ಹಾಗಾದರೆ ನನ್ನನ್ನು ಸಾಕ್ಷಿಯಾಗಿಡಬೇಡ, ಏಕೆಂದರೆ ನಾನು ಅನ್ಯಾಯಕ್ಕೆ ಸಾಕ್ಷಿಯಾಗುವುದಿಲ್ಲ

ಹಾಗಾದರೆ ನನ್ನನ್ನು ಸಾಕ್ಷಿಯಾಗಿಡಬೇಡ, ಏಕೆಂದರೆ ನಾನು ಅನ್ಯಾಯಕ್ಕೆ ಸಾಕ್ಷಿಯಾಗುವುದಿಲ್ಲ

ನುಅಮಾನ್ ಬಿನ್ ಬಶೀರ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಆತನ ತಾಯಿ (ಅಮ್ರಾ) ಬಿಂತ್ ರವಾಹ ಅವರು ಆತನ ತಂದೆ (ಬಶೀರ್) ಯ ಬಳಿ, ತನ್ನ ಮಗನಿಗಾಗಿ ಅವರ ಸಂಪತ್ತಿನಿಂದ ಸ್ವಲ್ಪ ಉಡುಗೊರೆಯನ್ನು ಕೇಳಿದರು. ತಂದೆಯು ಒಂದು ವರ್ಷದವರೆಗೆ ಅದನ್ನು ನೀಡಲು ಹಿಂಜರಿದರು. ನಂತರ ಅವರಿಗೆ (ಉಡುಗೊರೆ ನೀಡಲು) ಮನಸ್ಸಾಯಿತು. ಆಗ ತಾಯಿ ಹೇಳಿದರು: "ನನ್ನ ಮಗನಿಗೆ ನೀನು ನೀಡಿದ ಉಡುಗೊರೆಗೆ ಅಲ್ಲಾಹುವಿನ ಸಂದೇಶವಾಹಕರನ್ನು (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ಸಾಕ್ಷಿಯಾಗಿರಿಸುವವರೆಗೆ ನಾನು ತೃಪ್ತಳಾಗುವುದಿಲ್ಲ". (ನುಅಮಾನ್ ಹೇಳುತ್ತಾರೆ) ಆಗ ನನ್ನ ತಂದೆ ನನ್ನ ಕೈ ಹಿಡಿದರು - ನಾನು ಆಗ ಒಬ್ಬ ಚಿಕ್ಕ ಬಾಲಕನಾಗಿದ್ದೆ - ಮತ್ತು ಅಲ್ಲಾಹುವಿನ ಸಂದೇಶವಾಹಕರ (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ಬಳಿಗೆ ಬಂದರು. ತಂದೆ ಹೇಳಿದರು: "ಓ ಅಲ್ಲಾಹುವಿನ ಸಂದೇಶವಾಹಕರೇ, ಈತನ ತಾಯಿ, ಬಿಂತ್ ರವಾಹ, ನಾನು ಅವಳ ಮಗನಿಗೆ ನೀಡಿದ ಉಡುಗೊರೆಗೆ ನಿಮ್ಮನ್ನು ಸಾಕ್ಷಿಯಾಗಿರಿಸಬೇಕೆಂದು ಇಷ್ಟಪಡುತ್ತಾರೆ". ಆಗ ಅಲ್ಲಾಹುವಿನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ಕೇಳಿದರು: "ಓ ಬಶೀರ್, ನಿನಗೆ ಈತನಲ್ಲದೆ ಬೇರೆ ಮಕ್ಕಳಿದ್ದಾರೆಯೇ?". ಅವರು ಹೇಳಿದರು: "ಹೌದು". ಪ್ರವಾದಿಯವರು (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ಕೇಳಿದರು: "ನೀನು ಅವರೆಲ್ಲರಿಗೂ ಈತನಿಗೆ ನೀಡಿದಂತೆಯೇ ನೀಡಿದ್ದೀಯಾ?". ಅವರು ಹೇಳಿದರು: "ಇಲ್ಲ". ಪ್ರವಾದಿಯವರು (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಹಾಗಾದರೆ ನನ್ನನ್ನು ಸಾಕ್ಷಿಯಾಗಿಡಬೇಡ, ಏಕೆಂದರೆ ನಾನು ಅನ್ಯಾಯಕ್ಕೆ ಸಾಕ್ಷಿಯಾಗುವುದಿಲ್ಲ". ಇಮಾಮ್ ಮುಸ್ಲಿಂ ಅವರ ವರದಿಯಲ್ಲಿ (ಹೆಚ್ಚುವರಿಯಾಗಿ) ಹೀಗಿದೆ: (ಪ್ರವಾದಿಯವರು ಹೇಳಿದರು) "ಇದಕ್ಕೆ ನನ್ನ ಬದಲಿಗೆ ಬೇರೆಯವರನ್ನು ಸಾಕ್ಷಿಯಾಗಿರಿಸು".

