ಬದಲಾಗಿ ನೀವು ಹೀಗೆ ಹೇಳಿರಿ: 'ನಾವು ಕೇಳಿದೆವು ಮತ್ತು ವಿಧೇಯರಾದೆವು. ಓ ನಮ್ಮ ಪರಿಪಾಲಕನೇ, ನಿನ್ನ ಕ್ಷಮೆಯನ್ನು ಯಾಚಿಸುತ್ತೇವೆ ಮತ್ತು…

ಬದಲಾಗಿ ನೀವು ಹೀಗೆ ಹೇಳಿರಿ: 'ನಾವು ಕೇಳಿದೆವು ಮತ್ತು ವಿಧೇಯರಾದೆವು. ಓ ನಮ್ಮ ಪರಿಪಾಲಕನೇ, ನಿನ್ನ ಕ್ಷಮೆಯನ್ನು ಯಾಚಿಸುತ್ತೇವೆ ಮತ್ತು ನಿನ್ನ ಬಳಿಗೇ ಮರಳಲಿಕ್ಕಿದೆ'

ಅಬೂ ಹುರೈರಾ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರಿಗೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ), “ಆಕಾಶಗಳಲ್ಲಿ ಮತ್ತು ಭೂಮಿಯಲ್ಲಿರುವುದೆಲ್ಲವೂ ಅಲ್ಲಾಹನದ್ದೇ. ನಿಮ್ಮ ಮನಸ್ಸಿನಲ್ಲಿರುವುದನ್ನು ನೀವು ಬಹಿರಂಗಪಡಿಸಿದರೂ ಅಥವಾ ಮುಚ್ಚಿಟ್ಟರೂ ಅಲ್ಲಾಹು ಅದರ ಬಗ್ಗೆ ನಿಮ್ಮನ್ನು ವಿಚಾರಣೆ ನಡೆಸುತ್ತಾನೆ. ತಾನು ಇಚ್ಛಿಸಿದವರನ್ನು ಅವನು ಕ್ಷಮಿಸುತ್ತಾನೆ ಮತ್ತು ತಾನು ಇಚ್ಛಿಸಿದವರನ್ನು ಶಿಕ್ಷಿಸುತ್ತಾನೆ. ಅಲ್ಲಾಹು ಎಲ್ಲದರಲ್ಲೂ ಸಾಮರ್ಥ್ಯವುಳ್ಳವನಾಗಿದ್ದಾನೆ” [ಅಲ್-ಬಕರ: 284] ಎಂಬ ಕುರ್‌ಆನ್ ವಚನವು ಅವತೀರ್ಣವಾದಾಗ, ಅದು ಅಲ್ಲಾಹನ ಸಂದೇಶವಾಹಕರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಸಹಚರರಿಗೆ (ಸಹಾಬಾಗಳಿಗೆ) ಬಹಳ ಕಷ್ಟವೆನಿಸಿತು. ಅವರು ಅಲ್ಲಾಹನ ಸಂದೇಶವಾಹಕರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬಳಿಗೆ ಬಂದು ಮೊಣಕಾಲೂರಿ ಕುಳಿತು ಹೇಳಿದರು: "ಓ ಅಲ್ಲಾಹನ ಸಂದೇಶವಾಹಕರೇ, ನಮಗೆ ನಮಾಝ್, ಉಪವಾಸ, ಜಿಹಾದ್ ಮತ್ತು ದಾನದಂತಹ ನಮಗೆ ನಿರ್ವಹಿಸಲು ಸಾಧ್ಯವಾಗುವ ಕರ್ಮಗಳನ್ನು ನಮಗೆ ವಿಧಿಸಲಾಗಿದೆ (ನಾವು ಅದನ್ನು ಪಾಲಿಸುತ್ತಿದ್ದೇವೆ). ಆದರೆ ಈಗ ನಿಮಗೆ ಈ ವಚನ ಅವತೀರ್ಣವಾಗಿದೆ, ಮತ್ತು ಇದನ್ನು ಪಾಲಿಸಲು ನಮಗೆ ಸಾಧ್ಯವಾಗುತ್ತಿಲ್ಲ." ಆಗ ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ನಿಮಗಿಂತ ಹಿಂದಿನ ಎರಡು ವೇದಗ್ರಂಥಗಳ ಅನುಯಾಯಿಗಳು (ಯಹೂದಿ ಮತ್ತು ಕ್ರೈಸ್ತರು) 'ನಾವು ಕೇಳಿದೆವು ಮತ್ತು ಅವಿಧೇಯತೆ ತೋರಿದೆವು' ಎಂದು ಹೇಳಿದಂತೆ ನೀವೂ ಹೇಳಲು ಬಯಸುವಿರಾ? ಬದಲಾಗಿ ನೀವು ಹೀಗೆ ಹೇಳಿರಿ: 'ನಾವು ಕೇಳಿದೆವು ಮತ್ತು ವಿಧೇಯರಾದೆವು. ಓ ನಮ್ಮ ಪರಿಪಾಲಕನೇ, ನಿನ್ನ ಕ್ಷಮೆಯನ್ನು ಯಾಚಿಸುತ್ತೇವೆ ಮತ್ತು ನಿನ್ನ ಬಳಿಗೇ ಮರಳಲಿಕ್ಕಿದೆ'." ಆಗ ಅವರು (ಸಹಾಬಾಗಳು): "ನಾವು ಕೇಳಿದೆವು ಮತ್ತು ವಿಧೇಯರಾದೆವು. ಓ ನಮ್ಮ ಪರಿಪಾಲಕನೇ, ನಿನ್ನ ಕ್ಷಮೆಯನ್ನು ಯಾಚಿಸುತ್ತೇವೆ ಮತ್ತು ನಿನ್ನ ಬಳಿಗೇ ಮರಳಲಿಕ್ಕಿದೆ" ಎಂದು ಹೇಳಿದರು. ಜನರೆಲ್ಲರೂ ಇದನ್ನು ಪಠಿಸಿದಾಗ, ಅವರ ನಾಲಿಗೆಗಳು ಇದಕ್ಕೆ ಒಗ್ಗಿಕೊಂಡವು (ಅವರು ವಿನಮ್ರರಾದರು). ಆಗ ಅದರ ಬೆನ್ನಲ್ಲೇ ಅಲ್ಲಾಹು (ಈ ವಚನವನ್ನು) ಅವತೀರ್ಣಗೊಳಿಸಿದನು: ‘ಪ್ರವಾದಿಯವರು ತಮ್ಮ ಪರಿಪಾಲಕನ (ಅಲ್ಲಾಹನ) ಕಡೆಯಿಂದ ತಮಗೆ ಅವತೀರ್ಣವಾದ ಸಂದೇಶದಲ್ಲಿ ವಿಶ್ವಾಸವಿಟ್ಟಿದ್ದಾರೆ ಮತ್ತು ಸತ್ಯವಿಶ್ವಾಸಿಗಳು ಕೂಡ. ಅವರೆಲ್ಲರೂ ಅಲ್ಲಾಹನಲ್ಲಿ, ಅವನ ಮಲಕ್‌ಗಳಲ್ಲಿ (ದೇವದೂತರಲ್ಲಿ), ಅವನ ಗ್ರಂಥಗಳಲ್ಲಿ ಮತ್ತು ಅವನ ಪ್ರವಾದಿಗಳಲ್ಲಿ ವಿಶ್ವಾಸವಿಟ್ಟಿದ್ದಾರೆ. ನಾವು ಅವನ ಪ್ರವಾದಿಗಳ ಪೈಕಿ ಯಾರ ನಡುವೆಯೂ ತಾರತಮ್ಯ ಮಾಡುವುದಿಲ್ಲ (ಎಂದು ಅವರು ಹೇಳುತ್ತಾರೆ). ಮತ್ತು ಅವರು ಹೇಳಿದರು: 'ನಾವು ಕೇಳಿದೆವು ಮತ್ತು ವಿಧೇಯರಾದೆವು. ಓ ನಮ್ಮ ಪರಿಪಾಲಕನೇ, ನಿನ್ನ ಕ್ಷಮೆಯನ್ನು ಯಾಚಿಸುತ್ತೇವೆ ಮತ್ತು ನಿನ್ನ ಬಳಿಗೇ ಮರಳಲಿಕ್ಕಿದೆ' [ಅಲ್-ಬಕರ: 285]. ಅವರು ಹಾಗೆ ಮಾಡಿದಾಗ, ಅಲ್ಲಾಹು ಆ (ಹಿಂದಿನ ಕಠಿಣ) ಆಜ್ಞೆಯನ್ನು ರದ್ದುಪಡಿಸಿ ಈ ವಚನವನ್ನು ಅವತೀರ್ಣಗೊಳಿಸಿದನು: “ಅಲ್ಲಾಹು ಯಾವುದೇ ಆತ್ಮಕ್ಕೆ ಅದರ ಸಾಮರ್ಥ್ಯಕ್ಕಿಂತ ಮೀರಿದ ಹೊರೆಯನ್ನು ಹೊರಿಸುವುದಿಲ್ಲ. ಅದು ಸಂಪಾದಿಸಿದ ಒಳಿತು ಅದಕ್ಕೇ ಸಿಗುವುದು ಮತ್ತು ಅದು ಮಾಡಿದ ಕೆಡುಕು ಅದರ ಮೇಲೆಯೇ ಇರುವುದು. 'ಓ ನಮ್ಮ ಪರಿಪಾಲಕನೇ, ನಾವು ಮರೆತರೆ ಅಥವಾ ತಪ್ಪೆಸಗಿದರೆ ನಮ್ಮನ್ನು ಹಿಡಿಯಬೇಡ (ಶಿಕ್ಷಿಸಬೇಡ)' [ಅಲ್-ಬಕರ: 286].” ಆಗ ಅಲ್ಲಾಹು (ಅದಕ್ಕೆ ಉತ್ತರವಾಗಿ): "ಹೌದು (ನಾನು ಒಪ್ಪಿದ್ದೇನೆ)" ಎಂದು ಹೇಳಿದನು. 'ಓ ನಮ್ಮ ಪರಿಪಾಲಕನೇ, ನಮ್ಮ ಪೂರ್ವಿಕರ ಮೇಲೆ ಹೊರಿಸಿದಂತಹ (ಕಠಿಣವಾದ) ಭಾರವನ್ನು ನಮ್ಮ ಮೇಲೆ ಹೊರಿಸಬೇಡ' [ಅಲ್-ಬಕರ: 286]. ಆಗ ಅಲ್ಲಾಹು: "ಹೌದು" ಎಂದು ಹೇಳಿದನು. 'ಓ ನಮ್ಮ ಪರಿಪಾಲಕನೇ, ನಮಗೆ ಹೊರಲು ಸಾಧ್ಯವಿಲ್ಲದ ಹೊರೆಯನ್ನು ನಮ್ಮ ಮೇಲೆ ಹೊರಿಸಬೇಡ' [ಅಲ್-ಬಕರ: 286]. ಆಗ ಅಲ್ಲಾಹು: "ಹೌದು" ಎಂದು ಹೇಳಿದನು. 'ಮತ್ತು ನಮ್ಮನ್ನು ಮನ್ನಿಸು, ನಮ್ಮನ್ನು ಕ್ಷಮಿಸು ಮತ್ತು ನಮ್ಮ ಮೇಲೆ ಕರುಣೆ ತೋರು. ನೀನೇ ನಮ್ಮ ರಕ್ಷಕ. ಸತ್ಯನಿಷೇಧಿಗಳ ವಿರುದ್ಧ ನಮಗೆ ಸಹಾಯ ನೀಡು' [ಅಲ್-ಬಕರ: 286]. ಆಗ ಅಲ್ಲಾಹು: "ಹೌದು (ನಾನು ಹಾಗೆ ಮಾಡಿದ್ದೇನೆ)" ಎಂದು ಹೇಳಿದನು.

