಿರಸ್ಸು, ಅದರ ಸ್ತಂಭ, ಮತ್ತು ಅದರ ಉನ್ನತ ಶಿಖರದ ಬಗ್ಗೆ ತಿಳಿಸಬೇಡವೇ?" ನಾನು ಹೇಳಿದೆನು: "ಖಂಡಿತವಾಗಿ, ಓ ಅಲ್ಲಾಹನ ಸಂದೇಶವಾಹಕರೇ!" ಅವರು ಹೇಳಿದರು: "ವಿಷಯದ ಶಿರಸ್ಸು ಇಸ್ಲಾಂ ಆಗಿದೆ, ಅದರ ಸ್ತಂಭವು ನಮಾಝ್ ಆಗಿದೆ, ಮತ್ತು ಅದರ ಉನ್ನತ ಶಿಖರವು ಜಿಹಾದ್ ಆಗಿದೆ". ನಂತರ ಅವರು ಹೇಳಿದರು: "ನಾನು ನಿನಗೆ ಅದೆಲ್ಲವನ್ನೂ ನಿಯಂತ್ರಿಸುವ ವಿಷಯದ ಬಗ್ಗೆ ತಿಳಿಸಬೇಡವೇ?" ನಾನು ಹೇಳಿದೆನು: "ಖಂಡಿತವಾಗಿ, ಓ ಅಲ್ಲಾಹನ ಸಂದೇಶವಾಹಕರೇ!" ಆಗ ಅವರು ತಮ್ಮ ನಾಲಿಗೆಯನ್ನು ಹಿಡಿದುಕೊಂಡು ಹೇಳಿದರು: "ಇದನ್ನು ನಿಯಂತ್ರಿಸು". ನಾನು ಹೇಳಿದೆನು: "ಓ ಅಲ್ಲಾಹನ ಪ್ರವಾದಿಯವರೇ! ನಾವು ಮಾತನಾಡಿದ ವಿಷಯಗಳಿಗಾಗಿ ನಮ್ಮನ್ನು ಶಿಕ್ಷಿಸಲಾಗುವುದೇ?" ಆಗ ಅವರು ಹೇಳಿದರು: "ನಿನ್ನ ತಾಯಿ ನಿನ್ನನ್ನು ಕಳೆದುಕೊಳ್ಳಲಿ (ಇದು ಅರಬ್ಬರ ಒಂದು ನುಡಿಗಟ್ಟು, ಅಕ್ಷರಶಃ ಅರ್ಥವಲ್ಲ)! ಜನರ ನಾಲಿಗೆಗಳ ಕೊಯ್ಲುಗಳಲ್ಲದೆ ಬೇರೆ ಯಾವುದಾದರೂ ಅವರನ್ನು ಅವರ ಮುಖಗಳ ಮೇಲೆ (ಅಥವಾ ಅವರು ಹೇಳಿದರು: ಅವರ ಮೂಗುಗಳ ಮೇಲೆ) ನರಕದಲ್ಲಿ ಕೆಡವುತ್ತದೆಯೇ?!"