[صحيح] [متفق عليه، وله ألفاظ عديدة]

الشرح

ನುಅಮಾನ್ ಬಿನ್ ಬಶೀರ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ತಿಳಿಸುವುದೇನೆಂದರೆ, ಅವರ ತಾಯಿ ಅಮ್ರಾ ಬಿಂತ್ ರವಾಹ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ತಮ್ಮ ಮಗನಿಗಾಗಿ ಅವರ ತಂದೆಯ ಬಳಿ ಅವರ ಸಂಪತ್ತಿನಿಂದ ಸ್ವಲ್ಪ ಉಡುಗೊರೆಯನ್ನು ಕೇಳಿದರು. ತಂದೆಯು ಹಿಂಜರಿದರು ಮತ್ತು ಒಂದು ವರ್ಷದವರೆಗೆ ಅದನ್ನು ಮುಂದೂಡಿದರು. ನಂತರ, ಆಕೆಯ ಕೋರಿಕೆಗೆ ಸ್ಪಂದಿಸಿ ತಮ್ಮ ಮಗ ನುಅಮಾನ್‌ಗೆ ಉಡುಗೊರೆ ನೀಡಲು ಅವರಿಗೆ ಮನಸ್ಸಾಯಿತು. ಆಗ ತಾಯಿ ಹೇಳಿದರು: ನೀವು ನನ್ನ ಮಗನಿಗೆ ನೀಡಿದ ಉಡುಗೊರೆಗೆ ಅಲ್ಲಾಹುವಿನ ಸಂದೇಶವಾಹಕರನ್ನು (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ಸಾಕ್ಷಿಯಾಗಿರಿಸುವವರೆಗೆ ನಾನು ತೃಪ್ತಳಾಗುವುದಿಲ್ಲ. ಆಗ ನನ್ನ ತಂದೆ ನನ್ನ ಕೈ ಹಿಡಿದರು - ನಾನು ಅಂದು ಒಬ್ಬ ಚಿಕ್ಕ ಬಾಲಕನಾಗಿದ್ದೆ - ಮತ್ತು ಅಲ್ಲಾಹುವಿನ ಸಂದೇಶವಾಹಕರ (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ಬಳಿಗೆ ಬಂದರು. ತಂದೆ ಹೇಳಿದರು: ಓ ಅಲ್ಲಾಹುವಿನ ಸಂದೇಶವಾಹಕರೇ, ಈತನ ತಾಯಿ, ಬಿಂತ್ ರವಾಹ, ನಾನು ಅವಳ ಮಗನಿಗೆ ನೀಡಿದ ಉಡುಗೊರೆಗೆ ನಿಮ್ಮನ್ನು ಸಾಕ್ಷಿಯಾಗಿರಿಸಬೇಕೆಂದು ಇಷ್ಟಪಡುತ್ತಾರೆ. ಆಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ಕೇಳಿದರು: ಓ ಬಶೀರ್, ನಿನಗೆ ಈತನಲ್ಲದೆ ಬೇರೆ ಮಕ್ಕಳಿದ್ದಾರೆಯೇ? ಅವರು ಹೇಳಿದರು: ಹೌದು. ಪ್ರವಾದಿಯವರು (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ಕೇಳಿದರು: ನೀನು ಅವರೆಲ್ಲರಿಗೂ ಈತನಿಗೆ ನೀಡಿದಂತೆಯೇ ನೀಡಿದ್ದೀಯಾ? ಅವರು ಹೇಳಿದರು: ಇಲ್ಲ. ಪ್ರವಾದಿಯವರು (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: ಹಾಗಾದರೆ ನನ್ನನ್ನು ಸಾಕ್ಷಿಯಾಗಿಡಬೇಡ. ಏಕೆಂದರೆ ನಾನು ಅನ್ಯಾಯ ಮತ್ತು ದಬ್ಬಾಳಿಕೆಗೆ ಸಾಕ್ಷಿಯಾಗುವುದಿಲ್ಲ. ಇಮಾಮ್ ಮುಸ್ಲಿಂ ಅವರ ವರದಿಯಲ್ಲಿರುವಂತೆ, ಅವರನ್ನು ಗದರಿಸುತ್ತಾ ಹೇಳಿದರು: ಹಾಗಾದರೆ ಈ ಅನ್ಯಾಯಕ್ಕೆ ನನ್ನ ಬದಲಿಗೆ ಬೇರೆಯವರನ್ನು ಸಾಕ್ಷಿಯಾಗಿರಿಸು.

فوائد الحديث

ಕೊಡುಗೆ ಮತ್ತು ಉಡುಗೊರೆಗಳನ್ನು ನೀಡುವಾಗ ಗಂಡು ಮತ್ತು ಹೆಣ್ಣು ಮಕ್ಕಳ ನಡುವೆ ನ್ಯಾಯಸಮ್ಮತವಾಗಿ ವರ್ತಿಸುವುದು ಕಡ್ಡಾಯವಾಗಿದೆ. ಆದರೆ, ಖರ್ಚುವೆಚ್ಚದ ವಿಷಯದಲ್ಲಿ, ಪ್ರತಿಯೊಬ್ಬರ ಅಗತ್ಯಕ್ಕನುಗುಣವಾಗಿ ನಿರ್ಣಯಿಸಬೇಕಾಗಿದೆ.

