ಓ ಅಲ್ಲಾಹನ ಸಂದೇಶವಾಹಕರೇ, ಸಂಪತ್ತು (ಜಾನುವಾರುಗಳು) ನಾಶವಾಗಿವೆ ಮತ್ತು ದಾರಿಗಳು ಕಡಿದುಹೋಗಿವೆ (ಪ್ರಯಾಣ ಸ್ಥಗಿತಗೊಂಡಿದೆ).…

ಓ ಅಲ್ಲಾಹನ ಸಂದೇಶವಾಹಕರೇ, ಸಂಪತ್ತು (ಜಾನುವಾರುಗಳು) ನಾಶವಾಗಿವೆ ಮತ್ತು ದಾರಿಗಳು ಕಡಿದುಹೋಗಿವೆ (ಪ್ರಯಾಣ ಸ್ಥಗಿತಗೊಂಡಿದೆ). ಆದ್ದರಿಂದ ನಮಗೆ ಮಳೆ ಸುರಿಸುವಂತೆ ಅಲ್ಲಾಹನಲ್ಲಿ ಪ್ರಾರ್ಥಿಸಿರಿ

ಅನಸ್ ಇಬ್ನ್ ಮಾಲಿಕ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಶುಕ್ರವಾರದಂದು ಒಬ್ಬ ವ್ಯಕ್ತಿ ಮಸೀದಿಯೊಳಗೆ 'ದಾರುಲ್ ಖದಾ' ಕಡೆಗಿರುವ ಬಾಗಿಲಿನಿಂದ ಪ್ರವೇಶಿಸಿದನು. ಆಗ ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನಿಂತು ಪ್ರವಚನ ನೀಡುತ್ತಿದ್ದರು. ಆ ವ್ಯಕ್ತಿ ಅಲ್ಲಾಹನ ಸಂದೇಶವಾಹಕರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಕಡೆಗೆ ಮುಖಮಾಡಿ ನಿಂತನು. ನಂತರ ಹೇಳಿದನು: "ಓ ಅಲ್ಲಾಹನ ಸಂದೇಶವಾಹಕರೇ, ಸಂಪತ್ತು (ಜಾನುವಾರುಗಳು) ನಾಶವಾಗಿವೆ ಮತ್ತು ದಾರಿಗಳು ಕಡಿದುಹೋಗಿವೆ (ಪ್ರಯಾಣ ಸ್ಥಗಿತಗೊಂಡಿದೆ). ಆದ್ದರಿಂದ ನಮಗೆ ಮಳೆ ಸುರಿಸುವಂತೆ ಅಲ್ಲಾಹನಲ್ಲಿ ಪ್ರಾರ್ಥಿಸಿರಿ". ಆಗ ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಮ್ಮ ಕೈಗಳನ್ನು ಎತ್ತಿ ಪ್ರಾರ್ಥಿಸಿದರು: "ಅಲ್ಲಾಹುಮ್ಮ ಅಗಿಸ್‌ನಾ, ಅಲ್ಲಾಹುಮ್ಮ ಅಗಿಸ್‌ನಾ, ಅಲ್ಲಾಹುಮ್ಮ ಅಗಿಸ್‌ನಾ" (ಓ ಅಲ್ಲಾಹನೇ, ನಮಗೆ ಮಳೆ ಸುರಿಸು! ಓ ಅಲ್ಲಾಹನೇ, ನಮಗೆ ಮಳೆ ಸುರಿಸು! ಓ ಅಲ್ಲಾಹನೇ, ನಮಗೆ ಮಳೆ ಸುರಿಸು!). ಅನಸ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ಹೇಳುತ್ತಾರೆ: "ಇಲ್ಲ! ಅಲ್ಲಾಹನಾಣೆ, ನಾವು ಆಕಾಶದಲ್ಲಿ ಯಾವುದೇ ಮೋಡವನ್ನಾಗಲಿ ಅಥವಾ ಮೋಡದ ಚೂರನ್ನಾಗಲಿ ಕಾಣುತ್ತಿರಲಿಲ್ಲ. ನಮ್ಮ (ಮಸೀದಿ) ಮತ್ತು 