ಪುನರುತ್ಥಾನ ದಿನದಂದು ಸತ್ಯವಿಶ್ವಾಸಿಯನ್ನು ಅವನ ಪರಿಪಾಲಕನ (ಅಲ್ಲಾಹನ) ಹತ್ತಿರಕ್ಕೆ ತರಲಾಗುವುದು. ಆಗ ಅವನು ಆತನ ಮೇಲೆ ತನ್ನ…

ಪುನರುತ್ಥಾನ ದಿನದಂದು ಸತ್ಯವಿಶ್ವಾಸಿಯನ್ನು ಅವನ ಪರಿಪಾಲಕನ (ಅಲ್ಲಾಹನ) ಹತ್ತಿರಕ್ಕೆ ತರಲಾಗುವುದು. ಆಗ ಅವನು ಆತನ ಮೇಲೆ ತನ್ನ ಪರದೆಯನ್ನು ಹಾಕುವನು. ನಂತರ ಆತ ತನ್ನ ಪಾಪಗಳನ್ನು ಒಪ್ಪಿಕೊಳ್ಳುವಂತೆ ಮಾಡುವನು

ಸಫ್ವಾನ್ ಬಿನ್ ಮುಹ್ರಿಝ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಒಬ್ಬ ವ್ಯಕ್ತಿ ಇಬ್ನ್ ಉಮರ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರೊಡನೆ ಕೇಳಿದರು: "ರಹಸ್ಯ ಸಂಭಾಷಣೆಯ ಬಗ್ಗೆ ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಏನು ಹೇಳುವುದನ್ನು ನೀವು ಕೇಳಿದ್ದೀರಿ?" ಅವರು ಉತ್ತರಿಸಿದರು: "ಅವರು ಹೀಗೆ ಹೇಳುವುದನ್ನು ನಾನು ಕೇಳಿದ್ದೇನೆ: "ಪುನರುತ್ಥಾನ ದಿನದಂದು ಸತ್ಯವಿಶ್ವಾಸಿಯನ್ನು ಅವನ ಪರಿಪಾಲಕನ (ಅಲ್ಲಾಹನ) ಹತ್ತಿರಕ್ಕೆ ತರಲಾಗುವುದು. ಆಗ ಅವನು ಆತನ ಮೇಲೆ ತನ್ನ ಪರದೆಯನ್ನು ಹಾಕುವನು. ನಂತರ ಆತ ತನ್ನ ಪಾಪಗಳನ್ನು ಒಪ್ಪಿಕೊಳ್ಳುವಂತೆ ಮಾಡುವನು. ನಂತರ ಅಲ್ಲಾಹು ಹೇಳುವನು: "ನೀನು (ನಿನ್ನ ಪಾಪಗಳನ್ನು) ಗುರುತಿಸುತ್ತೀಯಾ?" ಆತ ಉತ್ತರಿಸುವನು: "ಹೌದು, ನನ್ನ ಪರಿಪಾಲಕನೇ ನಾನು ಗುರುತಿಸುತ್ತೇನೆ." ಅಲ್ಲಾಹು ಹೇಳುವನು: "ಇಹಲೋಕದಲ್ಲಿ ನಾನು ಈ ಪಾಪಗಳನ್ನು ಯಾರಿಗೂ ತಿಳಿಯದಂತೆ ಮುಚ್ಚಿಟ್ಟಿದ್ದೆ. ಮತ್ತು ಇಂದು ನಾನು ನಿನಗೆ ಅದನ್ನು ಕ್ಷಮಿಸುತ್ತೇನೆ." ನಂತರ ಅವನ ಪುಣ್ಯಗಳ ಪುಸ್ತಕವನ್ನು ಅವನಿಗೆ ನೀಡಲಾಗುವುದು. ಆದರೆ ಸತ್ಯನಿಷೇಧಿಗಳು ಮತ್ತು ಕಪಟವಿಶ್ವಾಸಿಗಳ ಬಗ್ಗೆ ಹೇಳುವುದಾದರೆ, ಅವರನ್ನು ಸೃಷ್ಟಿಗಳೆಲ್ಲರ ಮುಂದೆ ಕರೆದು ಘೋಷಿಸಲಾಗುವುದು: "ಇವರೇ ಅಲ್ಲಾಹನ ಹೆಸರಲ್ಲಿ ಸುಳ್ಳು ಹೇಳಿದವರು."