ಕೆಲವು ಮಕ್ಕಳನ್ನು ಇತರರಿಗಿಂತ ಶ್ರೇಷ್ಠರೆಂದು ಪರಿಗಣಿಸುವುದು ಅನ್ಯಾಯ ಮತ್ತು ದಬ್ಬಾಳಿಕೆಯಾಗಿದೆ. ಅದಕ್ಕೆ ಸಾಕ್ಷಿಯಾಗುವುದು ಅಥವಾ ಸಾಕ್ಷ್ಯವನ್ನು ಸ್ವೀಕರಿಸುವುದು ಅನುಮತಿಸಲಾಗುವುದಿಲ್ಲ.

ಇಮಾಮ್ ನವವಿ ಹೇಳುತ್ತಾರೆ: "ಉಡುಗೊರೆ ನೀಡುವಾಗ ಪೋಷಕರು ತಮ್ಮ ಮಕ್ಕಳ ನಡುವೆ ಸಮಾನತೆ ಪಾಲಿಸಬೇಕು. ಪ್ರತಿಯೊಬ್ಬರಿಗೂ ಇತರರಷ್ಟೇ ನೀಡಬೇಕು ಮತ್ತು ತಾರತಮ್ಯ ಮಾಡಬಾರದು. ಗಂಡು ಮತ್ತು ಹೆಣ್ಣು ಮಕ್ಕಳ ನಡುವೆಯೂ ಸಮಾನವಾಗಿ ವರ್ತಿಸಬೇಕು. ನಮ್ಮ ಕೆಲವು ವಿದ್ವಾಂಸರು ಹೇಳಿದ್ದಾರೆ: ಹೆಣ್ಣು ಮಗುವಿನ ಎರಡು ಪಾಲಿನಷ್ಟು ಗಂಡು ಮಗುವಿಗೆ ಇರಬೇಕು (ವಾರಿಸಿನಂತೆ). ಆದರೆ ಸಹೀಹ್ ಮತ್ತು ಪ್ರಸಿದ್ಧ ಅಭಿಪ್ರಾಯವೆಂದರೆ, ಹದೀಸ್‌ನ ಸ್ಪಷ್ಟ ಅರ್ಥದ ಪ್ರಕಾರ ಅವರಿಬ್ಬರ ನಡುವೆ ಸಮಾನತೆ ಪಾಲಿಸಬೇಕು."

ಶರೀಅತ್‌ಗೆ ವಿರುದ್ಧವಾಗಿ ನೀಡುವ ತೀರ್ಪುಗಳು ರದ್ದಾಗುತ್ತವೆ ಮತ್ತು ಜಾರಿಗೆ ಬರುವುದಿಲ್ಲ.

ಹೆಚ್ಚಿನ ವಿವರಣೆಯ ಅಗತ್ಯವಿರುವ ಸಂದರ್ಭಗಳಲ್ಲಿ ನ್ಯಾಯಾಧೀಶರು ಮತ್ತು ಮುಫ್ತಿಗಳು ವಿವರಗಳನ್ನು ಕೇಳಿ ತಿಳಿಯಬೇಕು. ಪ್ರವಾದಿಯವರ (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ಮಾತು "ನೀನು ನಿನ್ನ ಎಲ್ಲಾ ಮಕ್ಕಳಿಗೂ ಇದೇ ರೀತಿ ಮಾಡಿದ್ದೀಯಾ?" ಎಂಬುದರಿಂದ ಇದು ಸ್ಪಷ್ಟವಾಗುತ್ತದೆ.

ಇಮಾಮ್ ನವವಿ ಹೇಳುತ್ತಾರೆ: "ಇದರಲ್ಲಿ, ಪೋಷಕರು ತಮ್ಮ ಮಗುವಿಗೆ ನೀಡಿದ ಉಡುಗೊರೆಯನ್ನು ಹಿಂಪಡೆಯಲು ಅನುಮತಿ ಇದೆ."

ಒಡಹುಟ್ಟಿದವರ ನಡುವೆ ಪ್ರೀತಿ ಮತ್ತು ಸಾಮರಸ್ಯವನ್ನು ಉಂಟುಮಾಡುವ ಕಾರ್ಯಗಳನ್ನು ಮಾಡಲು ಮತ್ತು ಅವರ ನಡುವೆ ದ್ವೇಷವನ್ನು ಉಂಟುಮಾಡುವ ಅಥವಾ ಪೋಷಕರಿಗೆ ಅವಿಧೇಯತೆ ತೋರಲು ಕಾರಣವಾಗುವ ಕಾರ್ಯಗಳನ್ನು ಬಿಟ್ಟುಬಿಡಲು ಆದೇಶಿಸಲಾಗಿದೆ.

التصنيفات

ಮಕ್ಕಳ ಮೇಲೆ ಖರ್ಚು ಮಾಡುವುದು