إعدادات العرض
ಯಾರು ಬೆಟ್ಟದಿಂದ ಕೆಳಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳುತ್ತಾನೋ, ಅವನು ನರಕಾಗ್ನಿಯಲ್ಲಿ ಶಾಶ್ವತವಾಗಿ, ಸದಾಕಾಲ ಅದರಲ್ಲಿ…
ಯಾರು ಬೆಟ್ಟದಿಂದ ಕೆಳಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳುತ್ತಾನೋ, ಅವನು ನರಕಾಗ್ನಿಯಲ್ಲಿ ಶಾಶ್ವತವಾಗಿ, ಸದಾಕಾಲ ಅದರಲ್ಲಿ ಬೀಳುತ್ತಲೇ ಇರುವನು
ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಯಾರು ಬೆಟ್ಟದಿಂದ ಕೆಳಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳುತ್ತಾನೋ, ಅವನು ನರಕಾಗ್ನಿಯಲ್ಲಿ ಶಾಶ್ವತವಾಗಿ, ಸದಾಕಾಲ ಅದರಲ್ಲಿ ಬೀಳುತ್ತಲೇ ಇರುವನು. ಯಾರು ವಿಷವನ್ನು ಕುಡಿದು ಆತ್ಮಹತ್ಯೆ ಮಾಡಿಕೊಳ್ಳುತ್ತಾನೋ, ಅವನ ವಿಷವು ಅವನ ಕೈಯಲ್ಲಿರುತ್ತದೆ ಮತ್ತು ಅವನು ನರಕಾಗ್ನಿಯಲ್ಲಿ ಶಾಶ್ವತವಾಗಿ, ಸದಾಕಾಲ ಅದನ್ನು ಕುಡಿಯುತ್ತಲೇ ಇರುವನು. ಯಾರು ಕಬ್ಬಿಣದ (ಆಯುಧ) ದಿಂದ ತನ್ನನ್ನು ತಾನೇ ಕೊಂದುಕೊಳ್ಳುತ್ತಾನೋ, ಅವನ ಆಯುಧವು ಅವನ ಕೈಯಲ್ಲಿರುತ್ತದೆ ಮತ್ತು ಅವನು ನರಕಾಗ್ನಿಯಲ್ಲಿ ಶಾಶ್ವತವಾಗಿ, ಸದಾಕಾಲ ಅದರಿಂದ ತನ್ನ ಹೊಟ್ಟೆಗೆ ಇರಿಯುತ್ತಲೇ ಇರುವನು".
الترجمة
العربية Tiếng Việt অসমীয়া Nederlands Indonesia Kiswahili Hausa සිංහල English ગુજરાતી Magyar ქართული Română Русский Português ไทย తెలుగు मराठी دری Türkçe አማርኛ বাংলা Kurdî Malagasy Македонски Tagalog ភាសាខ្មែរ Українська ਪੰਜਾਬੀ Wolof پښتو Moore Svenska മലയാളം Bosanski தமிழ் 中文 မြန်မာالشرح