الترجمة
العربية Español አማርኛ English اردو Indonesia বাংলা Français Türkçe Русский Bosanski සිංහල हिन्दी 中文 فارسی Tiếng Việt Tagalog Kurdî Hausa Português മലയാളം తెలుగు Kiswahili தமிழ் ไทย Deutsch پښتو অসমীয়া Shqip Nederlands ગુજરાતી Кыргызча नेपाली Lietuvių دری Српски тоҷикӣ Kinyarwanda Română Magyar Čeština Moore Malagasy Oromoo Wolof Azərbaycan O‘zbek Українська ქართული Македонски ភាសាខ្មែរ ਪੰਜਾਬੀ मराठी Kirundi Kurmancî Bahasa Melayuالشرح
ಮುಆದ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ಹೇಳಿದರು: ಒಮ್ಮೆ ಒಂದು ಯಾತ್ರೆಯಲ್ಲಿ ನಾನು ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಜೊತೆಯಲ್ಲಿದ್ದೆ. ಹೀಗಿರುವಾಗ, ಒಂದಿನ ಬೆಳಗ್ಗೆ ನಾನು ಅವರಿಗೆ ಸಮೀಪದಲ್ಲೇ ಸವಾರಿ ಮಾಡುತ್ತಾ ಸಾಗುತ್ತಿದ್ದೆ. ನಾನು ಹೇಳಿದೆ: "ಓ ಅಲ್ಲಾಹನ ಸಂದೇಶವಾಹಕರೇ! ನನ್ನನ್ನು ಸ್ವರ್ಗಕ್ಕೆ ಪ್ರವೇಶ ಮಾಡಿಸುವ ಮತ್ತು ನನ್ನನ್ನು ನರಕದಿಂದ ದೂರವಿರಿಸುವ ಒಂದು ಕರ್ಮದ ಬಗ್ಗೆ ತಿಳಿಸಿಕೊಡಿ." ಅವರು ಉತ್ತರಿಸಿದರು: "ಜನರಿಗೆ ಮಾಡಲು ಅತ್ಯಂತ ಕಷ್ಟವಿರುವ ವಿಷಯದ ಬಗ್ಗೆ ನೀನು ಕೇಳಿರುವೆ. ಆದರೆ, ಅಲ್ಲಾಹು ಯಾರಿಗೆ ಸುಲಭಗೊಳಿಸುತ್ತಾನೋ ಅವನಿಗೆ ಅದು ಸುಲಭ ಮತ್ತು ಸರಳವಾಗಿದೆ. ಇಸ್ಲಾಮಿನ ಈ ಕೆಳಗಿನ ಕಡ್ಡಾಯ ಕಾರ್ಯಗಳನ್ನು ನೆರವೇರಿಸು: ಒಂದು: ಅಲ್ಲಾಹನನ್ನು ಮಾತ್ರ ಆರಾಧಿಸುವುದು ಹಾಗೂ ಅವನೊಂದಿಗೆ ಏನನ್ನೂ ಸಹಭಾಗಿಯಾಗಿ ಮಾಡದಿರುವುದು. ಎರಡು: ದಿನ-ರಾತ್ರಿಗಳಲ್ಲಿ ನಿರ್ವಹಿಸಲಾಗುವ ಫಜ್ರ್, ಝುಹರ್, ಅಸರ್, ಮಗ್ರಿಬ್ ಮತ್ತು ಇಶಾ ಎಂಬ ಐದು ಕಡ್ಡಾಯ ನಮಾಝ್ಗಳನ್ನು ಅವುಗಳ ಷರತ್ತುಗಳು, ಸ್ತಂಭಗಳು ಮತ್ತು ಕಡ್ಡಾಯಗಳನ್ನು ಪಾಲಿಸಿ ಸರಿಯಾಗಿ ಸಂಸ್ಥಾಪಿಸುವುದು. ಮೂರು: ಕಡ್ಡಾಯ ಝಕಾತನ್ನು