ಅಲ್ಲಾಹು ಸ್ವರ್ಗ ಮತ್ತು ನರಕಗಳನ್ನು ಸೃಷ್ಟಿಸಿದಾಗ ಜಿಬ್ರೀಲರನ್ನು (ಅವರ ಮೇಲೆ ಶಾಂತಿಯಿರಲಿ) ಸ್ವರ್ಗಕ್ಕೆ ಕಳುಹಿಸಿ ಹೇಳಿದನು

ಅಲ್ಲಾಹು ಸ್ವರ್ಗ ಮತ್ತು ನರಕಗಳನ್ನು ಸೃಷ್ಟಿಸಿದಾಗ ಜಿಬ್ರೀಲರನ್ನು (ಅವರ ಮೇಲೆ ಶಾಂತಿಯಿರಲಿ) ಸ್ವರ್ಗಕ್ಕೆ ಕಳುಹಿಸಿ ಹೇಳಿದನು

ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಅಲ್ಲಾಹು ಸ್ವರ್ಗ ಮತ್ತು ನರಕಗಳನ್ನು ಸೃಷ್ಟಿಸಿದಾಗ ಜಿಬ್ರೀಲರನ್ನು (ಅವರ ಮೇಲೆ ಶಾಂತಿಯಿರಲಿ) ಸ್ವರ್ಗಕ್ಕೆ ಕಳುಹಿಸಿ ಹೇಳಿದನು: "ಸ್ವರ್ಗವನ್ನು ಮತ್ತು ನಾನು ಅಲ್ಲಿ ಸ್ವರ್ಗವಾಸಿಗಳಿಗೆ ಸಿದ್ಧಗೊಳಿಸಿದ್ದನ್ನು ನೋಡಿ ಬಾ." ಜಿಬ್ರೀಲರು ನೋಡಿ ಮರಳಿ ಬಂದು ಹೇಳಿದರು: "ನಿನ್ನ ಪ್ರತಿಷ್ಠೆಯ ಮೇಲಾಣೆ! ಅದರ ಬಗ್ಗೆ ಕೇಳಿದ ಯಾವುದೇ ವ್ಯಕ್ತಿಯೂ ಅದನ್ನು ಪ್ರವೇಶಿಸದೇ ಇರಲಾರ." ನಂತರ ಅಲ್ಲಾಹನ ಆಜ್ಞೆಯ ಮೇರೆಗೆ ಅದನ್ನು ಕಷ್ಟಗಳಿಂದ ಹೊದಿಯಲಾಯಿತು. ನಂತರ ಅಲ್ಲಾಹು ಹೇಳಿದನು: "ಸ್ವರ್ಗಕ್ಕೆ ಹೋಗಿ ನಾನು ಅಲ್ಲಿ ಸ್ವರ್ಗವಾಸಿಗಳಿಗೆ ಸಿದ್ಧಗೊಳಿಸಿದ್ದನ್ನು ನೋಡಿ ಬಾ." ಅವರು ಅದನ್ನು ನೋಡಿದಾಗ, ಅದನ್ನು ಕಷ್ಟಗಳಿಂದ ಹೊದಿಯಲಾಗಿತ್ತು. ಅವರು ಹೇಳಿದರು: "ನಿನ್ನ ಪ್ರತಿಷ್ಠೆಯ ಮೇಲಾಣೆ! ಅದನ್ನು ಪ್ರವೇಶಿಸಲು ಯಾರಿಗೂ ಸಾಧ್ಯವಾಗಲಾರದೆಂದು ನಾನು ಭಯಪಡುತ್ತೇನೆ." ಅಲ್ಲಾಹು ಹೇಳಿದನು: "ನರಕಕ್ಕೆ ಹೋಗಿ ಅಲ್ಲಿ ನಾನು ನರಕವಾಸಿಗಳಿಗೆ ಸಿದ್ಧಗೊಳಿಸಿದ್ದನ್ನು ನೋಡಿ ಬಾ." ಅವರು ಅದನ್ನು ನೋಡಿದಾಗ, ಅದರ ಭಾಗಗಳು ಒಂದು ಇನ್ನೊಂದರ ಮೇಲೆ ಏರಿ ಹೋಗುವುದನ್ನು ಕಂಡರು. ಅವರು ಮರಳಿ ಬಂದು ಹೇಳಿದರು: "ನಿನ್ನ ಪ್ರತಿಷ್ಠೆಯ ಮೇಲಾಣೆ! ಯಾರೂ ಅದನ್ನು ಪ್ರವೇಶಿಸಲಾರರು." ನಂತರ ಅಲ್ಲಾಹನ ಆಜ್ಞೆಯ ಮೇರೆಗೆ ಅದನ್ನು ಮೋಹಗಳಿಂದ ಹೊದಿಯಲಾಯಿತು. ನಂತರ ಅಲ್ಲಾಹು ಹೇಳಿದನು: "ಹೋಗು, ಅದನ್ನು ಪುನಃ ನೋಡಿ ಬಾ." ಅವರು ಅದನ್ನು ನೋಡಿದಾಗ, ಅದನ್ನು ಮೋಹಗಳಿಂದ ಹೊದಿಯಲಾಗಿತ್ತು. ಅವರು ಹಿಂದಿರುಗಿ ಬಂದು ಹೇಳಿದರು: "ನಿನ್ನ ಪ್ರತಿಷ್ಠೆಯ ಮೇಲಾಣೆ! ಅದನ್ನು ಪ್ರವೇಶಿಸದೇ ಬಚಾವಾಗಲು ಯಾರಿಗೂ ಸಾಧ್ಯವಾಗಲಾರದೆಂದು ನನಗೆ ಭಯವಾಗುತ್ತಿದೆ."

