ಎರಡು ಅನುಗ್ರಹಗಳು. ಅವುಗಳ ವಿಷಯದಲ್ಲಿ ಅನೇಕ ಜನರು ನಷ್ಟದಲ್ಲಿದ್ದಾರೆ: ಆರೋಗ್ಯ ಮತ್ತು ಬಿಡುವು

ಎರಡು ಅನುಗ್ರಹಗಳು. ಅವುಗಳ ವಿಷಯದಲ್ಲಿ ಅನೇಕ ಜನರು ನಷ್ಟದಲ್ಲಿದ್ದಾರೆ: ಆರೋಗ್ಯ ಮತ್ತು ಬಿಡುವು

ಇಬ್ನ್ ಅಬ್ಬಾಸ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಎರಡು ಅನುಗ್ರಹಗಳು. ಅವುಗಳ ವಿಷಯದಲ್ಲಿ ಅನೇಕ ಜನರು ನಷ್ಟದಲ್ಲಿದ್ದಾರೆ: ಆರೋಗ್ಯ ಮತ್ತು ಬಿಡುವು."

[صحيح] [رواه البخاري]

الشرح

ಅಲ್ಲಾಹು ಮನುಷ್ಯನಿಗೆ ನೀಡಿದ ಎರಡು ಮಹಾ ಅನುಗ್ರಹಗಳ ಬಗ್ಗೆ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ತಿಳಿಸಿದ್ದಾರೆ. ಅನೇಕ ಜನರು ಅದರಲ್ಲಿ ನಷ್ಟವನ್ನು ಅನುಭವಿಸುತ್ತಾರೆ. ಏಕೆಂದರೆ ಅವರು ಅವುಗಳನ್ನು ಸರಿಯಾದ ರೀತಿಯಲ್ಲಿ ವಿನಿಯೋಗಿಸುವುದಿಲ್ಲ. ಒಬ್ಬ ವ್ಯಕ್ತಿಗೆ ಆರೋಗ್ಯ ಮತ್ತು ಬಿಡುವಿನ ಸಮಯವು ಒಟ್ಟಿಗೆ ದೊರೆತು, ಅವನು ಸತ್ಕರ್ಮಗಳನ್ನು ಮಾಡಲು ಸೋಮಾರಿತನ ತೋರಿದರೆ, ಅವನು ನಷ್ಟ ಅನುಭವಿಸುವವನು. ಇದು ಹೆಚ್ಚಿನ ಜನರ ಪರಿಸ್ಥಿತಿಯಾಗಿದೆ. ಆದರೆ ಅವರು ತಮ್ಮ ಬಿಡುವಿನ ಸಮಯ ಮತ್ತು ಆರೋಗ್ಯವನ್ನು ಅಲ್ಲಾಹನಿಗೆ ವಿಧೇಯತೆ ತೋರುವ ಸತ್ಕರ್ಮಗಳಲ್ಲಿ ವಿನಿಯೋಗಿಸಿದರೆ, ಅವರು ಲಾಭ ಗಳಿಸುತ್ತಾರೆ. ಏಕೆಂದರೆ ಇಹಲೋಕವು ಪರಲೋಕದ ಹೊಲವಾಗಿದೆ. ಇಲ್ಲಿ ಒಂದು ವ್ಯಾಪಾರವಿದ್ದು, ಅದರ ಲಾಭವು ಪರಲೋಕದಲ್ಲಿ ಕಾಣಿಸುತ್ತದೆ. ಬಿಡುವಿನ ನಂತರ ಕೆಲಸದ ಸಮಯವು ಬರುತ್ತದೆ ಮತ್ತು ಆರೋಗ್ಯದ ನಂತರ ಅನಾರೋಗ್ಯ ಕಾಡುತ್ತದೆ. ವೃದ್ಧಾಪ್ಯ ಒಂದೇ ಇದ್ದರೂ ಅದು ಸಾಕು.

فوائد الحديث

ಇಲ್ಲಿ ಧರ್ಮದಲ್ಲಿ ನಡೆಯುವವನನ್ನು ವ್ಯಾಪಾರಿಗೆ ಹೋಲಿಸಲಾಗಿದೆ ಮತ್ತು ಆರೋಗ್ಯ ಹಾಗೂ ಬಿಡುವಿನ ಸಮಯವನ್ನು ಬಂಡವಾಳಕ್ಕೆ ಹೋಲಿಸಲಾಗಿದೆ. ಯಾರು ತಮ್ಮ ಬಂಡವಾಳವನ್ನು ಚೆನ್ನಾಗಿ ಬಳಸುತ್ತಾರೋ ಅವರು ಲಾಭ ಪಡೆಯುತ್ತಾರೆ, ಮತ್ತು ಯಾರು ಅದನ್ನು ವ್ಯರ್ಥ ಮಾಡುತ್ತಾರೋ ಅವರು ನಷ್ಟ ಅನುಭವಿಸುತ್ತಾರೆ ಮತ್ತು ಪಶ್ಚಾತ್ತಾಪ ಪಡುತ್ತಾರೆ.

