ಅತ್ಯಂತ ಪರಿಶುದ್ಧ ಮತ್ತು ಸರ್ವೋನ್ನತನಾದ ಅಲ್ಲಾಹು ಹೇಳುತ್ತಾನೆ: 'ನಾನು ನನ್ನ ಸಜ್ಜನ ದಾಸರಿಗಾಗಿ (ಸ್ವರ್ಗದಲ್ಲಿ) ಏನೇನು…

ಅತ್ಯಂತ ಪರಿಶುದ್ಧ ಮತ್ತು ಸರ್ವೋನ್ನತನಾದ ಅಲ್ಲಾಹು ಹೇಳುತ್ತಾನೆ: 'ನಾನು ನನ್ನ ಸಜ್ಜನ ದಾಸರಿಗಾಗಿ (ಸ್ವರ್ಗದಲ್ಲಿ) ಏನೇನು ಸಿದ್ಧಪಡಿಸಿದ್ದೇನೆಂದರೆ, (ಅಂತಹ ಸುಖಸಾಧನಗಳನ್ನು) ಯಾವ ಕಣ್ಣೂ ಕಂಡಿಲ್ಲ, ಯಾವ ಕಿವಿಯೂ ಕೇಳಿಲ್ಲ, ಮತ್ತು ಯಾವ ಮಾನವನ ಹೃದಯಕ್ಕೂ ಅದರ ಕಲ್ಪನೆ ಬಂದಿಲ್ಲ'

ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅಲ್ಲಾಹುವಿನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಅತ್ಯಂತ ಪರಿಶುದ್ಧ ಮತ್ತು ಸರ್ವೋನ್ನತನಾದ ಅಲ್ಲಾಹು ಹೇಳುತ್ತಾನೆ: 'ನಾನು ನನ್ನ ಸಜ್ಜನ ದಾಸರಿಗಾಗಿ (ಸ್ವರ್ಗದಲ್ಲಿ) ಏನೇನು ಸಿದ್ಧಪಡಿಸಿದ್ದೇನೆಂದರೆ, (ಅಂತಹ ಸುಖಸಾಧನಗಳನ್ನು) ಯಾವ ಕಣ್ಣೂ ಕಂಡಿಲ್ಲ, ಯಾವ ಕಿವಿಯೂ ಕೇಳಿಲ್ಲ, ಮತ್ತು ಯಾವ ಮಾನವನ ಹೃದಯಕ್ಕೂ ಅದರ ಕಲ್ಪನೆ ಬಂದಿಲ್ಲ' ". ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ಹೇಳುತ್ತಾರೆ: ನೀವು ಇಚ್ಛಿಸುವುದಾದರೆ ಪಠಿಸಿರಿ: "ಯಾವುದೇ ಆತ್ಮಕ್ಕೂ ತಿಳಿದಿಲ್ಲ, ಕಣ್ಣುಗಳಿಗೆ ತಂಪು ನೀಡುವಂತಹ ಏನೆಲ್ಲಾ ಅವರಿಗಾಗಿ ಗುಪ್ತವಾಗಿಡಲಾಗಿದೆ ಎಂದು." [ಸೂರ ಸಜ್ದಾ: 32:17].

[صحيح] [متفق عليه]

الشرح

ಪ್ರವಾದಿಯವರು (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ತಿಳಿಸುವುದೇನೆಂದರೆ, ಅತ್ಯಂತ ಪರಿಶುದ್ಧ ಮತ್ತು ಸರ್ವೋನ್ನತನಾದ ಅಲ್ಲಾಹು ಹೇಳುತ್ತಾನೆ: ನಾನು ಸ್ವರ್ಗದಲ್ಲಿ ನನ್ನ ಸಜ್ಜನ ದಾಸರಿಗೆ ಗೌರವಾರ್ಥವಾಗಿ ಏನೇನು ಸಿದ್ಧಪಡಿಸಿದ್ದೇನೆಂದರೆ, (ಅಂತಹ ವಸ್ತುಗಳು) ಅಸ್ತಿತ್ವದಲ್ಲಿರುವುದನ್ನು ಯಾವ ಕಣ್ಣೂ ಕಂಡಿಲ್ಲ, ಅದರ ವರ್ಣನೆಯನ್ನು ಯಾವ ಕಿವಿಯೂ ಕೇಳಿಲ್ಲ, ಮತ್ತು ಅದರ ಸ್ವರೂಪವು ಯಾವ ಮಾನವನ ಹೃದಯದಲ್ಲೂ ಹೊಳೆದಿಲ್ಲ ಅಥವಾ ಮೂಡಿಲ್ಲ. ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ಹೇಳುತ್ತಾರೆ: ನೀವು ಇಚ್ಛಿಸುವುದಾದರೆ ಪಠಿಸಿರಿ: "ಯಾವುದೇ ಆತ್ಮಕ್ಕೂ ತಿಳಿದಿಲ್ಲ, ಕಣ್ಣುಗಳಿಗೆ ತಂಪು ನೀಡುವಂತಹ ಏನೆಲ್ಲಾ ಅವರಿಗಾಗಿ ಗುಪ್ತವಾಗಿಡಲಾಗಿದೆ ಎಂದು." [ಸೂರ ಸಜ್ದಾ: 32:17].