[صحيح] [رواه مسلم]

الشرح

ಅಲ್ಲಾಹು ತನ್ನ ಪ್ರವಾದಿಯವರಿಗೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಈ ವಚನವನ್ನು ಅವತೀರ್ಣಗೊಳಿಸಿದಾಗ: “ಆಕಾಶಗಳಲ್ಲಿ ಮತ್ತು ಭೂಮಿಯಲ್ಲಿರುವುದೆಲ್ಲವೂ ಅಲ್ಲಾಹನದ್ದೇ” — ಅಂದರೆ ಸೃಷ್ಟಿಸುವ ಮೂಲಕ, ಮಾಲೀಕತ್ವದಲ್ಲಿ, ಮತ್ತು (ಅವುಗಳ ಮೇಲಿನ) ಅಧಿಕಾರ ಹಾಗೂ ಆಡಳಿತದಲ್ಲಿ (ಎಲ್ಲವೂ ಅವನದ್ದೇ). “ನೀವು ಬಹಿರಂಗಪಡಿಸಿದರೂ” — ಅಂದರೆ ನೀವು ತೋರಿಸಿದರೂ ಮತ್ತು ಪ್ರಕಟಪಡಿಸಿದರೂ, “ನಿಮ್ಮ ಮನಸ್ಸಿನಲ್ಲಿರುವುದನ್ನು” — ಅಂದರೆ ನಿಮ್ಮ ಎದೆಗಳಲ್ಲಿರುವುದನ್ನು, “ಅಥವಾ ಅದನ್ನು ಮುಚ್ಚಿಟ್ಟರೂ” — ಅಂದರೆ ಅದನ್ನು ರಹಸ್ಯವಾಗಿಟ್ಟರೂ ಮತ್ತು ನಿಮ್ಮ ಹೃದಯಗಳಲ್ಲಿ ಬಚ್ಚಿಟ್ಟುಕೊಂಡರೂ, “ಅಲ್ಲಾಹು ಅದರ ಬಗ್ಗೆ ನಿಮ್ಮನ್ನು ವಿಚಾರಣೆ ನಡೆಸುತ್ತಾನೆ” ತೀರ್ಪು ನೀಡುವ ದಿನದಂದು. “ತಾನು ಇಚ್ಛಿಸಿದವರನ್ನು ಅವನು ಕ್ಷಮಿಸುತ್ತಾನೆ” ತನ್ನ ಅನುಗ್ರಹ ಮತ್ತು ಕರುಣೆಯಿಂದ; “ಮತ್ತು ತಾನು ಇಚ್ಛಿಸಿದವರನ್ನು ಶಿಕ್ಷಿಸುತ್ತಾನೆ” ತನ್ನ ನ್ಯಾಯದ ಮೂಲಕ. “ಅಲ್ಲಾಹು ಎಲ್ಲದರಲ್ಲೂ ಸಾಮರ್ಥ್ಯವುಳ್ಳವನಾಗಿದ್ದಾನೆ”; ಯಾವ ವಿಷಯವೂ ಅವನನ್ನು ಅಸಮರ್ಥನನ್ನಾಗಿಸುವುದಿಲ್ಲ. ಸಹಾಬಾಗಳು ಇದನ್ನು ಕೇಳಿದಾಗ, ಅದು ಅವರಿಗೆ ಬಹಳ ಕಷ್ಟವೆನಿಸಿತು. ಏಕೆಂದರೆ ಮನಸ್ಸಿನಲ್ಲಿ ಮೂಡುವ ಕೆಟ್ಟ ಆಲೋಚನೆಗಳಿಗೂ ವಿಚಾರಣೆ ನಡೆಸಲಾಗುವುದು ಎಂಬ ವಿಷಯ ಅದರಲ್ಲಿತ್ತು. ಆದ್ದರಿಂದ ಅವರು ಅಲ್ಲಾಹನ ಸಂದೇಶವಾಹಕರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬಳಿಗೆ ಬಂದು ಮೊಣಕಾಲೂರಿ ಕುಳಿತರು. ಅವರು ಹೇಳಿದರು: "ಓ ಅಲ್ಲಾಹನ ಸಂದೇಶವಾಹಕರೇ, ನಮಗೆ ನಿರ್ವಹಿಸಲು ಸಾಧ್ಯವಾಗುವ ದೈಹಿಕ ಕಾರ್ಯಗಳಾದ ನಮಾಝ್, ಉಪವಾಸ, ಜಿಹಾದ್ ಮತ್ತು ದಾನದಂತಹ ಕಾರ್ಯಗಳನ್ನು ನಮಗೆ ವಿಧಿಸಲಾಗಿದೆ (ನಾವು ಅದನ್ನು ಪಾಲಿಸುತ್ತಿದ್ದೇವೆ). ಆದರೆ ಈಗ ನಿಮ್ಮ ಮೇಲೆ ಈ ವಚನವು ಅವತೀರ್ಣವಾಗಿದೆ, ಮತ್ತು ಇದನ್ನು ಪಾಲಿಸಲು ನಮಗೆ ಸಾಧ್ಯವಾಗುತ್ತಿಲ್ಲ." ಆಗ ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅವರಿಗೆ ಹೇಳಿದರು: "ನಿಮಗಿಂತ ಹಿಂದಿನ ಎರಡು ವೇದಗ್ರಂಥಗಳ ಅನುಯಾಯಿಗಳು (ಯಹೂದಿ ಮತ್ತು ಕ್ರೈಸ್ತರು) ಹೇಳಿದಂತೆ ನೀವೂ ಹೇಳಲು ಬಯಸುವಿರಾ? ಅವರು 'ನಾವು ಕೇಳಿದೆವು ಮತ್ತು ಅವಿಧೇಯರಾದೆವು' ಎಂದು ಹೇಳಿದ್ದರು. ಬದಲಾಗಿ ನೀವು ಹೀಗೆ ಹೇಳಿರಿ: 'ನಾವು ಕೇಳಿದೆವು ಮತ್ತು ವಿಧೇಯರಾದೆವು. ಓ ನಮ್ಮ ಪರಿಪಾಲಕನೇ ನಿನ್ನ ಕ್ಷಮೆಯನ್ನು ಯಾಚಿಸುತ್ತೇವೆ ಮತ್ತು ನಿನ್ನ ಬಳಿಗೇ ಮರಳಲಿಕ್ಕಿದೆ'." ಸಹಾಬಾಗಳು ಅಲ್ಲಾಹು ಮತ್ತು ಅವನ ಸಂದೇಶವಾಹಕರ ಆಜ್ಞೆಗೆ ಸ್ಪಂದಿಸಿದರು. ಅವರು: "ನಾವು ಕೇಳಿದೆವು ಮತ್ತು ವಿಧೇಯರಾದೆವು. ಓ ನಮ್ಮ ಪರಿಪಾಲಕನೇ, ನಿನ್ನ ಕ್ಷಮೆಯನ್ನು ಯಾಚಿಸುತ್ತೇವೆ ಮತ್ತು ನಿನ್ನ ಬಳಿಗೇ ಮರಳಲಿಕ್ಕಿದೆ" ಎಂದು ಹೇಳಿದರು. ಮುಸ್ಲಿಮರು ತಮ್ಮ ನಾಲಿಗೆಗಳಿಂದ ಇದನ್ನು ಪಠಿಸಿದಾಗ ಮತ್ತು ಅವರ ಮನಸ್ಸುಗಳು ಇದಕ್ಕೆ ಶರಣಾದಾಗ, ಅಲ್ಲಾಹು ಪ್ರವಾದಿಯವರನ್ನು ಮತ್ತು ಅವರ ಸಮುದಾಯವನ್ನು ಪ್ರಶಂಸಿಸುತ್ತಾ ಈ ವಚನವನ್ನು ಅವತೀರ್ಣಗೊಳಿಸಿದನು: “ಪ್ರವಾದಿಯವರು ತಮ್ಮ ಪರಿಪಾಲಕನ (ಅಲ್ಲಾಹನ) ಕಡೆಯಿಂದ ತಮಗೆ ಅವತೀರ್ಣವಾದ ಸಂದೇಶದಲ್ಲಿ ವಿಶ್ವಾಸವಿಟ್ಟಿದ್ದಾರೆ ಮತ್ತು ಸತ್ಯವಿಶ್ವಾಸಿಗಳು ಕೂಡ.” ಅವರ ನಾಲಿಗೆಗಳು ಹಾಗೂ ಹೃದಯಗಳು ಅಲ್ಲಾಹನ ಆಜ್ಞೆಗೆ ಶರಣಾದವು. “ಅವರೆಲ್ಲರೂ ಅಲ್ಲಾಹನಲ್ಲಿ, ಅವನ ಮಲಕ್‌ಗಳಲ್ಲಿ (ದೇವದೂತರಲ್ಲಿ), ಅವನ ಗ್ರಂಥಗಳಲ್ಲಿ ಮತ್ತು ಅವನ ಪ್ರವಾದಿಗಳಲ್ಲಿ ವಿಶ್ವಾಸವಿಟ್ಟಿದ್ದಾರೆ. ನಾವು ಅವನ ಪ್ರವಾದಿಗಳ ಪೈಕಿ ಯಾರ ನಡುವೆಯೂ ತಾರತಮ್ಯ ಮಾಡುವುದಿಲ್ಲ (ಎಂದು ಅವರು ಹೇಳುತ್ತಾರೆ).” ಬದಲಾಗಿ ನಾವು ಅವರೆಲ್ಲರ ಮೇಲೂ ವಿಶ್ವಾಸವಿಡುತ್ತೇವೆ. “ಮತ್ತು ಅವರು ಹೇಳಿದರು: 'ನಾವು ಕೇಳಿದೆವು’ ” ನಿನ್ನ ಮಾತನ್ನು, 'ಮತ್ತು ವಿಧೇಯರಾದೆವು' ನಿನ್ನ ಆಜ್ಞೆಗೆ. ನಾವು ಬೇಡುತ್ತೇವೆ 'ಓ ನಮ್ಮ ಪರಿಪಾಲಕನೇ, ನಿನ್ನ ಕ್ಷಮೆಯನ್ನು'} ಮತ್ತು ನಿನ್ನ ಮನ್ನಣೆಯನ್ನು. 'ಮತ್ತು ನಿನ್ನ ಬಳಿಗೇ ಮರಳಲಿಕ್ಕಿದೆ' ಅಂದರೆ, ವಿಚಾರಣೆ ನಡೆಯುವ ದಿನದಂದು ಬಂದು ಸೇರುವುದು ನಿನ್ನ ಬಳಿಗೇ ಆಗಿದೆ. ಅವರು ಹೀಗೆ ಮಾಡಿದಾಗ ಮತ್ತು ಅಲ್ಲಾಹನ ಆಜ್ಞೆಗಳಿಗೆ ವಿಧೇಯತೆ ಹಾಗೂ ಪಾಲನೆಯನ್ನು ವ್ಯಕ್ತಪಡಿಸುವಂತೆ ಆದೇಶಿಸಲಾದ ಮಾತುಗಳನ್ನು ಆಡಿದಾಗ, ಅಲ್ಲಾಹು ಈ ಸಮುದಾಯದ ಮೇಲಿನ ಹೊರೆಯನ್ನು ಹಗುರಗೊಳಿಸಿದನು ಮತ್ತು ತನ್ನ ಈ ಮಾತಿನ ಮೂಲಕ ಆ (ಹಿಂದಿನ ಕಠಿಣ) ವಚನವನ್ನು ರದ್ದುಪಡಿಸಿದನು: “ಅಲ್ಲಾಹು ಯಾವುದೇ ಆತ್ಮಕ್ಕೆ ಅದರ ಸಾಮರ್ಥ್ಯಕ್ಕಿಂತ ಮೀರಿದ ಹೊರೆಯನ್ನು ಹೊರಿಸುವುದಿಲ್ಲ” — ಅಂದರೆ ಅದರ ಶಕ್ತಿ, ಸಾಮರ್ಥ್ಯ ಮತ್ತು ಪರಿಶ್ರಮಕ್ಕಿಂತ ಮೀರಿದ್ದನ್ನು ಹೊರಿಸುವುದಿಲ್ಲ. “ಅದಕ್ಕೆ ಸಿಗುವುದು” — ಅಂದರೆ ಪ್ರತಿಫಲವು — “ಅದು ಸಂಪಾದಿಸಿದ ಒಳಿತು” ಮತ್ತು ಅದು ನಿರ್ವಹಿಸಿದ ಸತ್ಕರ್ಮಗಳಿಗೆ. “ಮತ್ತು ಅದರ ಮೇಲೆಯೇ ಇರುವುದು” — ಅಂದರೆ ಶಿಕ್ಷೆಯು — “ಅದು ಸಂಪಾದಿಸಿದ” ಪಾಪ ಮತ್ತು ಕೆಡುಕುಗಳಿಗೆ. ಅಲ್ಲಾಹು ಒಬ್ಬರ ಪಾಪಕ್ಕೆ ಇನ್ನೊಬ್ಬರನ್ನು ಹಿಡಿಯುವುದಿಲ್ಲ, ಮತ್ತು ಮನಸ್ಸಿನಲ್ಲಿ ಬರುವ ಕೆಟ್ಟ ಆಲೋಚನೆಗಳಿಗೆ ಶಿಕ್ಷಿಸುವುದಿಲ್ಲ. 