ನಿನ್ನ ನಾಲಿಗೆಯು ಅಲ್ಲಾಹನ ಸ್ಮರಣೆಯಿಂದ ಸದಾ ಒದ್ದೆಯಾಗಿರಲಿ (ಹಸಿಯಾಗಿರಲಿ)

ನಿನ್ನ ನಾಲಿಗೆಯು ಅಲ್ಲಾಹನ ಸ್ಮರಣೆಯಿಂದ ಸದಾ ಒದ್ದೆಯಾಗಿರಲಿ (ಹಸಿಯಾಗಿರಲಿ)

ಅಬ್ದುಲ್ಲಾ ಇಬ್ನ್ ಬುಸ್ರ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅವರು ಹೇಳಿದರು: ಒಬ್ಬ ವ್ಯಕ್ತಿ ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬಳಿಗೆ ಬಂದು, ಹೇಳಿದರು: "ಓ ಅಲ್ಲಾಹನ ಸಂದೇಶವಾಹಕರೇ! ಖಂಡಿತವಾಗಿಯೂ ಇಸ್ಲಾಂನ ಶರೀಅತ್‌ಗಳು (ಧಾರ್ಮಿಕ ಕಾರ್ಯಗಳು/ವಿಧಿಗಳು) ನಮಗೆ ಹೆಚ್ಚಾಗಿವೆ. ಆದ್ದರಿಂದ, ನಾವು ಬದ್ಧರಾಗಿರಲು ಒಂದು ಸಮಗ್ರವಾದ ದ್ವಾರವನ್ನು ತಿಳಿಸಿರಿ?" ಅವರು (ಪ್ರವಾದಿ) ಹೇಳಿದರು: "ನಿನ್ನ ನಾಲಿಗೆಯು ಅಲ್ಲಾಹನ ಸ್ಮರಣೆಯಿಂದ ಸದಾ ಒದ್ದೆಯಾಗಿರಲಿ (ಹಸಿಯಾಗಿರಲಿ)". ಮುಆದ್ ಇಬ್ನ್ ಜಬಲ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರವರ ಹದೀಸ್‌ನ ಇನ್ನೊಂದು ವರದಿಯಲ್ಲಿ ಹೀಗಿದೆ: ನಾನು ಅಲ್ಲಾಹನ ಸಂದೇಶವಾಹಕರಿಂದ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಕೊನೆಯದಾಗಿ ಬೇರ್ಪಟ್ಟಾಗ ನಾನು ಕೇಳಿದೆನು: "ಯಾವ ಕಾರ್ಯಗಳು ಅತ್ಯುತ್ತಮವಾಗಿವೆ ಮತ್ತು ಅಲ್ಲಾಹನಿಗೆ ಅತ್ಯಂತ ಸಮೀಪವಾಗಿವೆ?" ಅವರು ಹೇಳಿದರು: "ನಿನ್ನ ನಾಲಿಗೆಯು ಅಲ್ಲಾಹನ ಸ್ಮರಣೆಯಿಂದ ಒದ್ದೆಯಾಗಿರುವ (ಹಸಿಯಾಗಿರುವ) ಸ್ಥಿತಿಯಲ್ಲಿ ನೀನು ಮರಣಹೊಂದುವುದು".

[صحيح] [رواه أحمد والترمذي وابن ماجه وابن حبان]

الشرح

ಒಬ್ಬ ವ್ಯಕ್ತಿ ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬಳಿಗೆ ಬಂದು, ಐಚ್ಛಿಕ ಆರಾಧನೆಗಳು ಹೆಚ್ಚಾದ ಕಾರಣ ಅವುಗಳನ್ನು ನಿರ್ವಹಿಸಲು ತನಗೆ ಸಾಧ್ಯವಾಗುವುದಿಲ್ಲವೆಂದು ದೂರಿಕೊಂಡರು. ನಂತರ ಅವರು, ಹೆಚ್ಚು ಪ್ರತಿಫಲವನ್ನು ಹೊಂದಿರುವ ಮತ್ತು ಸರಳವಾಗಿರುವ, ತನಗೆ ಮಾಡಲು ಸಾಧ್ಯವಾಗುವ ಮತ್ತು ಬಿಗಿಯಾಗಿ ಹಿಡಿದುಕೊಳ್ಳಬಹುದಾದ ಒಂದು ಕಾರ್ಯದ ಬಗ್ಗೆ ತಿಳಿಸಿಕೊಡಬೇಕೆಂದು ಪ್ರವಾದಿಯವರೊಂದಿಗೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ)ವಿನಂತಿಸಿದರು. ಆಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಆ ವ್ಯಕ್ತಿಯೊಂದಿಗೆ, ಅವರ ನಾಲಗೆಯು ಎಲ್ಲಾ ಸಮಯ ಮತ್ತು ಎಲ್ಲಾ ಪರಿಸ್ಥಿತಿಗಳಲ್ಲಿ ತಸ್ಬೀಹ್, ತಹ್ಮೀದ್‌, ಇಸ್ತಿಗ್ಫಾರ್, ದುಆ ಮುಂತಾದ ಅಲ್ಲಾಹನ ಸ್ಮರಣೆಗಳ ಮೂಲಕ ಸದಾ ಹಸಿಯಾಗಿ, ಅಲುಗಾಡುತ್ತಾ ಇರಬೇಕೆಂದು ಸೂಚಿಸಿದರು.

فوائد الحديث

ನಿರಂತರ ಅಲ್ಲಾಹನನ್ನು ಸ್ಮರಿಸುವುದರ ಶ್ರೇಷ್ಠತೆಯನ್ನು ತಿಳಿಸಲಾಗಿದೆ.

ಪ್ರತಿಫಲದ ಮಾರ್ಗಗಳನ್ನು ಸುಲಭಗೊಳಿಸಿದ್ದು ಅಲ್ಲಾಹನ ಅತಿದೊಡ್ಡ ಔದಾರ್ಯಗಳಲ್ಲಿ ಒಂದಾಗಿದೆ.

ಒಳಿತು ಮತ್ತು ಸತ್ಕಾರ್ಯಗಳನ್ನು ನಿರ್ವಹಿಸುವ ವಿಷಯದಲ್ಲಿ ಜನರ ಶ್ರೇಷ್ಠತೆಯಲ್ಲಿ ಹೆಚ್ಚು-ಕಡಿಮೆಯಿರುತ್ತದೆ.

ತಸ್ಬೀಹ್, ತಹ್ಮೀದ್‌, ತಹ್ಲೀಲ್, ತಕ್ಬೀರ್‌ ಮುಂತಾದ ಅಲ್ಲಾಹನ ಸ್ಮರಣೆಗಳನ್ನು ಹೃದಯ ಸಾನಿಧ್ಯತೆಯೊಂದಿಗೆ ಹೆಚ್ಚು ಹೆಚ್ಚಾಗಿ ನಿರ್ವಹಿಸುವುದು ಹಲವಾರು ಐಚ್ಛಿಕ ಸತ್ಕರ್ಮಗಳ ಸ್ಥಾನವನ್ನು ಹೊಂದಿದೆ.

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಪ್ರಶ್ನೆ ಕೇಳುವವರಿಗೆ ಸಂಪೂರ್ಣ ಪರಿಗಣನೆ ನೀಡುತ್ತಿದ್ದರು. ಏಕೆಂದರೆ ಅವರು ಪ್ರತಿಯೊಬ್ಬರಿಗೂ ಸೂಕ್ತ ರೀತಿಯಲ್ಲಿ ಉತ್ತರ ನೀಡುತ್ತಿದ್ದರು.