ಖಂಡಿತವಾಗಿಯೂ ಅಲ್ಲಾಹು 'ಹಸನಾತ್' (ಪುಣ್ಯಗಳು/ಒಳಿತುಗಳು) ಮತ್ತು 'ಸಯ್ಯಿಆತ್' (ಪಾಪಗಳು/ಕೆಡುಕುಗಳು) ಗಳನ್ನು ಬರೆದಿದ್ದಾನೆ. ನಂತರ…

ಖಂಡಿತವಾಗಿಯೂ ಅಲ್ಲಾಹು 'ಹಸನಾತ್' (ಪುಣ್ಯಗಳು/ಒಳಿತುಗಳು) ಮತ್ತು 'ಸಯ್ಯಿಆತ್' (ಪಾಪಗಳು/ಕೆಡುಕುಗಳು) ಗಳನ್ನು ಬರೆದಿದ್ದಾನೆ. ನಂತರ ಅದನ್ನು ಸ್ಪಷ್ಟಪಡಿಸಿದ್ದಾನೆ

ಇಬ್ನ್ ಅಬ್ಬಾಸ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಸರ್ವೋನ್ನತನಾದ ತಮ್ಮ ಪರಿಪಾಲಕನಿಂದ (ಅಲ್ಲಾಹನಿಂದ) ವರದಿ ಮಾಡುತ್ತಾ ಹೇಳಿದರು: "ಖಂಡಿತವಾಗಿಯೂ ಅಲ್ಲಾಹು 'ಹಸನಾತ್' (ಪುಣ್ಯಗಳು/ಒಳಿತುಗಳು) ಮತ್ತು 'ಸಯ್ಯಿಆತ್' (ಪಾಪಗಳು/ಕೆಡುಕುಗಳು) ಗಳನ್ನು ಬರೆದಿದ್ದಾನೆ. ನಂತರ ಅದನ್ನು ಸ್ಪಷ್ಟಪಡಿಸಿದ್ದಾನೆ. ಆದ್ದರಿಂದ, ಯಾರು ಒಂದು ಪುಣ್ಯವನ್ನು ಮಾಡಲು ಬಯಸಿ, ನಂತರ ಅದನ್ನು ಮಾಡದಿದ್ದರೆ, ಅಲ್ಲಾಹು ಅದನ್ನು ತನ್ನ ಬಳಿ ಒಂದು ಪರಿಪೂರ್ಣ ಪುಣ್ಯವೆಂದು ಬರೆಯುತ್ತಾನೆ. ಒಂದು ವೇಳೆ ಅವನು ಅದನ್ನು ಬಯಸಿ, ಅದನ್ನು ಮಾಡಿದರೆ, ಅಲ್ಲಾಹು ಅದನ್ನು ತನ್ನ ಬಳಿ ಹತ್ತು ಪುಣ್ಯಗಳಿಂದ ಏಳುನೂರು ಪಟ್ಟುಗಳವರೆಗೆ, ಅನೇಕ ಪಟ್ಟುಗಳವರೆಗೆ (ಹೆಚ್ಚಿಸಿ) ಬರೆಯುತ್ತಾನೆ. ಇನ್ನು ಅವನು ಒಂದು ಪಾಪವನ್ನು ಮಾಡಲು ಬಯಸಿ, ನಂತರ ಅದನ್ನು ಮಾಡದಿದ್ದರೆ, ಅಲ್ಲಾಹು ಅದನ್ನು ತನ್ನ ಬಳಿ ಒಂದು ಪರಿಪೂರ್ಣ ಪುಣ್ಯವೆಂದು ಬರೆಯುತ್ತಾನೆ. ಒಂದು ವೇಳೆ ಅವನು ಅದನ್ನು ಬಯಸಿ, ಅದನ್ನು ಮಾಡಿದರೆ, ಅಲ್ಲಾಹು ಅದನ್ನು ಒಂದೇ ಪಾಪವೆಂದು ಬರೆಯುತ್ತಾನೆ".

[صحيح] [رواه البخاري ومسلم في صحيحيهما بهذه الحروف]