ಇಬ್ನುಲ್-ಖಾಝಿನ್ ಹೇಳುತ್ತಾರೆ: "ಅನುಗ್ರಹ ಎಂದರೆ ಮನುಷ್ಯನು ಆನಂದಿಸುವ ಮತ್ತು ಸವಿಯುವ ವಸ್ತುವಾಗಿದೆ. ಗಬ್ನ್ (ನಷ್ಟ) ಎಂದರೆ ಒಂದು ವಸ್ತುವನ್ನು ದುಪ್ಪಟ್ಟು ಬೆಲೆಗೆ ಖರೀದಿಸುವುದು ಅಥವಾ ಸರಿಯಲ್ಲದ ಬೆಲೆಗೆ ಮಾರಾಟ ಮಾಡುವುದು. ಯಾರು ಆರೋಗ್ಯವಾಗಿದ್ದು, ಜವಾಬ್ದಾರಿಯುತ ಕೆಲಸಗಳಿಂದ ಬಿಡುವು ಹೊಂದಿದ್ದೂ ತಮ್ಮ ಪರಲೋಕವನ್ನು ಸರಿಪಡಿಸಲು ಪ್ರಯತ್ನಿಸುವುದಿಲ್ಲವೋ ಅವರು ವ್ಯಾಪಾರದಲ್ಲಿ ನಷ್ಟ ಅನುಭವಿಸಿದವರಂತೆ.

ಆರೋಗ್ಯ ಮತ್ತು ಬಿಡುವಿನ ಸಮಯವನ್ನು, ಅವು ಕಳೆದುಹೋಗುವ ಮೊದಲೇ ಅಲ್ಲಾಹನಿಗೆ ಹತ್ತಿರಗೊಳಿಸುವ ಸತ್ಕರ್ಮಗಳಿಗಾಗಿ ಬಳಸಿಕೊಳ್ಳಲು ಕಾಳಜಿ ವಹಿಸಬೇಕೆಂದು ಹೇಳಲಾಗಿದೆ.

ಅಲ್ಲಾಹನ ಅನುಗ್ರಹಗಳಿಗೆ ಕೃತಜ್ಞತೆ ಸಲ್ಲಿಸುವುದು ಎಂದರೆ ಆ ಅನುಗ್ರಹಗಳನ್ನು ಅಲ್ಲಾಹನ ಅನುಸರಣೆಯಲ್ಲಿ ವಿನಿಯೋಗಿಸುವುದಾಗಿದೆ.

ಖಾಝಿ ಮತ್ತು ಅಬೂಬಕರ್ ಇಬ್ನುಲ್ ಅರಬಿ ಹೇಳುತ್ತಾರೆ: "ಅಲ್ಲಾಹನು ತನ್ನ ದಾಸನಿಗೆ ದಯಪಾಲಿಸಿದ ಮೊದಲ ಅನುಗ್ರಹ ಯಾವುದೆಂಬ ಬಗ್ಗೆ ಭಿನ್ನಾಭಿಪ್ರಾಯವಿದೆ. ಕೆಲವರು ಅದು ಸತ್ಯವಿಶ್ವಾಸ (ಈಮಾನ್) ಎಂದು ಹೇಳಿದರೆ, ಕೆಲವರು ಜೀವನ ಎಂದು ಹೇಳುತ್ತಾರೆ. ಮತ್ತೆ ಕೆಲವರು ಆರೋಗ್ಯ ಎಂದು ಹೇಳುತ್ತಾರೆ. ಮೊದಲನೆಯದು ಹೆಚ್ಚು ಸೂಕ್ತವಾಗಿದೆ. ಏಕೆಂದರೆ ಅದು ಸಂಪೂರ್ಣ ಅನುಗ್ರಹವಾಗಿದೆ. ಆದರೆ ಜೀವನ ಮತ್ತು ಆರೋಗ್ಯವು ಲೌಕಿಕ ಅನುಗ್ರಹಗಳಾಗಿವೆ. ಈಮಾನ್ ಇದ್ದಾಗ ಮಾತ್ರ ಅವು ನಿಜವಾದ ಅನುಗ್ರಹಗಳಾಗುತ್ತವೆ. ಇಂತಹ ಸನ್ನಿವೇಶದಲ್ಲಿ ಅನೇಕ ಜನರು ಅವುಗಳ ವಿಷಯದಲ್ಲಿ ನಷ್ಟದಲ್ಲಿರುತ್ತಾರೆ. ಅಂದರೆ ಅವರಿಗೆ ಲಾಭವು ದೊರೆಯುವುದಿಲ್ಲ ಅಥವಾ ಲಾಭವು ಕಡಿಮೆಯಾಗುತ್ತದೆ. ಶಾಶ್ವತವಾಗಿ ಕೆಟ್ಟದ್ದನ್ನೇ ಆದೇಶಿಸುವ ಆತ್ಮದೊಂದಿಗೆ ನೆಮ್ಮದಿಯಿಂದ ಮುಂದುವರಿಯಲು ಬಯಸುತ್ತಾ, (ಅಲ್ಲಾಹು ವಿಧಿಸಿದ) ಮಿತಿಗಳೊಳಗೆ ನಿಲ್ಲುವುದನ್ನು ಹಾಗೂ ನಿಯಮಿತವಾಗಿ ಸತ್ಕರ್ಮಗಳನ್ನು ನಿರ್ವಹಿಸುವುದನ್ನು ಬಿಟ್ಟುಬಿಡುವವರು ನಷ್ಟ ಅನುಭವಿಸುತ್ತಾರೆ. ಅದೇ ರೀತಿ, ಬಿಡುವಿನಲ್ಲಿರುವವನು ಕೂಡ.

ಬಿಡುವಿಲ್ಲದೆ ಕೆಲಸದಲ್ಲಿರುವವನಿಗೆ ಹೇಳಲು ಒಂದು ಕಾರಣ ಇರಬಹುದು. ಆದರೆ ಬಿಡುವಿನಲ್ಲಿರುವವನು ಹಾಗಲ್ಲ. ಅವನಿಗೆ ಹೇಳಲು ಯಾವುದೇ ಕಾರಣವಿಲ್ಲ ಮತ್ತು ಅವನ ಮೇಲೆ ಪುರಾವೆಯು ಸ್ಥಾಪಿಸಲ್ಪಡುತ್ತದೆ."

التصنيفات

Purification of Souls