'ಓ ನಮ್ಮ ಪರಿಪಾಲಕನೇ, ನಮ್ಮನ್ನು ಹಿಡಿಯಬೇಡ (ಶಿಕ್ಷಿಸಬೇಡ)' ಮತ್ತು ದಂಡಿಸಬೇಡ, 'ನಾವು ಮರೆತರೆ' ಮತ್ತು ನೆನಪಿಲ್ಲದಿದ್ದರೆ, 'ಅಥವಾ ತಪ್ಪೆಸಗಿದರೆ' ಅಂದರೆ ಉದ್ದೇಶಪೂರ್ವಕವಲ್ಲದೆ ನಾವು ಸರಿಯಾದ ದಾರಿಯನ್ನು ಬಿಟ್ಟರೆ. ಆಗ ಅಲ್ಲಾಹು ಅವರ ಪ್ರಾರ್ಥನೆಗೆ ಉತ್ತರಿಸುತ್ತಾ: "ಹೌದು, ನಾನು (ಹಾಗೆ) ಮಾಡಿದ್ದೇನೆ" ಎಂದು ಹೇಳಿದನು. 'ಓ ನಮ್ಮ ಪರಿಪಾಲಕನೇ, ನಮ್ಮ ಮೇಲೆ ಹೊರೆಯನ್ನು ಹೊರಿಸಬೇಡ' ಅಂದರೆ ಕಷ್ಟ ಮತ್ತು ಭಾರವನ್ನು, 'ನಮಗಿಂತ ಹಿಂದಿನವರ ಮೇಲೆ ನೀನು ಹೊರಿಸಿದಂತೆ' ಅಂದರೆ ಇಸ್ರಾಯೇಲ್ ಮಕ್ಕಳ ಮೇಲೆ ಮತ್ತು ಇತರರ ಮೇಲೆ ಹೊರಿಸಿದಂತೆ. ಆಗ ಅಲ್ಲಾಹು ಉತ್ತರಿಸುತ್ತಾ: "ಹೌದು, ನಾನು ಮಾಡಿದ್ದೇನೆ" ಎಂದು ಹೇಳಿದನು. 'ಓ ನಮ್ಮ ಪರಿಪಾಲಕನೇ, ನಮಗೆ ಹೊರಲು ಸಾಧ್ಯವಿಲ್ಲದ ಹೊರೆಯನ್ನು ನಮ್ಮ ಮೇಲೆ ಹೊರಿಸಬೇಡ' ಅಂದರೆ, ನಮಗೆ ಹೊರಲು ಅಸಾಧ್ಯವಾದ ಕಟ್ಟುಪಾಡುಗಳು, ಪರೀಕ್ಷೆಗಳು ಮತ್ತು ವಿಷಯಗಳನ್ನು ನಮ್ಮ ಮೇಲೆ ಹಾಕಬೇಡ. ಆಗ ಅಲ್ಲಾಹು: "ಹೌದು, ನಾನು ಹಾಗೆಯೇ ಮಾಡಿದ್ದೇನೆ" ಎಂದು ಹೇಳಿದನು. 'ಮತ್ತು ನಮ್ಮನ್ನು ಮನ್ನಿಸು' ಅಂದರೆ ನಮ್ಮ ಪಾಪಗಳನ್ನು ಅಳಿಸಿಹಾಕು, 'ನಮ್ಮನ್ನು ಕ್ಷಮಿಸು' ಅಂದರೆ ನಮ್ಮ ಪಾಪಗಳನ್ನು ಮುಚ್ಚಿಡು ಮತ್ತು ಅದನ್ನು ನಿರ್ಲಕ್ಷಿಸು (ಶಿಕ್ಷಿಸಬೇಡ). 'ನಮ್ಮ ಮೇಲೆ ಕರುಣೆ ತೋರು' ನಿನ್ನ ವಿಶಾಲವಾದ ಕರುಣೆಯಿಂದ. 'ನೀನೇ ನಮ್ಮ ಮೌಲಾ' ಅಂದರೆ ನಮ್ಮ ಒಡೆಯ ಮತ್ತು ರಕ್ಷಕ. 'ಸತ್ಯನಿಷೇಧಿಗಳ ವಿರುದ್ಧ ನಮಗೆ ಸಹಾಯ ನೀಡು' ಅಂದರೆ ಅವರೊಂದಿಗೆ ಯುದ್ಧ ಮತ್ತು ಹೋರಾಟ ಮಾಡುವಾಗ ಅವರ ವಿರುದ್ಧ ನಮಗೆ ಸಾಕ್ಷ್ಯ ಮತ್ತು ವಿಜಯವನ್ನು ನೀಡು. ಆಗ ಅಲ್ಲಾಹು ಅದಕ್ಕೆ ಉತ್ತರಿಸುತ್ತಾ: "ಹೌದು, ನಾನು (ಹಾಗೆ) ಮಾಡಿದ್ದೇನೆ" ಎಂದು ಹೇಳಿದನು.