'ಸಲ್ಅ್' ಬೆಟ್ಟದ ನಡುವೆ ಯಾವುದೇ ಮನೆ ಅಥವಾ ಕಟ್ಟಡ (ಮರೆಮಾಡಲು) ಇರಲಿಲ್ಲ". ಅವರು (ಅನಸ್) ಹೇಳುತ್ತಾರೆ: "ಆಗ ಅದರ (ಬೆಟ್ಟದ) ಹಿಂದಿನಿಂದ ಗುರಾಣಿಯಂತಹ (ದುಂಡಗಿನ) ಮೋಡವೊಂದು ಗೋಚರಿಸಿತು. ಅದು ಆಕಾಶದ ಮಧ್ಯಭಾಗಕ್ಕೆ ತಲುಪಿದಾಗ ಹರಡಿಕೊಂಡಿತು. ನಂತರ ಮಳೆ ಸುರಿಯಿತು. ಅಲ್ಲಾಹನಾಣೆ, ನಾವು ಆರು ದಿನಗಳ ಕಾಲ ಸೂರ್ಯನನ್ನು ನೋಡಲೇ ಇಲ್ಲ". ನಂತರ ಮುಂದಿನ ಶುಕ್ರವಾರ ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನಿಂತು ಪ್ರವಚನ ನೀಡುತ್ತಿರುವಾಗ, ಅದೇ ಬಾಗಿಲಿನಿಂದ ಒಬ್ಬ ವ್ಯಕ್ತಿ ಪ್ರವೇಶಿಸಿದನು. ಅವನು ಅವರ ಕಡೆಗೆ ಮುಖಮಾಡಿ ನಿಂತನು. ಅವನು ಹೇಳಿದನು: "ಓ ಅಲ್ಲಾಹನ ಸಂದೇಶವಾಹಕರೇ, ಸಂಪತ್ತು (ಜಾನುವಾರುಗಳು) ನಾಶವಾಗಿವೆ ಮತ್ತು ದಾರಿಗಳು ಕಡಿದುಹೋಗಿವೆ. ಆದ್ದರಿಂದ ಮಳೆಯನ್ನು ನಮ್ಮಿಂದ ತಡೆಹಿಡಿಯುವಂತೆ ಅಲ್ಲಾಹನಲ್ಲಿ ಪ್ರಾರ್ಥಿಸಿರಿ". ಅವರು (ಅನಸ್) ಹೇಳುತ್ತಾರೆ: ಆಗ ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಮ್ಮ ಕೈಗಳನ್ನು ಎತ್ತಿ ಪ್ರಾರ್ಥಿಸಿದರು: "ಅಲ್ಲಾಹುಮ್ಮ ಹವಾಲೈನಾ ವಲಾ ಅಲೈನಾ, ಅಲ್ಲಾಹುಮ್ಮ ಅಲಲ್-ಆಕಾಮಿ ವಝ್ಝಿರಾಬಿ, ವ ಬುತೂನಿಲ್-ಔದಿಯತಿ, ವ ಮನಾಬಿತಿ ಶ್ಶಜರ್" (ಓ ಅಲ್ಲಾಹನೇ, ನಮ್ಮ ಸುತ್ತಮುತ್ತಲು (ಸುರಿಸು), ನಮ್ಮ ಮೇಲಲ್ಲ. ಓ ಅಲ್ಲಾಹನೇ, ಬೆಟ್ಟಗುಡ್ಡಗಳ ಮೇಲೆ, ದಿಬ್ಬಗಳ ಮೇಲೆ, ಕಣಿವೆಗಳ ಒಳಭಾಗದಲ್ಲಿ ಮತ್ತು ಮರಗಳು ಬೆಳೆಯುವ ಸ್ಥಳಗಳಲ್ಲಿ ಸುರಿಸು. ಅವರು (ಅನಸ್) ಹೇಳುತ್ತಾರೆ: "ಆಗ ಮಳೆ ನಿಂತುಹೋಯಿತು. ನಾವು ಬಿಸಿಲಿನಲ್ಲಿ ನಡೆದುಕೊಂಡು ಹೋದೆವು". (ವರದಿಗಾರ) ಶರೀಕ್ ಹೇಳುತ್ತಾರೆ: ನಾನು ಅನಸ್ ಇಬ್ನ್ ಮಾಲಿಕ್ ರಲ್ಲಿ, "ಅದು (ಎರಡನೇ ಬಾರಿ ಬಂದವನು) ಮೊದಲ ವ್ಯಕ್ತಿಯೇ?" ಎಂದು ಕೇಳಿದೆನು. ಅವರು ಹೇಳಿದರು: "ನನಗೆ ತಿಳಿಯದು".