ನೀಡುವುದು. ಇದೊಂದು ಆರ್ಥಿಕ ಆರಾಧನೆಯಾಗಿದ್ದು, ಧರ್ಮಶಾಸ್ತ್ರದಲ್ಲಿ ನಿರ್ದೇಶಿಸಿದಂತೆ ಒಂದು ನಿಗದಿತ ಪ್ರಮಾಣವನ್ನು ತಲುಪಿದ ಸಂಪತ್ತಿನ ಒಂದು ಭಾಗವನ್ನು ಕಡ್ಡಾಯವಾಗಿ ಅದರ ಅರ್ಹ ಫಲಾನುಭವಿಗಳಿಗೆ ನೀಡುವುದು. ನಾಲ್ಕು: ರಮದಾನ್ ತಿಂಗಳಲ್ಲಿ ಉಪವಾಸ ಆಚರಿಸುವುದು. ಅಂದರೆ, ಅಲ್ಲಾಹನಿಗೆ ಆರಾಧನೆ ಸಲ್ಲಿಸುವ ಸಂಕಲ್ಪದೊಂದಿಗೆ, ಪ್ರಭಾತದ ಉದಯದಿಂದ ಸೂರ್ಯಾಸ್ತದ ತನಕ ಆಹಾರ, ಪಾನೀಯ ಮುಂತಾದ ಉಪವಾಸವನ್ನು ಅಸಿಂಧುಗೊಳಿಸುವ ವಸ್ತುಗಳಿಂದ ದೂರವಿರುವುದು. ಐದು: ಅಲ್ಲಾಹನ ಆರಾಧನೆ ಸಲ್ಲಿಸುವುದಕ್ಕಾಗಿ ಹಜ್ಜ್ ಕರ್ಮಗಳನ್ನು ನಿರ್ವಹಿಸಲು ಮಕ್ಕಾಗೆ ತೀರ್ಥಯಾತ್ರೆ ಮಾಡುವುದು. ನಂತರ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಒಳಿತಿನ ಬಾಗಿಲುಗಳಿಗೆ ತಲುಪಿಸುವ ಒಂದು ಮಾರ್ಗದ ಬಗ್ಗೆ ನಾನು ನಿನಗೆ ತಿಳಿಸಿಕೊಡಲೇ? ಇದು ಆ ಕಡ್ಡಾಯ ಕರ್ಮಗಳನ್ನು ನಿರ್ವಹಿಸಿದ ಬಳಿಕ ಈ ಕೆಳಗಿನ ಐಚ್ಛಿಕ ಕರ್ಮಗಳನ್ನು ನಿರ್ವಹಿಸುವುದು: ಒಂದು: ಐಚ್ಛಿಕ ಉಪವಾಸ. ಅದು ಮೋಹಗಳನ್ನು ಕಡಿಯುವ ಮತ್ತು ಅದಕ್ಕಿರುವ ಶಕ್ತಿಯನ್ನು ಕುಂದಿಸುವ ಮೂಲಕ ಪಾಪಗಳಲ್ಲಿ ಬೀಳದಂತೆ ತಡೆಯುತ್ತದೆ. ಎರಡು: ಐಚ್ಛಿಕ ದಾನ. ಇದು ಮಾಡಿದ ಪಾಪವನ್ನು ನಂದಿಸುತ್ತದೆ, ನಿವಾರಿಸುತ್ತದೆ ಮತ್ತು ಅದರ ಕುರುಹನ್ನು ಅಳಿಸುತ್ತದೆ. ಮೂರು: ರಾತ್ರಿಯ ಕೊನೆಯ ಮೂರನೇ ಒಂದು ಭಾಗದಲ್ಲಿ ತಹಜ್ಜುದ್ ನಮಾಝ್ ನಿರ್ವಹಿಸುವುದು. ನಂತರ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿ ಇರಲಿ) ಈ ವಚನವನ್ನು ಪಠಿಸಿದರು: "ಅವರ ಪಾರ್ಶ್ವಗಳು ಅಗಲುತ್ತವೆ" ಅಂದರೆ ದೂರವಾಗುತ್ತವೆ, "ಹಾಸಿಗೆಗಳಿಂದ" ಅಂದರೆ ನಿದ್ರೆಯಿಂದ, "ಅಲ್ಲಾಹನನ್ನು ಪ್ರಾರ್ಥಿಸುವ ಸ್ಥಿತಿಯಲ್ಲಿ" ಅಂದರೆ ನಮಾಝ್, ದೇವಸ್ಮರಣೆ, ಪ್ರಾರ್ಥನೆ ಮುಂತಾದವುಗಳನ್ನು ಮಾಡುತ್ತಿರುವ ಸ್ಥಿತಿಯಲ್ಲಿ, "ಭಯ ಮತ್ತು ನಿರೀಕ್ಷೆಯೊಂದಿಗೆ, ಮತ್ತು ಅವರಿಗೆ ನಾವು ಒದಗಿಸಿರುವುದರಿಂದ ಅವರು ಖರ್ಚು