فوائد الحديث

ಇದು ಪ್ರವಾದಿಯವರು (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ಅಲ್ಲಾಹುವಿನಿಂದ ವರದಿ ಮಾಡುವ ಹದೀಸ್ ಆಗಿದ್ದು ಇದನ್ನು ಪವಿತ್ರ (ಕುದ್ಸಿ) ಅಥವಾ ದೈವಿಕ ಹದೀಸ್ ಎಂದು ಕರೆಯಲಾಗುತ್ತದೆ. ಇಂತಹ ಹದೀಸ್‌ಗಳ ಪದಗಳು ಮತ್ತು ಅದರ ಅರ್ಥವು ಅಲ್ಲಾಹುವಿನದ್ದೇ ಆಗಿವೆ. ಆದರೆ ಇವುಗಳಿಗೆ ಕುರ್‌ಆನ್‌ನ ವಚನಗಳಿಗೆ ಇರುವ ವಿಶೇಷತೆಗಳಿಲ್ಲ. ಅಂದರೆ ಈ ವಚನಗಳನ್ನು ಪಠಿಸುವುದು ಆರಾಧನೆಯಲ್ಲ, ಇವುಗಳನ್ನು ಸ್ಪರ್ಶಿಸಲು ಶುದ್ಧಿಯಿರಬೇಕಾದ ಅಗತ್ಯವಿಲ್ಲ ಮತ್ತು ಇವು ಸವಾಲಿನ ರೂಪದಲ್ಲಿ ಅಥವಾ ಪವಾಡದ ರೂಪದಲ್ಲಿ ಅವತೀರ್ಣವಾಗಿಲ್ಲ.

ಅಲ್ಲಾಹು ತನ್ನ ಸಜ್ಜನ ದಾಸರಿಗಾಗಿ ಸಿದ್ಧಪಡಿಸಿರುವುದನ್ನು ಗೆಲ್ಲುವುದಕ್ಕಾಗಿ, ಸತ್ಕಾರ್ಯಗಳನ್ನು ಮಾಡಲು ಮತ್ತು ಕೆಟ್ಟ ಕಾರ್ಯಗಳನ್ನು ಬಿಡಲು ಪ್ರೋತ್ಸಾಹಿಸಲಾಗಿದೆ.

ಅಲ್ಲಾಹು ತನ್ನ ಗ್ರಂಥದಲ್ಲಿ ಮತ್ತು ತನ್ನ ಸಂದೇಶವಾಹಕರ ಸುನ್ನತ್‌ನಲ್ಲಿ ಸ್ವರ್ಗದಲ್ಲಿರುವ ಎಲ್ಲವನ್ನೂ ನಮಗೆ ತಿಳಿಸಿಕೊಟ್ಟಿಲ್ಲ. ನಮಗೆ ತಿಳಿಯದಿರುವುದು ನಾವು ತಿಳಿದಿರುವುದಕ್ಕಿಂತಲೂ ಬಹಳ ದೊಡ್ಡದಾಗಿದೆ.

ಸ್ವರ್ಗದ ಅನುಗ್ರಹಗಳ ಪರಿಪೂರ್ಣತೆಯನ್ನು ವಿವರಿಸಲಾಗಿದೆ. ಅದರ ನಿವಾಸಿಗಳು ಯಾವುದೇ ದುಃಖ ಅಥವಾ ಚಿಂತೆಯಿಂದ ಮುಕ್ತವಾದ ಸಂತೋಷಗಳನ್ನು ಅನುಭವಿಸುತ್ತಾರೆ.

ಈ ಪ್ರಪಂಚದ ಸುಖಭೋಗಗಳು ತಾತ್ಕಾಲಿಕವಾಗಿವೆ. ಪರಲೋಕವು ಶ್ರೇಷ್ಠ ಮತ್ತು ಶಾಶ್ವತವಾಗಿದೆ.

التصنيفات

ಸ್ವರ್ಗ ಮತ್ತು ನರಕದ ಗುಣಲಕ್ಷಣಗಳು