ಭೂಲೋಕದಲ್ಲಿ ಉದ್ದೇಶಪೂರ್ವಕವಾಗಿ ಆತ್ಮಹತ್ಯೆ ಮಾಡಿಕೊಳ್ಳುವುದರ ಬಗ್ಗೆ ಪ್ರವಾದಿಯವರು (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ಎಚ್ಚರಿಸಿದ್ದಾರೆ. ಖಂಡಿತವಾಗಿಯೂ ಅಂತಹವನಿಗೆ ಪುನರುತ್ಥಾನ ದಿನದಂದು ನರಕಾಗ್ನಿಯಲ್ಲಿ, ಅವನು ಭೂಲೋಕದಲ್ಲಿ ಮಾಡಿಕೊಂಡ ರೀತಿಯಲ್ಲಿಯೇ, ತಕ್ಕ ಪ್ರತಿಫಲ ನೀಡಿ ಶಿಕ್ಷಿಸಲಾಗುತ್ತದೆ. ಯಾರು ಬೆಟ್ಟದ ಮೇಲಿನಿಂದ ಬಿದ್ದು ಆತ್ಮಹತ್ಯೆ ಮಾಡಿಕೊಳ್ಳುತ್ತಾನೋ, ಅವನು ನರಕಾಗ್ನಿಯಲ್ಲಿ, ಅದರ ಬೆಟ್ಟಗಳಿಂದ ಕಣಿವೆಗಳಿಗೆ ಶಾಶ್ವತವಾಗಿ ಸದಾಕಾಲ ಬೀಳುತ್ತಲೇ ಇರುವನು. ಯಾರು ವಿಷವನ್ನು ಕುಡಿದು ಆತ್ಮಹತ್ಯೆ ಮಾಡಿಕೊಳ್ಳುತ್ತಾನೋ, ಅವನ ವಿಷವು ಅವನ ಕೈಯಲ್ಲಿರುತ್ತದೆ ಮತ್ತು ಅವನು ನರಕಾಗ್ನಿಯಲ್ಲಿ ಶಾಶ್ವತವಾಗಿ ಸದಾಕಾಲ ಅದನ್ನು ಕುಡಿಯುತ್ತಲೇ ಇರುವನು. ಯಾರು ಕಬ್ಬಿಣದ ಆಯುಧದಿಂದ ತನ್ನ ಹೊಟ್ಟೆಗೆ ಇರಿದು ಆತ್ಮಹತ್ಯೆ ಮಾಡಿಕೊಳ್ಳುತ್ತಾನೋ, ಅವನ ಆಯುಧವು ಅವನ ಕೈಯಲ್ಲಿರುತ್ತದೆ ಮತ್ತು ಅವನು ನರಕಾಗ್ನಿಯಲ್ಲಿ ಶಾಶ್ವತವಾಗಿ ಸದಾಕಾಲ ಅದರಿಂದ ತನ್ನ ಹೊಟ್ಟೆಗೆ ಇರಿಯುತ್ತಲೇ ಇರುವನು.فوائد الحديث
ಮನುಷ್ಯನು ಆತ್ಮಹತ್ಯೆ ಮಾಡಿಕೊಳ್ಳುವುದು ನಿಷಿದ್ಧ (ಹರಾಮ್) ಆಗಿದೆ ಮತ್ತು ಅದು ಯಾತನಾಮಯ ಶಿಕ್ಷೆಗೆ ಕಾರಣವಾಗುವ ಮಹಾಪಾಪಗಳಲ್ಲಿ ಒಂದಾಗಿದೆ.
ಹದೀಸ್ನಲ್ಲಿ ಉಲ್ಲೇಖಿಸಿರುವುದು ಆತ್ಮಹತ್ಯೆಯ ಕೆಲವು ವಿಧಾನಗಳ ಉದಾಹರಣೆಗಳಾಗಿವೆ. ವಾಸ್ತವವಾಗಿ, ಯಾವುದೇ ರೀತಿಯಲ್ಲಿ ಆತ್ಮಹತ್ಯೆ ಮಾಡಿಕೊಂಡರೂ, ಅವನು ಆತ್ಮಹತ್ಯೆ ಮಾಡಿಕೊಂಡ ರೀತಿಯಲ್ಲಿಯೇ ಶಿಕ್ಷಿಸಲ್ಪಡುತ್ತಾನೆ. ಸಹೀಹ್ ಬುಖಾರಿಯಲ್ಲಿ ಪ್ರವಾದಿಯವರ (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ಒಂದು ವಚನವು ಹೀಗಿದೆ: "ಯಾರು ತನ್ನ ಕತ್ತು ಹಿಸುಕಿ (ನೇಣು ಬಿಗಿದು ಆತ್ಮಹತ್ಯೆ) ಮಾಡಿಕೊಳ್ಳುತ್ತಾನೋ, ಅವನು ನರಕದಲ್ಲಿ (ಅದೇ ರೀತಿ) ಕತ್ತು ಹಿಸುಕಿಕೊಳ್ಳುತ್ತಾನೆ, ಮತ್ತು ಯಾರು (ಆಯುಧದಿಂದ) ಇರಿದುಕೊಳ್ಳುತ್ತಾನೋ, ಅವನು ನರಕದಲ್ಲಿ (ಅದೇ ರೀತಿ) ಇರಿದುಕೊಳ್ಳುತ್ತಾನೆ".
