ಹೀಗೆ ಹೇಳು: 'ಅಲ್ಲಾಹುಮ್ಮಕ್‌ಫಿನೀ ಬಿ ಹಲಾಲಿಕ ಅನ್ ಹರಾಮಿಕ್, ವ ಅಗ್ನಿನೀ ಬಿ ಫದ್ಲಿಕ ಅಮ್ಮನ್ ಸಿವಾಕ್' ". (ಓ ಅಲ್ಲಾಹನೇ, ನೀನು…

ಹೀಗೆ ಹೇಳು: 'ಅಲ್ಲಾಹುಮ್ಮಕ್‌ಫಿನೀ ಬಿ ಹಲಾಲಿಕ ಅನ್ ಹರಾಮಿಕ್, ವ ಅಗ್ನಿನೀ ಬಿ ಫದ್ಲಿಕ ಅಮ್ಮನ್ ಸಿವಾಕ್' ". (ಓ ಅಲ್ಲಾಹನೇ, ನೀನು ನಿಷಿದ್ಧಗೊಳಿಸಿದ ವಿಷಯಗಳಿಂದ ನನ್ನನ್ನು ದೂರವಿಟ್ಟು ನೀನು ಅನುಮತಿಸಿದ ವಿಷಯಗಳು ನನಗೆ ಸಾಕಾಗುವಂತೆ ಮಾಡು. ಮತ್ತು ಇತರರ ಅನುಗ್ರಹವನ್ನು ಅವಲಂಬಿಸುವುದಕ್ಕೆ ಹೊರತಾಗಿ ನಿನ್ನ ಅನುಗ್ರಹವನ್ನು ಅವಲಂಬಿಸುವಂತೆ ಮಾಡು)

ಅಲೀ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಒಬ್ಬ 'ಮುಕಾತಬ್' (ಒಪ್ಪಂದದ ಮೂಲಕ ವಿಮೋಚನೆ ಕೋರುತ್ತಿರುವ ಗುಲಾಮ) ಅವರ ಬಳಿಗೆ ಬಂದನು. ಅವನು ಹೇಳಿದನು: "ನನ್ನ ವಿಮೋಚನೆಯ ಒಪ್ಪಂದದ ಮೊತ್ತವನ್ನು ಪಾವತಿಸಲು ನಾನು ಅಸಮರ್ಥನಾಗಿದ್ದೇನೆ. ಆದ್ದರಿಂದ ನನಗೆ ಸಹಾಯ ಮಾಡಿರಿ". ಅವರು (ಅಲೀ) ಹೇಳಿದರು: "ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನನಗೆ ಕಲಿಸಿದ ಕೆಲವು ವಚನಗಳನ್ನು ನಾನು ನಿನಗೆ ಕಲಿಸಲೇ? ನಿನ್ನ ಮೇಲೆ 'ಸೀರ್' ಪರ್ವತದಷ್ಟು ಸಾಲವಿದ್ದರೂ, ಅಲ್ಲಾಹು ಅದನ್ನು ನಿನ್ನ ಪರವಾಗಿ ತೀರಿಸುತ್ತಾನೆ". ಅವರು (ಅಲೀ) ಹೇಳಿದರು: "ಹೀಗೆ ಹೇಳು: 'ಅಲ್ಲಾಹುಮ್ಮಕ್‌ಫಿನೀ ಬಿ ಹಲಾಲಿಕ ಅನ್ ಹರಾಮಿಕ್, ವ ಅಗ್ನಿನೀ ಬಿ ಫದ್ಲಿಕ ಅಮ್ಮನ್ ಸಿವಾಕ್' ". (ಓ ಅಲ್ಲಾಹನೇ, ನೀನು ನಿಷಿದ್ಧಗೊಳಿಸಿದ ವಿಷಯಗಳಿಂದ ನನ್ನನ್ನು ದೂರವಿಟ್ಟು ನೀನು ಅನುಮತಿಸಿದ ವಿಷಯಗಳು ನನಗೆ ಸಾಕಾಗುವಂತೆ ಮಾಡು. ಮತ್ತು ಇತರರ ಅನುಗ್ರಹವನ್ನು ಅವಲಂಬಿಸುವುದಕ್ಕೆ ಹೊರತಾಗಿ ನಿನ್ನ ಅನುಗ್ರಹವನ್ನು ಅವಲಂಬಿಸುವಂತೆ ಮಾಡು).