فوائد الحديث

ಈ ಸಮುದಾಯದ ಮೇಲೆ ಅಲ್ಲಾಹನಿಗಿರುವ ಕರುಣೆಯನ್ನು ಇದು ವಿವರಿಸುತ್ತದೆ. ಇದಕ್ಕೆ ಕಾರಣ ಈ ಸಮುದಾಯದ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ). ಅವರ ಶ್ರೇಷ್ಠತೆಯನ್ನು ಸಾರುತ್ತಾ ಅಲ್ಲಾಹು ಹೀಗೆ ಹೇಳಿದ್ದಾನೆ: “ನಾವು ನಿಮ್ಮನ್ನು ಸರ್ವಲೋಕಗಳಿಗೆ ಕರುಣೆಯಾಗಿಯಲ್ಲದೆ ಕಳುಹಿಸಿಲ್ಲ” [ಅಲ್-ಅಂಬಿಯಾ: 107].

ಕುರ್‌ಆನ್‌ನಲ್ಲಿ 'ನಸ್ಖ್' (ರದ್ದುಪಡಿಸುವುದು) ಇದೆ ಎಂದು ದೃಢೀಕರಿಸಲಾಗಿದೆ. ಅಂದರೆ ಕುರ್‌ಆನ್‌ನಲ್ಲಿ ಕೆಲವು ಭಾಗಗಳನ್ನು ಪಠಿಸಲಾಗುತ್ತದೆ, ಆದರೆ ಅದರ ವಿಧಿಯು ರದ್ದುಗೊಂಡಿರುತ್ತದೆ, ಆದ್ದರಿಂದ ಅದರಂತೆ ಕಾರ್ಯನಿರ್ವಹಿಸಲಾಗುವುದಿಲ್ಲ.

ಸಹಾಬಾಗಳ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ಶ್ರೇಷ್ಠತೆಯನ್ನು, ಮತ್ತು ಅವರು ಅಲ್ಲಾಹನ ಆಜ್ಞೆಗೆ ಶರಣಾಗುತ್ತಿದ್ದರು ಹಾಗೂ ಅವನ ಸಂದೇಶವಾಹಕರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಆಜ್ಞೆಯನ್ನು ಪಾಲಿಸುತ್ತಿದ್ದರು ಎಂಬುದನ್ನು ತಿಳಿಸಲಾಗಿದೆ.

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಮ್ಮ ಸಮುದಾಯದ ಬಗ್ಗೆ ಹೊಂದಿದ್ದ ತೀವ್ರ ಕಾಳಜಿ ಯನ್ನು ತಿಳಿಸಲಾಗಿದೆ. ಅಲ್ಲಾಹನ ಆಜ್ಞೆಗಳನ್ನು ತಿರಸ್ಕರಿಸುವ ಮೂಲಕ ತಮ್ಮ ಸಮುದಾಯವು ಹಿಂದಿನ ಸಮುದಾಯಗಳ ದಾರಿಯನ್ನು ಹಿಡಿಯಬಾರದು ಎಂದು ಅವರು ಬಯಸುತ್ತಿದ್ದರು.

