ಖಂಡಿತವಾಗಿಯೂ ಕರ್ಮಗಳು ಕೇವಲ ನಿಯ್ಯತ್‌ಗಳ (ಉದ್ದೇಶಗಳ) ಮೇಲೆ ಅವಲಂಬಿತವಾಗಿವೆ. ಖಂಡಿತವಾಗಿಯೂ ಪ್ರತಿಯೊಬ್ಬ ವ್ಯಕ್ತಿಗೂ ಅವನು…

ಖಂಡಿತವಾಗಿಯೂ ಕರ್ಮಗಳು ಕೇವಲ ನಿಯ್ಯತ್‌ಗಳ (ಉದ್ದೇಶಗಳ) ಮೇಲೆ ಅವಲಂಬಿತವಾಗಿವೆ. ಖಂಡಿತವಾಗಿಯೂ ಪ್ರತಿಯೊಬ್ಬ ವ್ಯಕ್ತಿಗೂ ಅವನು ಉದ್ದೇಶಿಸಿದ್ದು ಮಾತ್ರ ಸಿಗುತ್ತದೆ

ಅಮೀರುಲ್-ಮುಅ್‌ಮಿನೀನ್ (ಸತ್ಯವಿಶ್ವಾಸಿಗಳ ನಾಯಕ) ಅಬೂ ಹಫ್ಸ್ ಉಮರ್ ಇಬ್ನುಲ್-ಖತ್ತಾಬ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅವರು ಹೇಳಿದರು: ನಾನು ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೀಗೆ ಹೇಳುವುದನ್ನು ಕೇಳಿದ್ದೇನೆ: "ಖಂಡಿತವಾಗಿಯೂ ಕರ್ಮಗಳು ಕೇವಲ ನಿಯ್ಯತ್‌ಗಳ (ಉದ್ದೇಶಗಳ) ಮೇಲೆ ಅವಲಂಬಿತವಾಗಿವೆ. ಖಂಡಿತವಾಗಿಯೂ ಪ್ರತಿಯೊಬ್ಬ ವ್ಯಕ್ತಿಗೂ ಅವನು ಉದ್ದೇಶಿಸಿದ್ದು ಮಾತ್ರ ಸಿಗುತ್ತದೆ. ಆದ್ದರಿಂದ, ಯಾರ ಹಿಜ್ರತ್ (ವಲಸೆ) ಅಲ್ಲಾಹು ಮತ್ತು ಅವನ ಸಂದೇಶವಾಹಕರಿಗಾಗಿ ಆಗಿದೆಯೋ, ಅವನ ಹಿಜ್ರತ್ ಅಲ್ಲಾಹು ಮತ್ತು ಅವನ ಸಂದೇಶವಾಹಕರಿಗಾಗಿಯೇ (ಪರಿಗಣಿಸಲಾಗುತ್ತದೆ). ಯಾರ ಹಿಜ್ರತ್ ಅವನು ಗಳಿಸಬೇಕೆಂದಿರುವ ಲೌಕಿಕ ಪ್ರಯೋಜನಕ್ಕಾಗಿ, ಅಥವಾ ಅವನು ವಿವಾಹವಾಗಬೇಕೆಂದಿರುವ ಮಹಿಳೆಗಾಗಿ ಆಗಿದೆಯೋ, ಅವನ ಹಿಜ್ರತ್ ಅವನು ಯಾವುದಕ್ಕಾಗಿ ವಲಸೆ ಹೋದನೋ ಅದಕ್ಕಾಗಿಯೇ (ಪರಿಗಣಿಸಲಾಗುತ್ತದೆ)".

[صحيح] [رواه إماما المحدثين أبو عبد الله محمد بن إسماعيل بن إبراهيم بن المغيرة بن بردزبه البخاري وأبو الحسين مسلم بن الحجاج بن مسلم القشيري النيسابوري في صحيحيهما اللذين هما أصح الكتب المصنفة]

