ಮೂರು ಜನರ ಬಗ್ಗೆ ಲೇಖನಿಯನ್ನು ಎತ್ತಲಾಗಿದೆ. ನಿದ್ರೆ ಮಾಡುವವನು ಎದ್ದೇಳುವ ತನಕ, ಮಗು ಪ್ರೌಢನಾಗುವ ತನಕ ಮತ್ತು ಮಾನಸಿಕ ಅಸ್ವಸ್ಥನು…

ಮೂರು ಜನರ ಬಗ್ಗೆ ಲೇಖನಿಯನ್ನು ಎತ್ತಲಾಗಿದೆ. ನಿದ್ರೆ ಮಾಡುವವನು ಎದ್ದೇಳುವ ತನಕ, ಮಗು ಪ್ರೌಢನಾಗುವ ತನಕ ಮತ್ತು ಮಾನಸಿಕ ಅಸ್ವಸ್ಥನು ಸ್ವಸ್ಥ ಬುದ್ಧಿಯವನಾಗುವ ತನಕ

ಅಲಿ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಮೂರು ಜನರ ಬಗ್ಗೆ ಲೇಖನಿಯನ್ನು ಎತ್ತಲಾಗಿದೆ. ನಿದ್ರೆ ಮಾಡುವವನು ಎದ್ದೇಳುವ ತನಕ, ಮಗು ಪ್ರೌಢನಾಗುವ ತನಕ ಮತ್ತು ಮಾನಸಿಕ ಅಸ್ವಸ್ಥನು ಸ್ವಸ್ಥ ಬುದ್ಧಿಯವನಾಗುವ ತನಕ."

[صحيح] [رواه أبو داود والترمذي والنسائي في الكبرى وابن ماجه وأحمد]

الشرح

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ತಿಳಿಸುವುದೇನೆಂದರೆ, ಮನುಷ್ಯರ ಪೈಕಿ ಮೂರು ವಿಧ ಜನರ ಹೊರತು ಇತರ ಎಲ್ಲರೂ ಧರ್ಮ ನಿಯಮಗಳನ್ನು ಪಾಲಿಸಲು ಬದ್ಧರಾಗಿದ್ದಾರೆ. ಮಗು ಬೆಳೆದು ಪ್ರೌಢನಾಗುವ ತನಕ. ಬುದ್ಧಿ ಸ್ತಿಮಿತವನ್ನು ಕಳಕೊಂಡ ಮಾನಸಿಕ ಅಸ್ವಸ್ಥನು ಪುನಃ ಮಾನಸಿಕವಾಗಿ ಸ್ವಸ್ಥನಾಗುವ ತನಕ. ನಿದ್ರೆ ಮಾಡುವವನು ಎಚ್ಚರವಾಗಿ ಎದ್ದೇಳುವ ತನಕ. ಇವರು ಧರ್ಮ ನಿಯಮಗಳನ್ನು ಪಾಲಿಸಬೇಕಾಗಿಲ್ಲ. ಇವರು ಮಾಡುವ ಪಾಪಕೃತ್ಯಗಳನ್ನು ದಾಖಲಿಸಲಾಗುವುದಿಲ್ಲ. ಆದರೆ ಮಕ್ಕಳು ಮಾಡುವ ಸತ್ಕರ್ಮಗಳನ್ನು ದಾಖಲಿಸಲಾಗುತ್ತದೆ. ಮಾನಸಿಕ ಅಸ್ವಸ್ಥರು ಮತ್ತು ನಿದ್ರೆ ಮಾಡುವವರು ಮಾಡುವ ಸತ್ಕರ್ಮಗಳನ್ನು ದಾಖಲಿಸಲಾಗುವುದಿಲ್ಲ. ಏಕೆಂದರೆ, ಅವರು ಪ್ರಜ್ಞಾಶೂನ್ಯರಾಗಿದ್ದು ಆರಾಧನೆಗಳು ಸಿಂಧುವಾಗದ ಸ್ಥಿತಿಯಲ್ಲಿದ್ದಾರೆ.