[صحيح] [متفق عليه]

الشرح

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ಪುನರುತ್ಥಾನ ದಿನದಂದು ಅಲ್ಲಾಹು ತನ್ನ ದಾಸನೊಂದಿಗೆ ನಡೆಸುವ ರಹಸ್ಯ ಸಂಭಾಷಣೆಯ ಬಗ್ಗೆ ತಿಳಿಸುತ್ತಾ ಹೇಳುತ್ತಾರೆ: ಪುನರುತ್ಥಾನ ದಿನದಂದು ಸತ್ಯವಿಶ್ವಾಸಿಯನ್ನು ಅವನ ಪರಿಪಾಲಕನ (ಅಲ್ಲಾಹನ) ಹತ್ತಿರಕ್ಕೆ ತರಲಾಗುವುದು. ಆಗ ಅಲ್ಲಾಹು ಅಲ್ಲಿ ನೆರೆದ ಜನರ ಕಣ್ಣುಗಳಿಂದ ಅವನನ್ನು ಮುಚ್ಚಿಡಲು ಮತ್ತು ಅವನ ರಹಸ್ಯವನ್ನು ಯಾರೂ ತಿಳಿಯದಿರಲು ತನ್ನ ಪರದೆಯನ್ನು ಅವನ ಮೇಲೆ ಹಾಕುವನು. ನಂತರ ಅವನೊಡನೆ ಕೇಳುವನು: "ಇಂತಿಂತಹ ಪಾಪದ ಬಗ್ಗೆ ನಿನಗೆ ತಿಳಿದಿದೆಯೇ... ದಾಸ ಮತ್ತು ಅಲ್ಲಾಹನಿಗೆ ಸಂಬಂಧಿಸಿದ ಪಾಪಗಳನ್ನು ಅವನು ಒಪ್ಪಿಕೊಳ್ಳುವಂತೆ ಮಾಡುವನು. ಆತ ಉತ್ತರಿಸುವನು: ಹೌದು, ನನ್ನ ಪರಿಪಾಲಕನೇ. ಸತ್ಯವಿಶ್ವಾಸಿಯು ಗಾಬರಿಗೊಂಡು ಭಯಭೀತನಾದಾಗ, ಅಲ್ಲಾಹು ಹೇಳುವನು: ನಾನು ಈ ಪಾಪಗಳನ್ನು ನಿನಗಾಗಿ ಇಹಲೋಕದಲ್ಲಿ ಮುಚ್ಚಿಟ್ಟಿದ್ದೆ. ಇಂದು ನಾನು ನಿನಗೆ ಅವುಗಳನ್ನು ಕ್ಷಮಿಸುತ್ತೇನೆ. ನಂತರ ಅವನ ಪುಣ್ಯಗಳ ಪುಸ್ತಕವನ್ನು ಅವನಿಗೆ ನೀಡಲಾಗುವುದು. ಆದರೆ ಸತ್ಯನಿಷೇಧಿಗಳು ಮತ್ತು ಕಪಟವಿಶ್ವಾಸಿಗಳ ಬಗ್ಗೆ ಹೇಳುವುದಾದರೆ, ಅವರನ್ನು ಅಲ್ಲಿ ನೆರೆದವರೆಲ್ಲರ ಮುಂದೆ ಕೂಗಿ ಕರೆದು ಘೋಷಿಸಲಾಗುವುದು: ಇವರೇ ತಮ್ಮ ಪರಿಪಾಲಕನ ಹೆಸರಲ್ಲಿ ಸುಳ್ಳು ಹೇಳಿದವರು. ತಿಳಿಯಿರಿ! ಅಕ್ರಮಿಗಳ ಮೇಲೆ ಅಲ್ಲಾಹನ ಶಾಪವಿರಲಿ.

فوائد الحديث

ಇಹಲೋಕ ಮತ್ತು ಪರಲೋಕದಲ್ಲಿ ದಾಸರ ಪಾಪಗಳನ್ನು ಮುಚ್ಚಿಡುವುದು ಅಲ್ಲಾಹನ ಮಹಾ ಅನುಗ್ರಹ ಮತ್ತು ಕರುಣೆಯಾಗಿದೆ.

ಸಾಧ್ಯವಾದಷ್ಟರ ಮಟ್ಟಿಗೆ ಸತ್ಯವಿಶ್ವಾಸಿಯ ತಪ್ಪುಗಳನ್ನು ಮುಚ್ಚಿಡಲು ಪ್ರೋತ್ಸಾಹಿಸಲಾಗಿದೆ.

ದಾಸರ ಎಲ್ಲಾ ಕರ್ಮಗಳನ್ನು ಅಲ್ಲಾಹು ಲೆಕ್ಕ ಮಾಡುತ್ತಾನೆ. ಆದ್ದರಿಂದ ಯಾರಾದರೂ ಒಳಿತನ್ನು ಪಡೆದರೆ ಅವನು ಅಲ್ಲಾಹನನ್ನು ಸ್ತುತಿಸಲಿ. ಯಾರಾದರೂ ಅದಲ್ಲದ ಬೇರೇನಾದರೂ ಪಡೆದರೆ, ಅವನು ಸ್ವತಃ ಅವನನ್ನೇ ದೂಷಿಸಲಿ. ಅವನನ್ನು ಕ್ಷಮಿಸುವುದು ಶಿಕ್ಷಿಸುವುದು ಅಲ್ಲಾಹನ ಇಚ್ಛೆಗೆ ಬಿಟ್ಟದ್ದಾಗಿದೆ.