الشرح

ಪ್ರತಿಯೊಂದು ಕರ್ಮವನ್ನೂ ಉದ್ದೇಶಗಳ ಆಧಾರದ ಮೇಲೆ ಪರಿಗಣಿಸಲಾಗುತ್ತದೆಯೆಂದು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ವಿವರಿಸುತ್ತಾರೆ. ಈ ನಿಯಮವು ಆರಾಧನೆಗಳು, ವ್ಯವಹಾರಗಳು ಮುಂತಾದ ಎಲ್ಲಾ ಕರ್ಮಗಳಿಗೂ ಸಮಾನವಾಗಿ ಅನ್ವಯಿಸುತ್ತದೆ. ಯಾರಾದರೂ ಒಂದು ಕರ್ಮದ ಮೂಲಕ ಲಾಭವನ್ನು ಉದ್ದೇಶಿಸಿದರೆ ಅವನಿಗೆ ಆ ಲಾಭವು ಸಿಗುತ್ತದೆಯೇ ವಿನಾ ಯಾವುದೇ ಪ್ರತಿಫಲ ಸಿಗುವುದಿಲ್ಲ. ಆದರೆ ಯಾರಾದರೂ ಒಂದು ಕರ್ಮದ ಮೂಲಕ ಅಲ್ಲಾಹನ ಸಾಮೀಪ್ಯವನ್ನು ಉದ್ದೇಶಿಸಿದರೆ ಅವನು ಆ ಕರ್ಮಕ್ಕೆ ಪುಣ್ಯ ಮತ್ತು ಪ್ರತಿಫಲಗಳನ್ನು ಪಡೆಯುತ್ತಾನೆ. ಅದು ತಿನ್ನುವುದು ಕುಡಿಯುವುದು ಮುಂತಾದ ರೂಢಿಯಾಗಿ ಮಾಡುವ ಕರ್ಮಗಳಾಗಿದ್ದರೂ ಸಹ. ನಂತರ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಉದ್ದೇಶವು ಬಾಹ್ಯವಾಗಿ ನೋಡುವಾಗ ಒಂದೇ ರೂಪದಲ್ಲಿದ್ದರೂ ಸಹ ಅದು ಒಳಗೊಂಡಿರುವ ಪರಿಣಾಮವನ್ನು ಒಂದು ಉದಾಹರಣೆಯ ಮೂಲಕ ವಿವರಿಸುತ್ತಾರೆ. ಅವರು ವಿವರಿಸುವಂತೆ, ಒಬ್ಬ ವ್ಯಕ್ತಿ ಅಲ್ಲಾಹನ ಸಂಪ್ರೀತಿಯನ್ನು ಉದ್ದೇಶಿಸಿ ತನ್ನ ಊರನ್ನು ತೊರೆದು ವಲಸೆ (ಹಿಜ್ರ) ಹೋದರೆ ಅದು ಧಾರ್ಮಿಕ ರೂಪದಲ್ಲಿರುವ ಸ್ವೀಕಾರಯೋಗ್ಯ ವಲಸೆಯಾಗಿದ್ದು ಅವನ ಉದ್ದೇಶದ ಪ್ರಾಮಾಣಿಕತೆಯಿಂದಾಗಿ ಪ್ರತಿಫಲಾರ್ಹವಾಗುತ್ತದೆ. ಆದರೆ ಒಬ್ಬ ವ್ಯಕ್ತಿ ತನ್ನ ವಲಸೆಯ (ಹಿಜ್ರ) ಮೂಲಕ ಹಣ ಸಂಪಾದಿಸುವುದು, ಸ್ಥಾನಮಾನವನ್ನು ಪಡೆಯುವುದು, ವ್ಯಾಪಾರ ಮಾಡುವುದು, ವಿವಾಹವಾಗುವುದು ಮುಂತಾದ ಭೌತಿಕ ಲಾಭವನ್ನು ಉದ್ದೇಶಿಸಿದರೆ, ಅವನು ತನ್ನ ವಲಸೆಯ ಮೂಲಕ ಅವನು ಉದ್ದೇಶಿಸಿದ ಲಾಭವನ್ನಲ್ಲದೆ ಬೇರೇನನ್ನೂ ಪಡೆಯುವುದಿಲ್ಲ. ಹಿಜ್ರ ಮಾಡಿದ್ದಕ್ಕಾಗಿ ಅವನಿಗೆ ಯಾವುದೇ ಪ್ರತಿಫಲ ಸಿಗುವುದಿಲ್ಲ.

فوائد الحديث

ಈ ಹದೀಸ್ ನಿಷ್ಕಳಂಕತೆಯನ್ನು ಪ್ರೋತ್ಸಾಹಿಸುತ್ತದೆ. ಏಕೆಂದರೆ ಅಲ್ಲಾಹು ಅವನ ಸಂಪ್ರೀತಿಗಾಗಿ ಮಾಡಿದ ಕರ್ಮದ ಹೊರತು ಇತರ ಯಾವುದೇ ಕರ್ಮವನ್ನು ಸ್ವೀಕರಿಸುವುದಿಲ್ಲ.

ಅಲ್ಲಾಹನ ಸಾಮೀಪ್ಯ ಪಡೆಯುವುದಕ್ಕಾಗಿ ಮಾಡಲಾಗುವ ಕರ್ಮಗಳನ್ನು (ಸತ್ಕರ್ಮಗಳನ್ನು) ಅಲ್ಲಾಹನ ಸಾಮೀಪ್ಯವನ್ನು ಉದ್ದೇಶಿಸದೆ ಕೇವಲ ರೂಢಿಯಾಗಿ (ಯಾಂತ್ರಿಕವಾಗಿ) ನಿರ್ವಹಿಸಿದರೆ, ಆ ಕರ್ಮಗಳು ಪ್ರತಿಫಲಾರ್ಹವಾಗುವುದಿಲ್ಲ.

ನಿಯ್ಯತ್ (ಉದ್ದೇಶ) ನ ಮೂಲಕ ಆರಾಧನೆಗಳನ್ನು ಪರಸ್ಪರ ಬೇರ್ಪಡಿಸಲಾಗುತ್ತದೆ ಮತ್ತು ಹಾಗೆಯೇ ಆರಾಧನೆಗಳನ್ನು (ದೈನಂದಿನ) ಅಭ್ಯಾಸಗಳಿಂದಲೂ ಬೇರ್ಪಡಿಸಲಾಗುತ್ತದೆ.