ಇಮಾಮ್ ನವವಿ ಹೇಳುತ್ತಾರೆ: "ಪ್ರವಾದಿಯವರ (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ವಚನ: "ಅವನು ನರಕಾಗ್ನಿಯಲ್ಲಿ ಶಾಶ್ವತವಾಗಿ ಸದಾಕಾಲ ಅದರಲ್ಲಿ ಇರುವನು." ಇದರ ಬಗ್ಗೆ ಹಲವು ಅಭಿಪ್ರಾಯಗಳಿವೆ. ಅವುಗಳಲ್ಲಿ ಒಂದು: ಇದು ನಿಷಿದ್ಧವೆಂದು ತಿಳಿದಿದ್ದರೂ ಅದನ್ನು ಧರ್ಮಸಮ್ಮತವೆಂದು ಪರಿಗಣಿಸಿ ಈ ಕೃತ್ಯವನ್ನು ಮಾಡಿದವನಿಗೆ ಅನ್ವಯಿಸುತ್ತದೆ. ಇಂತಹವನು ಕಾಫಿರ್ (ಸತ್ಯನಿಷೇಧಿ) ಆಗುತ್ತಾನೆ. ಇದು ಅವನ ಶಿಕ್ಷೆಯಾಗಿದೆ. ಎರಡನೆಯದು: ಇಲ್ಲಿ 'ಖುಲೂದ್' (ಶಾಶ್ವತವಾಗಿ) ಎಂದರೆ ದೀರ್ಘ ಕಾಲ ಮತ್ತು ಸುದೀರ್ಘ ವಾಸವೇ ಹೊರತು ನಿಜವಾದ ರೀತಿಯಲ್ಲಿರುವ ಶಾಶ್ವತತೆಯಲ್ಲ. ಉದಾಹರಣೆಗೆ, 'ಅಲ್ಲಾಹು ಸುಲ್ತಾನನ ಆಳ್ವಿಕೆಯನ್ನು ಶಾಶ್ವತಗೊಳಿಸಲಿ' ಎಂದು ಹೇಳಲಾಗುವಂತೆ. ಮೂರನೆಯದು: ಇದು ಅವನ ಶಿಕ್ಷೆಯಾಗಿದೆ. ಆದರೆ ಮುಸ್ಲಿಮನಾಗಿ ಮರಣ ಹೊಂದಿದವನು ನರಕದಲ್ಲಿ ಶಾಶ್ವತವಾಗಿ ಉಳಿಯುವುದಿಲ್ಲ ಎಂದು ಅಲ್ಲಾಹು ತನ್ನ ಔದಾರ್ಯದಿಂದ ತಿಳಿಸಿದ್ದಾನೆ."
ಇದು ಪರಲೋಕದ ಶಿಕ್ಷೆಗಳು ಭೂಲೋಕದ ಅಪರಾಧಗಳಿಗೆ ಅನುರೂಪವಾಗಿರುವ ಬಗೆಗಿನ ಒಂದು ಉದಾಹರಣೆಯಾಗಿದೆ. ಮನುಷ್ಯನು ತನಗೆ ತಾನೇ ಮಾಡಿಕೊಳ್ಳುವ ಅಪರಾಧವು, ಅವನು ಇತರರಿಗೆ ಮಾಡುವ ಅಪರಾಧದಷ್ಟೇ ಪಾಪಕಾರಿಯಾಗಿದೆ ಎಂದು ಇದರಿಂದ ತಿಳಿಯಬಹುದು. ಏಕೆಂದರೆ ಅವನ ದೇಹವು ಸಂಪೂರ್ಣವಾಗಿ ಅವನ ಸ್ವಂತದ್ದಲ್ಲ. ಬದಲಿಗೆ ಅದು ಅಲ್ಲಾಹುವಿಗೆ ಸೇರಿದ್ದು. ಆದ್ದರಿಂದ, ಅವನು ಅದರಲ್ಲಿ ಅಲ್ಲಾಹು ಅನುಮತಿಸಿದ ರೀತಿಯಲ್ಲೇ ಹೊರತು ವರ್ತಿಸುವಂತಿಲ್ಲ.