ಮಾಡುತ್ತಾರೆ. ನಾವು ಅವರಿಗಾಗಿ ಏನೆಲ್ಲಾ ತಣ್ತಂಪಾಗಿಸುವ ವಸ್ತುಗಳನ್ನು ಮರೆಯಾಗಿಟ್ಟಿದ್ದೇವೆಂದು ಯಾವುದೇ ವ್ಯಕ್ತಿಗೂ ತಿಳಿದಿಲ್ಲ" ಅಂದರೆ ಪುನರುತ್ಥಾನ ದಿನದಂದು ಸ್ವರ್ಗದಲ್ಲಿ ಅವರ ಕಣ್ಣುಗಳನ್ನು ತಂಪಾಗಿಸುವ ಏನೆಲ್ಲಾ ಅನುಗ್ರಹಗಳನ್ನು ನಾವು ಅವರಿಗೋಸ್ಕರ ಸಿದ್ಧಗೊಳಿಸಿದ್ದೇವೆಂದು ಅವರಿಗೆ ತಿಳಿದಿಲ್ಲ, "ಅವರು ಮಾಡುತ್ತಿರುವ ಕರ್ಮಗಳಿಗೆ ಪ್ರತಿಫಲವಾಗಿ." ನಂತರ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ನಾನು ನಿನಗೆ ಧರ್ಮದ ಅಡಿಪಾಯದ ಬಗ್ಗೆ, ಅದಕ್ಕೆ ಆಧಾರ ನೀಡುವ ಸ್ತಂಭಗಳ ಬಗ್ಗೆ, ಮತ್ತು ಅದರ ಅಗ್ರ ಶಿಖರದ ಬಗ್ಗೆ ತಿಳಿಸಿಕೊಡಲೇ?" ಮುಆದ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ಹೇಳಿದರು: "ಓ ಅಲ್ಲಾಹನ ಸಂದೇಶವಾಹಕರೇ, ತಿಳಿಸಿಕೊಡಿ." ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ವಿಷಯದ, ಅಂದರೆ ಇಸ್ಲಾಂ ಧರ್ಮದ ಶಿರೋಭಾಗವು ಎರಡು ಸಾಕ್ಷ್ಯ ವಚನಗಳಾಗಿವೆ. ಇದನ್ನು ಉಚ್ಛರಿಸುವ ಮೂಲಕ ಒಬ್ಬ ವ್ಯಕ್ತಿ ತನ್ನ ಧರ್ಮಕ್ಕೆ ಅಡಿಪಾಯ ಹಾಕುತ್ತಾನೆ. ಅದರ ಸ್ತಂಭಗಳು ನಮಾಝ್. ಆಧಾರಸ್ತಂಭಗಳಿಲ್ಲದೆ ಕಟ್ಟಡ ಇರುವುದಿಲ್ಲ ಎಂಬಂತೆ ನಮಾಝ್ ಮಾಡದವನಲ್ಲಿ ಇಸ್ಲಾಂ ಇರುವುದಿಲ್ಲ. ನಮಾಝ್ ಮಾಡುವವನು ತನ್ನ ಧರ್ಮವನ್ನು ಬಲಪಡಿಸುತ್ತಾನೆ ಮತ್ತು ಎತ್ತರಿಸುತ್ತಾನೆ. ಅದರ ಶಿಖರಾಗ್ರ ಮತ್ತು ಉಚ್ಛಸ್ಥಿತಿಯು ಜಿಹಾದ್ ಹಾಗೂ ಅಲ್ಲಾಹನ ವಚನವು ಅತ್ಯುನ್ನತವಾಗುವುದಕ್ಕಾಗಿ ಧರ್ಮದ ಶತ್ರುಗಳೊಂದಿಗೆ ಹೋರಾಡುವುದಾಗಿದೆ." ನಂತರ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಈಗಾಗಲೇ ತಿಳಿಸಿದ್ದನ್ನು ನಿಯಂತ್ರಿಸುವ ಮತ್ತು ನಿಖರಗೊಳಿಸುವ ಒಂದು ವಿಷಯದ ಬಗ್ಗೆ ನಾನು ನಿನಗೆ ತಿಳಿಸಿಕೊಡಲೇ?" ನಂತರ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಮ್ಮ ನಾಲಗೆಯನ್ನು ಹಿಡಿದು ಹೇಳಿದರು: "ಇದಕ್ಕೆ ತಡೆ ಹಾಕು ಮತ್ತು ನಿನಗೆ ಸಂಬಂಧವಿಲ್ಲದ ಯಾವುದರ ಬಗ್ಗೆಯೂ ಮಾತನಾಡಬೇಡ." ಮುಆದ್ ಕೇಳಿದರು: "ನಾವು ಮಾತನಾಡುವ ಎಲ್ಲಾ ವಿಷಯಗಳಿಗಾಗಿಯೂ ಅಲ್ಲಾಹು ನಮ್ಮನ್ನು ಹಿಡಿದು ವಿಚಾರಣೆ ಮಾಡಿ ಶಿಕ್ಷಿಸುತ್ತಾನೆಯೇ?" ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ನಿನ್ನ ತಾಯಿ ನಿನ್ನನ್ನು ಕಳೆದುಕೊಳ್ಳಲಿ." ಇದು ಮುಆದ್ ರಿಗೆ ವಿರುದ್ಧವಾಗಿರುವ ಪ್ರಾರ್ಥನೆಯಲ್ಲ. ಬದಲಿಗೆ, ಇದು ಪ್ರಾಮುಖ್ಯತೆಯಿರುವ ಮತ್ತು ತಿಳಿದುಕೊಳ್ಳುವುದು ಅತ್ಯಗತ್ಯವಾಗಿರುವ ವಿಷಯಕ್ಕೆ ಗಮನವನ್ನು ಸೆಳೆಯುವುದಕ್ಕಾಗಿ ಅರಬ್ಬರು ಬಳಸುವ ಒಂದು ಪದಪ್ರಯೋಗವಾಗಿದೆ. ನಂತರ ಅವರು ಹೇಳಿದರು: "ಮನುಷ್ಯರನ್ನು ಅವರ ಮುಖದ ಮೇಲೆ ನರಕದಲ್ಲಿ ಬೀಳಿಸುವುದು ಅವರ ನಾಲಗೆಯ ಕೊಯ್ಲುಗಳಾದ ಸತ್ಯನಿಷೇಧ, ಸುಳ್ಳಾರೋಪ, ಬೈಗುಳ, ಪರದೂಷಣೆ, ಚಾಡಿಮಾತು, ಆಪಾದನೆ ಇತ್ಯಾದಿಗಳಲ್ಲದೆ ಬೇರೇನಾದರೂ ಆಗಿವೆಯೇ?"فوائد الحديث
ಜ್ಞಾನವನ್ನು ಗಳಿಸಲು ಸಹಾಬಿಗಳಿಗಿದ್ದ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ಉತ್ಸಾಹವನ್ನು ತಿಳಿಸಲಾಗಿದೆ. ಈ ಕಾರಣದಿಂದಲೇ ಅವರು ಪ್ರವಾದಿಯವರೊಡನೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೆಚ್ಚು ಹೆಚ್ಚಾಗಿ ಪ್ರಶ್ನೆ ಕೇಳುತ್ತಿದ್ದರು.
ಸಹಾಬಿಗಳು (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ಧರ್ಮವನ್ನು ಚೆನ್ನಾಗಿ ಅರ್ಥಮಾಡಿಕೊಂಡಿದ್ದರು. ಏಕೆಂದರೆ, ಸ್ವರ್ಗವನ್ನು ಪ್ರವೇಶಿಸಲು ಕರ್ಮಗಳೇ ಕಾರಣವೆಂದು ಅವರು ತಿಳಿದಿದ್ದರು.
ಮುಆದ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ಕೇಳಿದ ಪ್ರಶ್ನೆ ಬಹಳ ಗಂಭೀರ ಪ್ರಶ್ನೆಯಾಗಿತ್ತು. ಏಕೆಂದರೆ, ವಾಸ್ತವವಾಗಿ ಅದು ಜೀವನ ಮತ್ತು ಅಸ್ತಿತ್ವದ ರಹಸ್ಯವಾಗಿದೆ. ಏಕೆಂದರೆ, ಈ ಜಗತ್ತಿನಲ್ಲಿ ಅಸ್ತಿತ್ವದಲ್ಲಿರುವ ಮನುಷ್ಯರು ಮತ್ತು ಜಿನ್ನ್ಗಳ ಪರಮೋಚ್ಛ ಗುರಿಯು ಸ್ವರ್ಗ ಅಥವಾ ನರಕವಾಗಿದೆ. ಆದ್ದರಿಂದ ಈ ಪ್ರಶ್ನೆಯು ಬಹಳ ಗಂಭೀರವಾಗಿದೆ.