[صحيح] [متفق عليه]

الشرح

ಒಬ್ಬ ಅಅರಾಬಿ (ಗ್ರಾಮೀಣ ಅರಬ್ಬ) ಶುಕ್ರವಾರದಂದು ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮಸೀದಿಗೆ ಪಶ್ಚಿಮದ ಬಾಗಿಲಿನಿಂದ (ಉಮರ್ ಇಬ್ನುಲ್ ಖತ್ತಾಬ್ ರವರ ಮನೆಯ ಕಡೆಗಿದ್ದ ಬಾಗಿಲಿನಿಂದ) ಪ್ರವೇಶಿಸಿದನು. ಆಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನಿಂತು ಪ್ರವಚನ ನೀಡುತ್ತಿದ್ದರು. ಆ ವ್ಯಕ್ತಿ ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಕಡೆಗೆ ಮುಖಮಾಡಿ ಹೇಳಿದನು: ಓ ಅಲ್ಲಾಹನ ಸಂದೇಶವಾಹಕರೇ, ಜಾನುವಾರುಗಳು ನಾಶವಾಗಿವೆ ಮತ್ತು ದಾರಿಗಳು ಕಡಿದುಹೋಗಿವೆ — ಅಂದರೆ ಜನರನ್ನು ಸಾಗಿಸುವ ಪ್ರಾಣಿಗಳು ಸತ್ತಿವೆ ಅಥವಾ ಹಸಿವಿನಿಂದ ದುರ್ಬಲವಾಗಿವೆ — ಆದ್ದರಿಂದ ನಮಗೆ ಮಳೆ ಸುರಿಸುವಂತೆ ಅಲ್ಲಾಹನಲ್ಲಿ ಪ್ರಾರ್ಥಿಸಿರಿ. ಆಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಮ್ಮ ಕೈಗಳನ್ನು ಎತ್ತಿ ಪ್ರಾರ್ಥಿಸಿದರು: ಓ ಅಲ್ಲಾಹನೇ ನಮಗೆ ಮಳೆ ಸುರಿಸು, ಓ ಅಲ್ಲಾಹನೇ ನಮಗೆ ಮಳೆ ಸುರಿಸು, ಓ ಅಲ್ಲಾಹನೇ ನಮಗೆ ಮಳೆ ಸುರಿಸು. ಅನಸ್ ಇಬ್ನ್ ಮಾಲಿಕ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ಹೇಳುತ್ತಾರೆ: ಅಲ್ಲಾಹನಾಣೆ, ನಾವು ಆಕಾಶದಲ್ಲಿ ಮೋಡದ ಒಂದು ತುಂಡನ್ನೂ ಕಾಣುತ್ತಿರಲಿಲ್ಲ. ಮಸೀದಿಯ ಪಶ್ಚಿಮಕ್ಕಿದ್ದ 'ಸಲ್ಅ್' ಬೆಟ್ಟದ ಕಡೆಯಿಂದ (ಸಾಮಾನ್ಯವಾಗಿ) ಮೋಡಗಳು ಗೋಚರಿಸುತ್ತಿದ್ದವು. ಮಸೀದಿಯಲ್ಲಿರುವ ನಮಗೆ ಮತ್ತು ಬೆಟ್ಟದ ನಡುವೆ (ಮೋಡಗಳನ್ನು) ನೋಡಲು ಅಡ್ಡಿಯಾಗುವಂತಹ ಯಾವುದೇ ಮನೆ ಅಥವಾ ಕಟ್ಟಡವಿರಲಿಲ್ಲ. ಅನಸ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ಹೇಳುತ್ತಾರೆ: ಆಗ ಅದರ (ಬೆಟ್ಟದ) ಹಿಂದಿನಿಂದ ಗುರಾಣಿಯಂತಹ ಅಥವಾ ಚಿಕ್ಕ ತಟ್ಟೆಯಂತಹ ದುಂಡಗಿನ ಮೋಡವೊಂದು ಗೋಚರಿಸಿತು. ಅದು ಮದೀನಾದ ಆಕಾಶದ ಮಧ್ಯಕ್ಕೆ ತಲುಪಿದಾಗ ಹರಡಿಕೊಂಡಿತು. ನಂತರ ಮಳೆ ಸುರಿಯಿತು. ಅಲ್ಲಾಹನಾಣೆ, ನಾವು ಮಳೆಯ ಕಾರಣದಿಂದ ಮುಂದಿನ ಶುಕ್ರವಾರದವರೆಗೂ ಸೂರ್ಯನನ್ನು ನೋಡಲೇ ಇಲ್ಲ. ಮುಂದಿನ ಶುಕ್ರವಾರ, ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನಿಂತು ಪ್ರವಚನ ನೀಡುತ್ತಿರುವಾಗ, ಅದೇ ಬಾಗಿಲಿನಿಂದ ಆ ವ್ಯಕ್ತಿ ಪ್ರವೇಶಿಸಿದನು. ಅವನು ಅವರ ಕಡೆಗೆ ಮುಖಮಾಡಿ ನಿಂತು ಹೇಳಿದನು: ಓ ಅಲ್ಲಾಹನ ಸಂದೇಶವಾಹಕರೇ, ಸಂಪತ್ತು (ಜಾನುವಾರು/ಮನೆಗಳು) ನಾಶವಾಗಿವೆ ಮತ್ತು ದಾರಿಗಳು ಕಡಿದುಹೋಗಿವೆ (ಪ್ರವಾಹದಿಂದ). ಆದ್ದರಿಂದ ಮಳೆಯನ್ನು ನಮ್ಮಿಂದ ತಡೆಹಿಡಿಯುವಂತೆ ಅಲ್ಲಾಹನಲ್ಲಿ ಪ್ರಾರ್ಥಿಸಿರಿ. ಅವರು (ಅನಸ್) ಹೇಳುತ್ತಾರೆ: ಆಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಮ್ಮ ಕೈಗಳನ್ನು ಎತ್ತಿ ಪ್ರಾರ್ಥಿಸಿದರು: ಓ ಅಲ್ಲಾಹನೇ, ಮಳೆಯನ್ನು ನಮ್ಮ ಸುತ್ತಮುತ್ತಲು ಸುರಿಸು, ನಮ್ಮ ಮೇಲಲ್ಲ. ಓ ಅಲ್ಲಾಹನೇ, ಭೂಮಿಯ ಎತ್ತರದ ಪ್ರದೇಶಗಳಾದ ದಿಬ್ಬಗಳು, ಸಣ್ಣ ಬೆಟ್ಟಗಳು, ಕಣಿವೆಗಳ ಒಳಭಾಗ ಮತ್ತು ಮರಗಳು ಬೆಳೆಯುವ ಸ್ಥಳಗಳಲ್ಲಿ (ಸುರಿಸು). ಅನಸ್ ಹೇಳುತ್ತಾರೆ: ಆಗ ಮಳೆ ಸುರಿಸುತ್ತಿದ್ದ ಮೋಡಗಳು ಸರಿದವು, ಮತ್ತು ನಾವು ಬಿಸಿಲಿನಲ್ಲಿ ನಡೆದುಕೊಂಡು ಹೋದೆವು.

فوائد الحديث

ಜೀವನೋಪಾಯವನ್ನು ಹುಡುಕಲು ಕಾರಣಗಳನ್ನು ಅವಲಂಬಿಸುವುದು — ಉದಾಹರಣೆಗೆ ಪ್ರಾರ್ಥಿಸುವುದು ಮತ್ತು ಭೂಮಿಯಲ್ಲಿ ಸಂಚರಿಸುವುದು — ಅಲ್ಲಾಹನ ಮೇಲಿನ ಭರವಸೆ ಇಡುವುದಕ್ಕೆ ವಿರುದ್ಧವಾಗುವುದಿಲ್ಲ.

ಮಳೆಗಾಗಿ ಪ್ರಾರ್ಥಿಸುವಾಗ ಪ್ರವಾದಿಯವರ ಈ ಪ್ರಾರ್ಥನೆಯನ್ನು ಪ್ರಾರ್ಥಿಸುವುದು ಅಪೇಕ್ಷಿತವಾಗಿದೆ.

ಮಳೆಯಿಂದ ಹಾನಿಯುಂಟಾದಾಗ 'ಇಸ್ತಿಸ್‌ಹಾಅ್' (ಆಕಾಶ ತಿಳಿಯಾಗಲು/ಮಳೆ ನಿಲ್ಲಲು ಪ್ರಾರ್ಥಿಸುವುದು) ಮಾಡುವುದು ಅನುಮತಿಸಲಾಗಿದೆ. ಮಳೆಯನ್ನು ಬೆಟ್ಟಗುಡ್ಡಗಳು, ದಿಬ್ಬಗಳು ಮತ್ತು ಕಣಿವೆಗಳ ಒಳಭಾಗಕ್ಕೆ ಸೀಮಿತಗೊಳಿಸಿರುವುದು ಏಕೆಂದರೆ ಆ ಸ್ಥಳಗಳು ಕೃಷಿ ಮತ್ತು ಮೇಯಿಸುವಿಕೆಗೆ ಹೆಚ್ಚು ಸೂಕ್ತವಾಗಿವೆ.