[حسن] [رواه الترمذي]

الشرح

ಸತ್ಯವಿಶ್ವಾಸಿಗಳ ನೇತಾರರಾದ ಅಲೀ ಇಬ್ನ್ ಅಬೀ ತಾಲಿಬ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರವರ ಬಳಿಗೆ ಒಬ್ಬ ಗುಲಾಮ ವ್ಯಕ್ತಿ ಬಂದನು. ಅವನು ತನ್ನ ವಿಮೋಚನೆಗಾಗಿ ತನ್ನನ್ನು ತಾನು ಖರೀದಿಸಲು ತನ್ನ ಯಜಮಾನನೊಂದಿಗೆ ಒಪ್ಪಂದ ಮಾಡಿಕೊಂಡಿದ್ದನು. ಆದರೆ ಅವನ ಬಳಿ ಹಣವಿರಲಿಲ್ಲ. ಅವನು ಹೇಳಿದನು: "ನನ್ನ ಮೇಲಿರುವ ಸಾಲವನ್ನು ತೀರಿಸಲು ನಾನು ಅಸಮರ್ಥನಾಗಿದ್ದೇನೆ. ಆದ್ದರಿಂದ ಹಣದಿಂದ, ಅಥವಾ ಬೋಧನೆ ಮತ್ತು ಮಾರ್ಗದರ್ಶನದಿಂದ ಅದನ್ನು ತೀರಿಸಲು ನನಗೆ ಸಹಾಯ ಮಾಡಿರಿ". ಆಗ ಸತ್ಯವಿಶ್ವಾಸಿಗಳ ನೇತಾರರು (ಅಲೀ) ಹೇಳಿದರು: "ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನನಗೆ ಕಲಿಸಿದ ಕೆಲವು ವಚನಗಳನ್ನು ನಾನು ನಿನಗೆ ಕಲಿಸಲೇ? ನಿನ್ನ ಮೇಲೆ ತಯ್ ಬುಡಕಟ್ಟಿಗೆ ಸೇರಿದ 'ಸೀರ್' ಎಂದು ಕರೆಯುವ ಪರ್ವತದಷ್ಟು ಸಾಲವಿದ್ದರೂ, ಅಲ್ಲಾಹು ಅದನ್ನು ನಿನ್ನ ಪರವಾಗಿ ಅದರ ಹಕ್ಕುದಾರನಿಗೆ ತೀರಿಸುತ್ತಾನೆ, ಮತ್ತು ಅದರ ಅವಮಾನದಿಂದ ನಿನ್ನನ್ನು ಪಾರುಮಾಡುತ್ತಾನೆ. ನಂತರ ಅವರು ಹೇಳಿದರು: ಹೀಗೆ ಹೇಳು: “ಅಲ್ಲಾಹುಮ್ಮಕ್‌ಫಿನೀ” (ಓ ಅಲ್ಲಾಹನೇ, ನನಗೆ ಸಾಕಾಗುವಂತೆ ಮಾಡು). ಅಂದರೆ, ನನ್ನನ್ನು ತಿರುಗಿಸು ಮತ್ತು ನನ್ನನ್ನು ದೂರವಿಡು, “ಬಿಹಲಾಲಿಕ” (ನೀನು ಅನುಮತಿಸಿದ ವಿಷಯಗಳ ಮೂಲಕ) ಅಂದರೆ, ಅದರಲ್ಲೇ ತೃಪ್ತಿಪಡುವಂತೆ ಮಾಡಿ, “ಅನ್ ಹರಾಮಿಕ” (ನೀನು ನಿಷಿದ್ಧಗೊಳಿಸಿದ ವಿಷಯಗಳಲ್ಲಿ) ಬೀಳುವುದರಿಂದ. “ವಅಗ್ನಿನೀ” (ಮತ್ತು ನನ್ನನ್ನು ಸ್ವಾವಲಂಬಿಯನ್ನಾಗಿ ಮಾಡು) ಅಂದರೆ, ನನಗೆ ಸಾಕಾಗುವಂತೆ ಮಾಡು, “ಬಿಫದ್ಲಿಕ” (ನಿನ್ನ ಅನುಗ್ರಹವನ್ನು) ಮತ್ತು ನಿನ್ನ ಉದಾರತೆಯನ್ನು, “ಅಮ್ಮನ್ ಸಿವಾಕ” (ನಿನ್ನನ್ನು ಹೊರತುಪಡಿಸಿ) ಇತರರ ಮುಂದೆ ಕೈಯೊಡ್ಡುವುದರಿಂದ.

