ಆದಮರ ಮಕ್ಕಳ (ಮನುಷ್ಯರ) ಎಲ್ಲಾ ಹೃದಯಗಳು ರಹ್ಮಾನ್‌ನ (ಪರಮ ದಯಾಮಯನಾದ ಅಲ್ಲಾಹನ) ಬೆರಳುಗಳ ಪೈಕಿ ಎರಡು ಬೆರಳುಗಳ ನಡುವೆ ಒಂದೇ…

ಆದಮರ ಮಕ್ಕಳ (ಮನುಷ್ಯರ) ಎಲ್ಲಾ ಹೃದಯಗಳು ರಹ್ಮಾನ್‌ನ (ಪರಮ ದಯಾಮಯನಾದ ಅಲ್ಲಾಹನ) ಬೆರಳುಗಳ ಪೈಕಿ ಎರಡು ಬೆರಳುಗಳ ನಡುವೆ ಒಂದೇ ಹೃದಯದಂತೆ ಇವೆ. ಅವನು ತಾನು ಇಚ್ಛಿಸಿದಂತೆ ಅದನ್ನು ತಿರುಗಿಸುತ್ತಾನೆ

ಅಬ್ದುಲ್ಲಾ ಬಿನ್ ಅಮ್ರ್ ಬಿನ್ ಆಸ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೀಗೆ ಹೇಳುವುದನ್ನು ನಾನು ಕೇಳಿದ್ದೇನೆ: "ಆದಮರ ಮಕ್ಕಳ (ಮನುಷ್ಯರ) ಎಲ್ಲಾ ಹೃದಯಗಳು ರಹ್ಮಾನ್‌ನ (ಪರಮ ದಯಾಮಯನಾದ ಅಲ್ಲಾಹನ) ಬೆರಳುಗಳ ಪೈಕಿ ಎರಡು ಬೆರಳುಗಳ ನಡುವೆ ಒಂದೇ ಹೃದಯದಂತೆ ಇವೆ. ಅವನು ತಾನು ಇಚ್ಛಿಸಿದಂತೆ ಅದನ್ನು ತಿರುಗಿಸುತ್ತಾನೆ." ನಂತರ ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಓ ಅಲ್ಲಾಹ್, ಹೃದಯಗಳನ್ನು ತಿರುಗಿಸುವವನೇ, ನಮ್ಮ ಹೃದಯಗಳನ್ನು ನಿನ್ನ ವಿಧೇಯತೆಯ ಕಡೆಗೆ ತಿರುಗಿಸು."

[صحيح] [رواه مسلم]

الشرح

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ತಿಳಿಸುವುದೇನೆಂದರೆ, ಆದಮರ ಮಕ್ಕಳ (ಮನುಷ್ಯರ) ಎಲ್ಲಾ ಹೃದಯಗಳು ಪರಮ ದಯಾಮಯನಾದ ಅಲ್ಲಾಹನ ಎರಡು ಬೆರಳುಗಳ ನಡುವೆ ಒಂದೇ ಹೃದಯದಂತೆ ಇವೆ. ಅವನು ತಾನು ಇಚ್ಛಿಸಿದಂತೆ ಅದನ್ನು ತಿರುಗಿಸುತ್ತಾನೆ. ಅವನು ಇಚ್ಛಿಸಿದಂತೆ ಅದನ್ನು ಸತ್ಯದ ಮೇಲೆ ನಿಲ್ಲಿಸುತ್ತಾನೆ, ಮತ್ತು ಅವನು ಇಚ್ಛಿಸಿದಂತೆ ಅದನ್ನು ಸತ್ಯದಿಂದ ದೂರ ಮಾಡುತ್ತಾನೆ. ಅವನು ಎಲ್ಲಾ ಹೃದಯಗಳನ್ನು ನಿಯಂತ್ರಿಸುವುದು ಒಂದು ಹೃದಯವನ್ನು ನಿಯಂತ್ರಿಸಿದಂತೆ. ಯಾವುದೇ ವಿಷಯವು ಅವನನ್ನು ಮತ್ತೊಂದು ವಿಷಯದಿಂದ ದೂರವಿಡುವುದಿಲ್ಲ. ನಂತರ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಪ್ರಾರ್ಥಿಸಿದರು: "ಓ ಅಲ್ಲಾಹ್, ಹೃದಯಗಳನ್ನು ಕೆಲವೊಮ್ಮೆ ವಿಧೇಯತೆಗೆ ಮತ್ತು ಕೆಲವೊಮ್ಮೆ ಅವಿಧೇಯತೆಗೆ, ಕೆಲವೊಮ್ಮೆ ಸ್ಮರಣೆಗೆ ಮತ್ತು ಕೆಲವೊಮ್ಮೆ ಮರೆವಿಗೆ ತಿರುಗಿಸುವವನೇ, ನಮ್ಮ ಹೃದಯಗಳನ್ನು ನಿನ್ನ ವಿಧೇಯತೆಯ ಕಡೆಗೆ ತಿರುಗಿಸು."