[حسن] [رواه أبو داود والترمذي والنسائي]

الشرح

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ತಿಳಿಸುವುದೇನೆಂದರೆ, ಅಲ್ಲಾಹು ಸ್ವರ್ಗ ಮತ್ತು ನರಕವನ್ನು ಸೃಷ್ಟಿಸಿದ ನಂತರ ಜಿಬ್ರೀಲ್ (ಅವರ ಮೇಲೆ ಶಾಂತಿಯಿರಲಿ) ರನ್ನು ಕರೆದು ಹೇಳಿದನು: "ಸ್ವರ್ಗಕ್ಕೆ ಹೋಗಿ ಅದನ್ನು ನೋಡಿ ಬಾ." ಅವರು ಸ್ವರ್ಗಕ್ಕೆ ಹೋಗಿ ಅದನ್ನು ನೋಡಿ ಮರಳಿ ಬಂದರು. ಜಿಬ್ರೀಲ್ ಹೇಳಿದರು: "ಓ ನನ್ನ ಪರಿಪಾಲಕನೇ! ನಿನ್ನ ಪ್ರತಿಷ್ಠೆಯ ಮೇಲಾಣೆ. ಆ ಸ್ವರ್ಗದ ಬಗ್ಗೆ ಮತ್ತು ಅಲ್ಲಿರುವ ಸವಲತ್ತುಗಳು, ಗೌರವಗಳು ಮತ್ತು ಒಳಿತುಗಳ ಬಗ್ಗೆ ಕೇಳಿದ ಯಾವುದೇ ವ್ಯಕ್ತಿಯೂ ಅದನ್ನು ಪ್ರವೇಶಿಸಲು ಇಷ್ಟಪಡದೇ ಇರಲಾರ ಮತ್ತು ಅದಕ್ಕಾಗಿ ಪರಿಶ್ರಮಿಸದೇ ಇರಲಾರ." ನಂತರ ಅಲ್ಲಾಹು ಸ್ವರ್ಗದ ಸುತ್ತಲೂ, ಅಲ್ಲಾಹನ ಆಜ್ಞೆಗಳನ್ನು ಪಾಲಿಸಬೇಕು ಮತ್ತು ಅವನು ವಿರೋಧಿಸಿದ ಕಾರ್ಯಗಳಿಂದ ದೂರವಾಗಬೇಕು ಎಂಬ ಕಷ್ಟಗಳಿಂದ ತುಂಬಿದನು. ಸ್ವರ್ಗವನ್ನು ಪ್ರವೇಶಿಸಲು ಬಯಸುವವನು ಈ ಕಷ್ಟಗಳನ್ನು ದಾಟಿ ಹೋಗಬೇಕು ನಂತರ ಸರ್ವಶಕ್ತನಾದ ಅಲ್ಲಾಹು ಹೇಳಿದನು: "ಓ ಜಿಬ್ರೀಲ್! ನಾನು ಸ್ವರ್ಗದ ಸುತ್ತಲೂ ಕಷ್ಟಗಳನ್ನು ತುಂಬಿದ್ದೇನೆ. ಹೋಗಿ ಅದನ್ನು ನೋಡಿ ಬಾ." ಅವರು ಹೋಗಿ ಅದನ್ನು ನೋಡಿ ಮರಳಿ ಬಂದು ಹೇಳಿದರು: "ಓ ನನ್ನ ಪರಿಪಾಲಕನೇ! ನಿನ್ನ ಪ್ರತಿಷ್ಠೆಯ ಮೇಲಾಣೆ. ಅದರ ಮಾರ್ಗದಲ್ಲಿರುವ ಈ ಕಷ್ಟಗಳು ಮತ್ತು ಪರಿಶ್ರಮಗಳಿಂದಾಗಿ ಯಾರಿಗೂ ಅದನ್ನು ಪ್ರವೇಶಿಸಲು ಸಾಧ್ಯವಾಗಲಾರದೆಂದು ನನಗೆ ಭಯವಾಗುತ್ತಿದೆ." ಹಾಗೆಯೇ, ನರಕವನ್ನು ಸೃಷ್ಟಿಸಿದ ನಂತರ ಅಲ್ಲಾಹು ಹೇಳಿದನು: "ಓ ಜಿಬ್ರೀಲ್! ಹೋಗಿ ಅದನ್ನು ನೋಡಿ ಬಾ." ಅವರು ಹೋಗಿ ಅದನ್ನು ನೋಡಿದರು. ನಂತರ ಹಿಂದಿರುಗಿ ಬಂದು ಜಿಬ್ರೀಲ್ ಹೇಳಿದರು: "ಓ ನನ್ನ ಪರಿಪಾಲಕನೇ! ನಿನ್ನ ಪ್ರತಿಷ್ಠೆಯ ಮೇಲಾಣೆ. ಆ ನರಕದರಲ್ಲಿರುವ ಶಿಕ್ಷೆಗಳು, ಕಷ್ಟಗಳು ಮತ್ತು ಹಿಂಸೆಗಳ ಬಗ್ಗೆ ಕೇಳಿದ ಯಾವುದೇ ವ್ಯಕ್ತಿಯೂ ಅದನ್ನು ಪ್ರವೇಶಿಸಲು ಅಸಹ್ಯಪಡದೇ ಇರಲಾರ ಮತ್ತು ಅದಕ್ಕೆ ಸಾಗಿಸುವ ಎಲ್ಲ ಮಾರ್ಗಗಳಿಂದ ದೂರವಾಗದೇ ಇರಲಾರ." ನಂತರ ಅಲ್ಲಾಹು ನರಕವನ್ನು ಮತ್ತು ಅದಕ್ಕೆ ಸಾಗುವ ಮಾರ್ಗಗಳನ್ನು ಮೋಹಗಳಿಂದ ಮತ್ತು ವಿಲಾಸಗಳಿಂದ ತುಂಬಿದನು. ನಂತರ ಹೇಳಿದನು: "ಓ ಜಿಬ್ರೀಲ್! ಹೋಗಿ ಅದನ್ನು ನೋಡಿ ಬಾ." ಜಿಬ್ರೀಲ್ ಹೋಗಿ ಅದನ್ನು ನೋಡಿ ಮರಳಿ ಬಂದು ಹೇಳಿದರು: "ಓ ನನ್ನ ಪರಿಪಾಲಕನೇ! ನಿನ್ನ ಪ್ರತಿಷ್ಠೆಯ ಮೇಲಾಣೆ. ನರಕದ ಸುತ್ತಲೂ ಮೋಹಗಳು ಮತ್ತು ವಿಲಾಸಗಳು ತುಂಬಿಕೊಂಡಿರುವುದರಿಂದ ಯಾರಿಗೂ ಅದರಿಂದ ಬಚಾವಾಗಲು ಸಾಧ್ಯವಾಗಲಾರದೆಂದು ನನಗೆ ಭಯವಾಗುತ್ತಿದೆ."