ಅಲ್ಲಾಹನ ಆಜ್ಞೆಗೆ ಶರಣಾಗುವುದು ಕಡ್ಡಾಯವಾಗಿದೆ ಮತ್ತು ಅವನ ಆಜ್ಞೆಯ ವಿರುದ್ಧ ಆಕ್ಷೇಪ ಎತ್ತುವ ಬಗ್ಗೆ ಎಚ್ಚರದಿಂದಿರಬೇಕು. ಏಕೆಂದರೆ ಆಕ್ಷೇಪಿಸುವುದು ವೇದಗ್ರಂಥದವರನ್ನು (ಅಹ್ಲುಲ್ ಕಿತಾಬ್) ಹೋಲುವಂತಾಗುತ್ತದೆ.

ಹಿಂದಿನ ಸಮುದಾಯಗಳಿಗಿಂತ ಈ ಸಮುದಾಯಕ್ಕೆ ಇರುವ ಶ್ರೇಷ್ಠತೆಯನ್ನು ಇದು ತೋರಿಸುತ್ತದೆ. ಅವರು ತಮ್ಮ ಪ್ರವಾದಿಗಳೊಂದಿಗೆ "ನಾವು ಕೇಳಿದೆವು ಮತ್ತು ಅವಿಧೇಯತೆ ತೋರಿದೆವು" ಎಂದರು. ಆದರೆ ಈ ಸಮುದಾಯದವರು "ನಾವು ಕೇಳಿದೆವು ಮತ್ತು ವಿಧೇಯರಾದೆವು" ಎಂದರು.

ಈ ಸಮುದಾಯದ ಮೇಲಿದ್ದ ಸಂಕಷ್ಟವನ್ನು ತೆಗೆದುಹಾಕಿರುವುದು ಇದರ ಶ್ರೇಷ್ಠತೆಯಾಗಿದೆ. ಮರೆವು ಮತ್ತು (ತಿಳಿಯದೆ ಮಾಡಿದ) ತಪ್ಪುಗಳಿಗೆ ಶಿಕ್ಷಿಸದಿರಲು ಕೋರಿದ ಪ್ರಾರ್ಥನೆಯನ್ನು ಸ್ವೀಕರಿಸಲಾಗಿದೆ. ಹಿಂದಿನವರ ಮೇಲಿದ್ದಂತಹ ಭಾರವಾದ ಹೊರೆಗಳನ್ನು ಇವರ ಮೇಲಿಂದ ತೆಗೆಯಲಾಗಿದೆ ಮತ್ತು ಇವರಿಗೆ ಹೊರಲಾರದ ಹೊರೆಯನ್ನು ಹೊರಿಸಲಾಗಿಲ್ಲ.

ಅಲ್ಲಾಹು ನಮಗೆ ಹೊರಲು ಸಾಧ್ಯವಿಲ್ಲದ ಹೊರೆಯನ್ನು ನಮ್ಮ ಮೇಲೆ ಹೊರಿಸುವುದಿಲ್ಲ ಮತ್ತು ನಮ್ಮ ಸಾಮರ್ಥ್ಯಕ್ಕೆ ಮೀರಿದ್ದನ್ನು ವಿಧಿಸುವುದಿಲ್ಲ. ನಮ್ಮ ಎದೆಯಲ್ಲಿ ಮೂಡುವ ಕೆಟ್ಟ ಆಲೋಚನೆಗಳಿಗೆ ನಾವು ಒಲವು ತೋರಿಸದಿದ್ದರೆ, ಅದರಲ್ಲಿ ನೆಮ್ಮದಿ ಕಂಡುಕೊಳ್ಳದಿದ್ದರೆ ಮತ್ತು ಅದನ್ನು ಕಾರ್ಯರೂಪಕ್ಕೆ ತರದಿದ್ದರೆ, ಅವು ನಮಗೆ ಹಾನಿ ಮಾಡುವುದಿಲ್ಲ.

ಈ ಪ್ರಾರ್ಥನೆಯನ್ನು ಅಲ್ಲಾಹು, ಪ್ರವಾದಿಯವರಿಂದ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮತ್ತು ಸತ್ಯವಿಶ್ವಾಸಿಗಳಿಂದ ಉಲ್ಲೇಖಿಸಿ, ತನ್ನ ಗ್ರಂಥದಲ್ಲಿ ಇರಿಸಿದ್ದಾನೆ. ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮತ್ತು ಸಹಾಬಾಗಳ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ನಂತರ ಬರುವವರು ಇದನ್ನು ಪ್ರಾರ್ಥಿಸಲಿ ಎಂಬುದು ಇದರ ಉದ್ದೇಶವಾಗಿದೆ. ಇದು ಕಂಠಪಾಠ ಮಾಡಬೇಕಾದ ಮತ್ತು ಹೆಚ್ಚಾಗಿ ಪ್ರಾರ್ಥಿಸಬೇಕಾದ ಪ್ರಾರ್ಥನೆಯಾಗಿದೆ.

التصنيفات

Virtues of Surahs and Verses, Interpretation of verses