فوائد الحديث

ಮನುಷ್ಯನು ಕಾನೂನು ಪಾಲನೆಯ ಅರ್ಹತೆಯನ್ನು ಕಳೆದುಕೊಳ್ಳುವುದು ಒಂದೋ ನಿದ್ರೆಯ ಕಾರಣದಿಂದ. ಏಕೆಂದರೆ, ಅದರಿಂದ ಅವನು ತನ್ನ ಕರ್ತವ್ಯಗಳನ್ನು ನಿರ್ವಹಿಸಲು ಅಗತ್ಯವಾಗಿರುವ ಎಚ್ಚರದ ಸ್ಥಿತಿಯಲ್ಲಿರುವುದಿಲ್ಲ. ಅಥವಾ ಸಣ್ಣ ವಯಸ್ಸಿನ ಮತ್ತು ಅಪ್ರಾಪ್ತತೆಯ ಕಾರಣದಿಂದ. ಏಕೆಂದರೆ, ಆ ವಯಸ್ಸಿನಲ್ಲಿ ಅವನು ಕಾನೂನು ಪಾಲನೆಗೆ ಬದ್ಧನಾಗಿರುವುದಿಲ್ಲ. ಅಥವಾ ಮಾನಸಿಕ ಅಸ್ವಸ್ಥತೆಯ ಕಾರಣದಿಂದ. ಏಕೆಂದರೆ, ಅದರಿಂದ ಅವನ ಬುದ್ಧಿಯು ಸರಿಯಾಗಿ ಕಾರ್ಯನಿರ್ವಹಿಸುವುದಿಲ್ಲ. ಅದೇ ರೀತಿ, ಮಾದಕ ದ್ರವ್ಯಗಳನ್ನು ಸೇವಿಸಿದ ಸ್ಥಿತಿಯಲ್ಲಿರುವಾಗ. ಆದ್ದರಿಂದ ಯಾರು ವಿಷಯಗಳನ್ನು ಸರಿಯಾಗಿ ವಿವೇಚಿಸಿ ತಿಳಿಯುವ ಶಕ್ತಿಯನ್ನು ಕಳೆದುಕೊಳ್ಳುತ್ತಾರೋ, ಅವರು ಈ ಮೂರು ಕಾರಣಗಳಿಂದಾಗಿ ಕಾನೂನು ಪಾಲನೆಯ ಅರ್ಹತೆಯನ್ನು ಕಳೆದುಕೊಳ್ಳುತ್ತಾರೆ. ಸರ್ವಶಕ್ತನಾದ ಅಲ್ಲಾಹು ತನ್ನ ನ್ಯಾಯ, ಸಹಿಷ್ಣುತೆ ಮತ್ತು ಉದಾರತೆಯಿಂದಾಗಿ, ಅಲ್ಲಾಹನ ವಿಷಯದಲ್ಲಿ ಅವರಿಂದ ಸಂಭವಿಸುವ ಅತಿರೇಕ ಮತ್ತು ಕುಂದು-ಕೊರತೆಗಳಿಗಾಗಿ ಅವರನ್ನು ಶಿಕ್ಷಿಸುವುದಿಲ್ಲ.

ಅವರು ಮಾಡುವ ಪಾಪಗಳನ್ನು ದಾಖಲಿಸಲಾಗುವುದಿಲ್ಲ ಎನ್ನುವುದು ಕೆಲವು ಭೌತಿಕ ಕಾನೂನುಗಳು ಅವರಿಗೆ ಅನ್ವಯವಾಗುತ್ತವೆ ಎಂಬುದನ್ನು ನಿಷೇಧಿಸುವುದಿಲ್ಲ. ಉದಾಹರಣೆಗೆ, ಮಾನಸಿಕ ಅಸ್ವಸ್ಥನು ಕೊಲೆ ಮಾಡಿದರೆ, ಅವನ ಮೇಲೆ ಪ್ರತೀಕಾರ ಅಥವಾ ಪ್ರಾಯಶ್ಚಿತ್ತ ಇಲ್ಲವಾದರೂ, ಅವನ ಪಿತೃ ಸಂಬಂಧಿಕರು ರಕ್ತಪರಿಹಾರವನ್ನು ನೀಡಬೇಕಾಗಿದೆ.

ಮೂರು ಲಕ್ಷಣಗಳಿಂದ ಪ್ರೌಢಾವಸ್ಥೆಯನ್ನು ತಲುಪಿರುವುದನ್ನು ಗುರುತಿಸಬಹುದು: ಕನಸಿನಲ್ಲಿ ಅಥವಾ ಇತರ ಸಮಯಗಳಲ್ಲಿ ವೀರ್ಯ ಸ್ಖಲನವಾಗುವುದು, ಗುಹ್ಯಾಂಗದ ಸುತ್ತ ರೋಮ ಬೆಳೆಯುವುದು, ಹದಿನೈದರ ಹರೆಯವನ್ನು ತಲುಪುವುದು. ಹೆಣ್ಣುಮಕ್ಕಳಲ್ಲಿರುವ ನಾಲ್ಕನೇ ಲಕ್ಷಣವು ಮುಟ್ಟು ಪ್ರಾರಂಭವಾಗುವುದು.

ಸುಬುಕಿ ಹೇಳಿದರು: "ಸಬೀ (ಶಿಶು) ಎಂದರೆ ಹುಡುಗ. ಇತರರು ಹೇಳಿದರು: ತಾಯಿಯ ಗರ್ಭದಲ್ಲಿರುವ ಮಗುವನ್ನು ಜನೀನ್ (ಭ್ರೂಣ) ಎಂದು ಕರೆಯಲಾಗುತ್ತದೆ. ಅದು ಜನ್ಮ ತಾಳಿದರೆ ಸಬೀ (ಶಿಶು) ಎಂದು ಕರೆಯಲಾಗುತ್ತದೆ. ಅದು ಎದೆಹಾಲು ಕುಡಿಯತೊಡಗಿ ಏಳು ವರ್ಷವಾಗುವ ತನಕ ಗುಲಾಮ್ (ಹುಡುಗ) ಎಂದು ಕರೆಯಲಾಗುತ್ತದೆ. ನಂತರ ಹತ್ತು ವರ್ಷದ ತನಕ ಯಾಫಿ (ಹದಿಪ್ರಾಯದವ) ಎಂದು ಕರೆಯಲಾಗುತ್ತದೆ. ನಂತರ ಹದಿನೈದು ವರ್ಷದ ತನಕ ಹಝೂರ್ (ಅಪ್ರಾಪ್ತ) ಎಂದು ಕರೆಯಲಾಗುತ್ತದೆ. ಆದರೆ ಖಚಿತವಾಗಿ ಹೇಳಬೇಕಾದರೆ ಅವನು ಈ ಎಲ್ಲಾ ಸ್ಥಿತಿಗಳಲ್ಲೂ ಸಬೀ ಎಂದೇ ಕರೆಯಲ್ಪಡುತ್ತಾನೆ. ಇದು ಸುಯೂತಿಯವರ ಅಭಿಪ್ರಾಯವಾಗಿದೆ."

التصنيفات

Conditions of Prayer