فوائد الحديث

ಜ್ಞಾನಿಗಳು ಮತ್ತು ಧರ್ಮದ ಬಗ್ಗೆ ತಿಳುವಳಿಕೆಯಿರುವ ಜನರೊಂದಿಗೆ ಸಮಾಲೋಚಿಸಬೇಕೆಂದು ಹಾಗೂ ಅವರ ಅಭಿಪ್ರಾಯವನ್ನು ಕೇಳಬೇಕೆಂದು ತಿಳಿಸಲಾಗಿದೆ.

ಜನರು ಎದುರಿಸುವ ಸಮಸ್ಯೆಗಳಿಗೆ ಪರಿಹಾರ ನೀಡುವ ವಿಷಯಗಳ ಕಡೆಗೆ ಮಾರ್ಗದರ್ಶನ ನೀಡುವುದು ಜ್ಞಾನಿಗಳ ಮತ್ತು ಅಲ್ಲಾಹನ ಕಡೆಗೆ ಆಹ್ವಾನಿಸುವವರ ಕರ್ತವ್ಯವಾಗಿದೆ.

ವಿಮೋಚನೆ ಕೋರುವ ಗುಲಾಮರಿಗೆ ಸಹಾಯ ಮಾಡಲು ಪ್ರೋತ್ಸಾಹಿಸಲಾಗಿದೆ.

ಈ ಪ್ರಾರ್ಥನೆಯನ್ನು ಕಲಿಯಲು ಮತ್ತು ಅದರ ಮೂಲಕ ಅಲ್ಲಾಹನಲ್ಲಿ ಬೇಡಲು‌ ಪ್ರೋತ್ಸಾಹಿಸಲಾಗಿದೆ.

ಧರ್ಮಸಮ್ಮತವಾದ ಸಂಪತ್ತು — ಅದು ಕಡಿಮೆಯಾಗಿದ್ದರೂ ಸಹ — ನಿಷಿದ್ಧವಾದ ಸಂಪತ್ತಿಗಿಂತ — ಅದು ಎಷ್ಟೇ ಹೆಚ್ಚಾಗಿದ್ದರೂ ಸಹ — ಅದಕ್ಕಿಂತ ಉತ್ತಮವಾಗಿದೆ.

ಸೃಷ್ಟಿಗಳ ಮುಂದೆ ಕೈಯೊಡ್ಡುವುದನ್ನು ತಪ್ಪಿಸಿ ಅಲ್ಲಾಹನನ್ನು ಅವಲಂಬಿಸಬೇಕೆಂದು ತಿಳಿಸಲಾಗಿದೆ.

ಬೇಡುವವರಿಗೆ ನೀಡಲು ನಿಮ್ಮ ಬಳಿ ಏನೂ ಇಲ್ಲದಿದ್ದಾಗ ಅವರಿಗೆ ಉತ್ತಮ ರೀತಿಯಲ್ಲಿ ಉತ್ತರ ನೀಡುವುದನ್ನು ಪ್ರೋತ್ಸಾಹಿಸಲಾಗಿದೆ.

التصنيفات

Reported Supplications