ಸ್ವರ್ಗ ಪ್ರವೇಶವು ಇಸ್ಲಾಂ ಧರ್ಮದ ಐದು ಸ್ತಂಭಗಳ ಪೂರ್ತೀಕರಣವನ್ನು ಅವಲಂಬಿಸಿಕೊಂಡಿದೆ. ಅವು: ಎರಡು ಸಾಕ್ಷ್ಯವಚನಗಳು, ನಮಾಝ್, ಝಕಾತ್, ಉಪವಾಸ ಮತ್ತು ಹಜ್ಜ್.
ಧರ್ಮದ ಶಿರೋಭಾಗವು, ಕಾರ್ಯಗಳಲ್ಲಿ ಅತ್ಯಮೂಲ್ಯವಾದುದು ಮತ್ತು ಕರ್ತವ್ಯಗಳಲ್ಲಿ ಅತ್ಯುನ್ನತವಾದುದು ಅಲ್ಲಾಹನನ್ನು ಮಾತ್ರ ಆರಾಧಿಸುವ ಮೂಲಕ ಮತ್ತು ಅವನೊಂದಿಗೆ ಏನನ್ನೂ ಸಹಭಾಗಿಯಾಗಿ ಮಾಡದಿರುವ ಮೂಲಕ ಆರಾಧನೆಯಲ್ಲಿ ಅಲ್ಲಾಹನನ್ನು ಏಕೈಕಗೊಳಿಸುವುದಾಗಿದೆ (ತೌಹೀದ್).
ಸತ್ಕರ್ಮಗಳನ್ನು ಹೆಚ್ಚಿಸಲು ಮತ್ತು ಪಾಪಗಳಿಗೆ ಕ್ಷಮೆ ದೊರೆಯಲು ಅಲ್ಲಾಹು ತನ್ನ ದಾಸರಿಗೆ ಒಳಿತಿನ ಬಾಗಿಲುಗಳನ್ನು ತೆರೆದುಕೊಟ್ಟಿರುವುದು ಅವನ ಕರುಣೆಯನ್ನು ಸೂಚಿಸುತ್ತದೆ.
ಕಡ್ಡಾಯ ಕಾರ್ಯಗಳನ್ನು ನಿರ್ವಹಿಸಿದ ಬಳಿಕ ಐಚ್ಛಿಕ ಕಾರ್ಯಗಳ ಮೂಲಕ ಅಲ್ಲಾಹನಿಗೆ ಸಮೀಪವಾಗುವುದರ ಶ್ರೇಷ್ಠತೆಯನ್ನು ತಿಳಿಸಲಾಗಿದೆ.
ಇಸ್ಲಾಂ ಧರ್ಮದಲ್ಲಿ ನಮಾಝ್ ಡೇರೆಯನ್ನು ನಿಲ್ಲಿಸಲು ಬಳಸುವ ಸ್ತಂಭದ ಸ್ಥಾನವನ್ನು ಹೊಂದಿದೆ. ಸ್ತಂಭ ಬಿದ್ದರೆ ಡೇರೆ ಕೂಡ ಬೀಳುವಂತೆ ನಮಾಝ್ ಇಲ್ಲದಿದ್ದರೆ ಇಸ್ಲಾಂ ಕೂಡ ಇರುವುದಿಲ್ಲ.
ಮನುಷ್ಯನಿಗೆ ಧಾರ್ಮಿಕವಾಗಿ ತೊಂದರೆ ನೀಡುವ ವಿಷಯಗಳಿಂದ ನಾಲಗೆಯನ್ನು ಹದ್ದುಬಸ್ತಿನಲ್ಲಿಡುವುದು ಕಡ್ಡಾಯವಾಗಿದೆ.
ನಾಲಿಗೆಯನ್ನು ನಿಯಂತ್ರಣದಲ್ಲಿ ಮತ್ತು ಹದ್ದುಬಸ್ತಿನಲ್ಲಿಡುವುದು ಎಲ್ಲಾ ಒಳಿತುಗಳ ಮೂಲವಾಗಿದೆ.