فوائد الحديث

ವಿಧಿಯನ್ನು ಮತ್ತು ಅಲ್ಲಾಹು ತನ್ನ ದಾಸರ ಹೃದಯಗಳನ್ನು ಅವರಿಗೆ ಬರೆದಿರುವ ವಿಧಿಯ ಪ್ರಕಾರ ತಿರುಗಿಸುತ್ತಾನೆ ಎಂಬುದನ್ನು ದೃಢೀಕರಿಸಲಾಗಿದೆ.

ಸತ್ಯ ಮತ್ತು ಸನ್ಮಾರ್ಗದ ಮೇಲೆ ಸ್ಥಿರವಾಗಿ ನಿಲ್ಲಿಸಬೇಕೆಂದು ಮುಸ್ಲಿಮನು ಅಲ್ಲಾಹನೊಂದಿಗೆ ನಿರಂತರವಾಗಿ ಪ್ರಾರ್ಥಿಸಬೇಕಾಗಿದೆ.

ಅಲ್ಲಾಹನನ್ನು ಮಾತ್ರ ಭಯಪಡಬೇಕು ಮತ್ತು ಏಕೈಕನೂ, ಯಾವುದೇ ಸಹಭಾಗಿಗಳು ಇಲ್ಲದ ಅವನೊಬ್ಬನನ್ನೇ ಅವಲಂಬಿಸಬೇಕೆಂದು ಹೇಳಲಾಗಿದೆ.

ಆಜುರ್ರಿ ಹೇಳುತ್ತಾರೆ: "ಖಂಡಿತವಾಗಿಯೂ ಸತ್ಯದ ಜನರು ಅಲ್ಲಾಹನನ್ನು, ಅವನು ಸ್ವತಃ ತನ್ನನ್ನು ವರ್ಣಿಸಿದಂತೆ, ಮತ್ತು ಅವನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅವನನ್ನು ವರ್ಣಿಸಿದಂತೆ, ಮತ್ತು ಸಹಾಬಿಗಳು (ಅಲ್ಲಾಹು ಅವರೆಲ್ಲರ ಬಗ್ಗೆ ಸಂಪ್ರೀತನಾಗಲಿ) ಅವನನ್ನು ವರ್ಣಿಸಿದಂತೆ ವರ್ಣಿಸುತ್ತಾರೆ. ಇದು ಸುನ್ನತ್ತನ್ನು ಅನುಸರಿಸಿದ ಮತ್ತು ಬಿದ್‌ಅತ್ (ನೂತನಾಚಾರ) ಗಳನ್ನು ವರ್ಜಿಸಿದ ವಿದ್ವಾಂಸರ ಮಾರ್ಗವಾಗಿದೆ." ಆದ್ದರಿಂದ ಸುನ್ನತ್‌ನ ಜನರು ಅಲ್ಲಾಹನಿಗೆ ಅವನು ಸ್ವತಃ ತನಗೆ ದೃಢೀಕರಿಸಿದ ಹೆಸರುಗಳು ಮತ್ತು ಗುಣಲಕ್ಷಣಗಳನ್ನು ವಿರೂಪಗೊಳಿಸದೆ, ನಿಷ್ಕ್ರಿಯಗೊಳಿಸದೆ, ನಿರ್ದಿಷ್ಟಪಡಿಸದೆ, ಅಥವಾ ಹೋಲಿಸದೆ ದೃಢೀಕರಿಸುತ್ತಾರೆ. ಅವರು ಅಲ್ಲಾಹನಿಗೆ, ಅವನು ಸ್ವತಃ ತನಗೆ ನಿರಾಕರಿಸಿದ್ದನ್ನು ನಿರಾಕರಿಸುತ್ತಾರೆ. ನಿರಾಕರಣೆ ಅಥವಾ ದೃಢೀಕರಣವು ಬಂದಿಲ್ಲದ ವಿಷಯಗಳ ಬಗ್ಗೆ ಅವರು ಮೌನವಾಗಿರುತ್ತಾರೆ. ಅಲ್ಲಾಹು ಹೇಳುತ್ತಾನೆ: "ಅವನಂತೆ ಯಾವುದೂ ಇಲ್ಲ, ಮತ್ತು ಅವನು ಎಲ್ಲವನ್ನೂ ಕೇಳುವವನು ಮತ್ತು ನೋಡುವವನಾಗಿದ್ದಾನೆ."

التصنيفات

Reported Supplications