فوائد الحديث

ಸ್ವರ್ಗ ಮತ್ತು ನರಕಗಳು ಈಗಾಗಲೇ ಅಸ್ತಿತ್ವದಲ್ಲಿವೆ ಎಂಬ ವಿಶ್ವಾಸವನ್ನು ಈ ಹದೀಸ್ ಸಾಬೀತುಪಡಿಸುತ್ತದೆ.

ಅಗೋಚರ ವಿಷಯಗಳಲ್ಲಿ ಮತ್ತು ಅಲ್ಲಾಹು ಹಾಗೂ ಅವನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಿಳಿಸಿದ ಎಲ್ಲಾ ವಿಷಯಗಳಲ್ಲಿ ವಿಶ್ವಾಸವಿಡುವುದು ಕಡ್ಡಾಯವಾಗಿದೆ ಎಂದು ಈ ಹದೀಸ್ ತಿಳಿಸುತ್ತದೆ.

ಕಷ್ಟ ಮತ್ತು ಪ್ರಯಾಸಕರ ಕಾರ್ಯಗಳಲ್ಲಿ ತಾಳ್ಮೆ ವಹಿಸುವುದರ ಪ್ರಾಮುಖ್ಯತೆಯನ್ನು ಈ ಹದೀಸ್ ತಿಳಿಸುತ್ತದೆ. ಏಕೆಂದರೆ ಅದು ಸ್ವರ್ಗಕ್ಕೆ ತಲುಪಿಸುವ ಮಾರ್ಗವಾಗಿದೆ.

ನಿಷೇಧಿಸಲಾದ ಕಾರ್ಯಗಳಿಂದ ದೂರವಿರುವುದರ ಪ್ರಾಮುಖ್ಯತೆಯನ್ನು ಈ ಹದೀಸ್ ತಿಳಿಸುತ್ತದೆ. ಏಕೆಂದರೆ ಅದು ನರಕಕ್ಕೆ ತಲುಪಿಸುವ ಮಾರ್ಗವಾಗಿದೆ.

ಇಹಲೋಕದಲ್ಲಿ ಮನುಷ್ಯರನ್ನು ಪರೀಕ್ಷಿಸುವುದಕ್ಕಾಗಿ ಸ್ವರ್ಗವನ್ನು ಕಷ್ಟಗಳಿಂದ ಮತ್ತು ನರಕವನ್ನು ಮೋಹಗಳಿಂದ ಸುತ್ತುವರಿಯಲಾಗಿದೆ.

ಸ್ವರ್ಗದ ದಾರಿಯು ಕಠಿಣ ಮತ್ತು ತ್ರಾಸದಾಯಕವಾಗಿದೆ. ಆ ದಾರಿಯಲ್ಲಿ ಸಾಗಲು ಸತ್ಯವಿಶ್ವಾಸದ ಜೊತೆಗೆ ತಾಳ್ಮೆ ಮತ್ತು ಸಹಿಷ್ಣುತೆಯ ಅಗತ್ಯವಿದೆ. ನರಕದ ದಾರಿಯಲ್ಲಿ ಐಹಿಕ ವಿಲಾಸ ಮತ್ತು ಮೋಹಗಳು ತುಂಬಿಕೊಂಡಿವೆ.

التصنيفات

ಅಂತ್ಯದಿನದಲ್ಲಿ ವಿಶ್ವಾಸವಿಡುವುದು, Descriptions of Paradise and Hell