الشرح

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ವಿವರಿಸುವುದೇನೆಂದರೆ, ಅಲ್ಲಾಹು ಒಳಿತು ಮತ್ತು ಕೆಡುಕುಗಳನ್ನು ನಿರ್ಣಯಿಸಿದ ನಂತರ ಅವುಗಳನ್ನು ದಾಖಲಿಸುವ ವಿಧಾನವನ್ನು ದೇವದೂತರಿಗೆ ಹೀಗೆ ವಿವರಿಸಿಕೊಟ್ಟನು: ಒಬ್ಬ ವ್ಯಕ್ತಿ ಒಂದು ಒಳಿತನ್ನು ಮಾಡಲು ಉದ್ದೇಶಿಸಿ, ಮನಸ್ಸಿನಲ್ಲಿ ದೃಢವಾಗಿ ನಿರ್ಧರಿಸಿದರೆ ಅವನ ಹೆಸರಲ್ಲಿ ಒಂದು ಒಳಿತು ಮಾಡಿದ ಪುಣ್ಯವು ದಾಖಲಾಗುತ್ತದೆ. ಅವನು ಆ ಒಳಿತನ್ನು ಮಾಡದಿದ್ದರೂ ಸಹ. ಇನ್ನು ಅವನು ಅದನ್ನು ಮಾಡಿದರೆ ಅವನ ಹೆಸರಲ್ಲಿ ಹತ್ತರಿಂದ ತೊಡಗಿ ಏಳುನೂರರ ತನಕ ಒಳಿತುಗಳನ್ನು ಮಾಡಿದ ಪುಣ್ಯಗಳು ದಾಖಲಾಗುತ್ತವೆ. ಈ ಹೆಚ್ಚುವರಿಯು ಅವನ ಹೃದಯದಲ್ಲಿರುವ ನಿಷ್ಕಳಂಕತೆ ಮತ್ತು ಆ ಒಳಿತಿನಿಂದ ಇತರ ಜನರಿಗಿರುವ ಪ್ರಯೋಜನಗಳನ್ನು ಅವಲಂಬಿಸಿಕೊಂಡಿದೆ. ಒಬ್ಬ ವ್ಯಕ್ತಿ ಒಂದು ಕೆಡುಕನ್ನು ಮಾಡಲು ಉದ್ದೇಶಿಸಿ, ಮನಸ್ಸಿನಲ್ಲಿ ದೃಢವಾಗಿ ನಿರ್ಧರಿಸಿ, ನಂತರ ಅಲ್ಲಾಹನ ಭಯದಿಂದ ಅದನ್ನು ಮಾಡದಿದ್ದರೆ, ಅವನ ಹೆಸರಲ್ಲಿ ಒಂದು ಒಳಿತು ಮಾಡಿದ ಪುಣ್ಯವು ದಾಖಲಾಗುತ್ತದೆ. ಸಂದರ್ಭಗಳು ಕೈತಪ್ಪಿದ್ದರಿಂದ, ಅಥವಾ ಇತರ ಕಾರ್ಯಗಳಲ್ಲಿ ಮಗ್ನನಾಗಿದ್ದರಿಂದ ಅವನು ಆ ಕೆಡುಕನ್ನು ಮಾಡದಿದ್ದರೆ ಅವನಿಗೆ ಈ ಪುಣ್ಯ ಸಿಗುವುದಿಲ್ಲ. ಆದರೆ, ಅದನ್ನು ಮಾಡಲು ಸಾಧ್ಯವಾಗದೆ ಅವನು ಅದನ್ನು ತೊರೆದರೆ, ಅವನ ಉದ್ದೇಶಕ್ಕೆ ಅನುಗುಣವಾಗಿ ಅವನಿಗೆ ಪ್ರತಿಫಲ ನೀಡಲಾಗುತ್ತದೆ. ಇನ್ನು ಅವನು ಆ ಕೆಡುಕನ್ನು ಮಾಡಿಯೇ ಬಿಟ್ಟರೆ ಅವನ ಹೆಸರಲ್ಲಿ ಕೇವಲ ಒಂದು ಕೆಡುಕು ಮಾತ್ರ ದಾಖಲಾಗುತ್ತದೆ.

فوائد الحديث

ಒಳಿತಿನ ಕರ್ಮಗಳಿಗೆ ಹಲವು ಪಟ್ಟು ಪ್ರತಿಫಲಗಳನ್ನು ನೀಡುವುದು ಮತ್ತು ಕೆಡುಕಿನ ಕರ್ಮಗಳಿಗೆ ಹಲವು ಪಟ್ಟು ಶಿಕ್ಷೆಗಳನ್ನು ನೀಡದಿರುವುದು ಅಲ್ಲಾಹು ಈ ಸಮುದಾಯದ ಮೇಲೆ ತೋರಿದ ಮಹಾ ಅನುಗ್ರಹವೆಂದು ಈ ಹದೀಸ್ ವಿವರಿಸುತ್ತದೆ.

ಕರ್ಮಗಳಲ್ಲಿ ಮತ್ತು ಅದರ ಪರಿಣಾಮಗಳಲ್ಲಿ ಉದ್ದೇಶವು (ನಿಯ್ಯತ್) ಹೊಂದಿರುವ ಪ್ರಮುಖ ಪಾತ್ರವನ್ನು ಈ ಹದೀಸ್ ತಿಳಿಸುತ್ತದೆ.

ಒಳಿತನ್ನು ಮಾಡಲು ಉದ್ದೇಶಿಸಿ ನಂತರ ಅದನ್ನು ಮಾಡದಿದ್ದರೂ ಅವನ ಹೆಸರಲ್ಲಿ ಒಂದು ಒಳಿತು ಮಾಡಿದ ಪುಣ್ಯವನ್ನು ದಾಖಲಿಸುವುದು ಸರ್ವಶಕ್ತನಾದ ಅಲ್ಲಾಹನ ಅನುಕಂಪ ಮತ್ತು ಉದಾರತೆಯೆಂದು ಈ ಹದೀಸ್ ತಿಳಿಸುತ್ತದೆ.