ಬದುಕಿರುವ ಮತ್ತು ಉಪಸ್ಥಿತರಿರುವ ಸಜ್ಜನರು ಮತ್ತು ದೈವಭಕ್ತರು ಎಂದು ಭಾವಿಸಲಾದವರಿಂದ ಪ್ರಾರ್ಥಿಸಲು ವಿನಂತಿಸುವುದು ಅನುಮತಿಸಲಾಗಿದೆ. ಇದು ಅನುಮತಿಸಲ್ಪಟ್ಟ 'ತವಸ್ಸುಲ್' ಆಗಿದೆ. ಆದರೆ, ಸೃಷ್ಟಿಗಳಲ್ಲಿ ಯಾರಾದರೂ, ಬದುಕಿರುವವರಾಗಲಿ ಅಥವಾ ಮೃತರಾಗಲಿ, ಅವರ ಗೌರವ ಅಥವಾ ಸ್ಥಾನಮಾನದ (ಜಾಹ್) ಮೂಲಕ 'ತವಸ್ಸುಲ್' ಮಾಡುವುದು ಅನುಮತಿಸಲಾಗಿಲ್ಲ; ಏಕೆಂದರೆ ಅದು ಶಿರ್ಕ್‌ನ ಮಾರ್ಗಗಳಲ್ಲಿ ಒಂದಾಗಿದೆ.

ಪ್ರಾರ್ಥನೆಯಲ್ಲಿ ಪಟ್ಟುಹಿಡಿಯುವುದು (ಇಲ್ಹಾಹ್) ಮತ್ತು ಪುನರಾವರ್ತಿಸುವುದು ನಿಯಮಗೊಳಿಸಲಾಗಿದೆ.

ಅಗತ್ಯವಿದ್ದಾಗ ಜುಮುಅ (ಶುಕ್ರವಾರ) ದಂದು (ಪ್ರವಚನ ಮಾಡುತ್ತಿರುವ) ಖತೀಬರೊಂದಿಗೆ ಮಾತನಾಡಲು ಅನುಮತಿಯಿದೆ.

ಮಳೆ ಸುರಿಸುವುದರಲ್ಲಿ ಮತ್ತು ಅದನ್ನು ತಡೆಹಿಡಿಯುವುದರಲ್ಲಿ ಅಲ್ಲಾಹನ ಅದ್ಭುತ ಶಕ್ತಿಯ ಪ್ರದರ್ಶನವನ್ನು ತಿಳಿಸಲಾಗಿದೆ.

ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ವಿವೇಕ ಜಾಣ್ಮೆಯನ್ನು ವಿವರಿಸಲಾಗಿದೆ. ಅವರು ಮಳೆಯನ್ನು ಎಲ್ಲಿ ಹಾನಿಯಿದೆಯೋ ಅಲ್ಲಿಂದ ಮಾತ್ರ ತಡೆಹಿಡಿಯಲು ಪ್ರಾರ್ಥಿಸಿದರು, ಎಲ್ಲಿ ಹಾನಿಯಿಲ್ಲವೋ ಅಲ್ಲಿಂದಲ್ಲ.

ಖುತ್ಬಾದಲ್ಲಿ ಮಳೆಗಾಗಿ ಪ್ರಾರ್ಥಿಸುವುದು ನಿಯಮಗೊಳಿಸಲಾಗಿದೆ.

ಪ್ರಾರ್ಥನೆಯಲ್ಲಿ ಕೈಗಳನ್ನು ಎತ್ತಬೇಕು. ಏಕೆಂದರೆ ಅದರಲ್ಲಿ ದೈನ್ಯತೆಯ ಅರ್ಥವಿದೆ ಮತ್ತು ಕೊಡುವವನಿಂದ ಪಡೆಯುವ ನಿರೀಕ್ಷೆಯಿದೆ. ಈ ಸಂದರ್ಭದಲ್ಲಿ (ಮಳೆಗಾಗಿ ಪ್ರಾರ್ಥಿಸುವಾಗ) ಕೈಗಳನ್ನು ಎತ್ತುವ ಬಗ್ಗೆ ವಿದ್ವಾಂಸರು ಒಮ್ಮತಾಭಿಪ್ರಾಯ ಹೊಂದಿದ್ದಾರೆ.

ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಪವಾಡಗಳಲ್ಲಿ ಇದೂ ಒಂದು. ಇದು ಅವರ ಪ್ರವಾದಿತ್ವವನ್ನು ಸೂಚಿಸುತ್ತದೆ. ಮಳೆ ತರಿಸುವುದರಲ್ಲಿ ಮತ್ತು ಅದನ್ನು ನಿಲ್ಲಿಸುವುದರಲ್ಲಿ ಅವರ ಪ್ರಾರ್ಥನೆಯು ತಕ್ಷಣವೇ ಸ್ವೀಕರಿಸಲ್ಪಟ್ಟಿತು.

التصنيفات

Rain-Seeking Prayer