ಇಬ್ನ್ ಹಜರ್ ಹೇಳಿದರು: "ಈ ಬಗ್ಗೆ ವರದಿಯಾದ ಎಲ್ಲಾ ಹದೀಸ್‌ಗಳನ್ನು ಸಂಗ್ರಹಿಸಿದಾಗ ತಿಳಿದು ಬರುವುದೇನೆಂದರೆ, ಪುನರುತ್ಥಾನ ದಿನದಂದು ಪಾಪಿಗಳಾದ ಸತ್ಯವಿಶ್ವಾಸಿಗಳು ಎರಡು ವಿಭಾಗದಲ್ಲಿರುತ್ತಾರೆ. ಒಂದನೇಯ ವಿಭಾಗದವರು ಯಾರೆಂದರೆ, ಅವರ ಮತ್ತು ಅಲ್ಲಾಹನ ನಡುವಿನ ವಿಷಯದಲ್ಲಿ ಪಾಪ ಮಾಡಿದವರು. ಈ ವಿಭಾಗದವರು ಎರಡು ವಿಧಗಳಲ್ಲಿದ್ದಾರೆಂದು ಇಬ್ನ್ ಉಮರ್ ರ ಈ ಹದೀಸ್ ಸೂಚಿಸುತ್ತದೆ. ಒಂದನೇ ವಿಧ: ಇಹಲೋಕದಲ್ಲಿ ಇವರ ಪಾಪಗಳು ಮುಚ್ಚಿಟ್ಟಿರುತ್ತವೆ. ಈ ಪಾಪಗಳನ್ನು ಅಲ್ಲಾಹು ಪುನರುತ್ಥಾನ ದಿನದಂದು ಕೂಡ ಮುಚ್ಚಿಡುತ್ತಾನೆ. ಇದು ಈ ಹದೀಸಿನಲ್ಲಿ ನೇರವಾಗಿ ಹೇಳಲಾದ ವಿಷಯ. ಎರಡನೇ ವಿಧ: ಇಹಲೋಕದಲ್ಲಿ ಇವರ ಪಾಪಗಳು ಬಹಿರಂಗವಾಗಿರುತ್ತವೆ. ಈ ಪಾಪಗಳು ಮೊದಲಿನ ಪಾಪಗಳಿಗೆ ವಿರುದ್ಧವಾಗಿವೆ (ಅಂದರೆ ಅಲ್ಲಾಹು ಪುನರುತ್ಥಾನ ದಿನ ಅವುಗಳನ್ನು ಮುಚ್ಚಿಡುವುದಿಲ್ಲ) ಎಂದು ಈ ಹದೀಸಿನ ಅರ್ಥವು ಸೂಚಿಸುತ್ತದೆ. ಎರಡನೆಯ ವಿಭಾಗದವರು ಯಾರೆಂದರೆ, ಅವರ ಮತ್ತು ಇತರ ಮನುಷ್ಯರ ನಡುವಿನ ವಿಷಯದಲ್ಲಿ ಪಾಪ ಮಾಡಿದವರು. ಇವರಲ್ಲಿ ಸಹ ಎರಡು ವಿಧಗಳಿವೆ: ಒಂದನೇ ವಿಧ: ಇವರ ಕೆಡುಕುಗಳು ಇವರ ಒಳಿತುಗಳಿಗಿಂತ ಹೆಚ್ಚಾಗಿರುತ್ತದೆ. ಇವರು ನರಕ ಪ್ರವೇಶಿಸಿ, ನಂತರ ಶಿಫಾರಸ್ಸಿನಿಂದ ಹೊರಬರುತ್ತಾರೆ. ಎರಡನೇ ವಿಧ: ಇವರ ಕೆಡುಕುಗಳು ಮತ್ತು ಒಳಿತುಗಳು ಸಮಾನವಾಗಿರುತ್ತವೆ. ಇವರ ನಡುವಿನ ವ್ಯಾಜ್ಯಗಳು ಇತ್ಯರ್ಥದವರೆಗೆ ಇವರು ಸ್ವರ್ಗವನ್ನು ಪ್ರವೇಶಿಸುವುದಿಲ್ಲ."

التصنيفات

ಅಂತ್ಯದಿನದಲ್ಲಿ ವಿಶ್ವಾಸವಿಡುವುದು