ಅಲ್ಲಾಹನ ನೆರಳಲ್ಲದೆ ಬೇರೆ ನೆರಳಿಲ್ಲದ ದಿನ (ಪುನರುತ್ಥಾನ ದಿನ) ದಂದು ಅವನು ಏಳು (ರೀತಿಯ) ಜನರಿಗೆ ತನ್ನ ನೆರಳಿನಲ್ಲಿ ನೆರಳು…

ಅಲ್ಲಾಹನ ನೆರಳಲ್ಲದೆ ಬೇರೆ ನೆರಳಿಲ್ಲದ ದಿನ (ಪುನರುತ್ಥಾನ ದಿನ) ದಂದು ಅವನು ಏಳು (ರೀತಿಯ) ಜನರಿಗೆ ತನ್ನ ನೆರಳಿನಲ್ಲಿ ನೆರಳು ನೀಡುತ್ತಾನೆ

ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಅಲ್ಲಾಹನ ನೆರಳಲ್ಲದೆ ಬೇರೆ ನೆರಳಿಲ್ಲದ ದಿನ (ಪುನರುತ್ಥಾನ ದಿನ) ದಂದು ಅವನು ಏಳು (ರೀತಿಯ) ಜನರಿಗೆ ತನ್ನ ನೆರಳಿನಲ್ಲಿ ನೆರಳು ನೀಡುತ್ತಾನೆ: ನ್ಯಾಯ ನೀತಿ ಪಾಲಿಸುವ ಆಡಳಿತಗಾರ, ಅಲ್ಲಾಹುವಿನ ಆರಾಧನೆಯಲ್ಲಿಯೇ ಬೆಳೆದು ದೊಡ್ಡವನಾದ ಯುವಕ, ಮಸೀದಿಗಳೊಂದಿಗೆ ಹೃದಯವು ಅವಿನಾಭಾವ ಸಂಬಂಧ ಹೊಂದಿರುವ ವ್ಯಕ್ತಿ, ಅಲ್ಲಾಹುವಿಗಾಗಿ ಪರಸ್ಪರ ಪ್ರೀತಿಸಿದ ಇಬ್ಬರು ವ್ಯಕ್ತಿಗಳು - ಅವರು ಅವನಿಗಾಗಿಯೇ ಒಂದಾದರು ಮತ್ತು ಅವನಿಗಾಗಿಯೇ ಬೇರ್ಪಟ್ಟರು, ಸ್ಥಾನಮಾನ ಮತ್ತು ಸೌಂದರ್ಯವುಳ್ಳ ಮಹಿಳೆಯೊಬ್ಬಳು (ವ್ಯಭಿಚಾರಕ್ಕೆ) ಆಹ್ವಾನಿಸಿದಾಗ, 'ಖಂಡಿತವಾಗಿಯೂ ನಾನು ಅಲ್ಲಾಹುವನ್ನು ಭಯಪಡುತ್ತೇನೆ' ಎಂದು ಹೇಳಿದ ವ್ಯಕ್ತಿ. ದಾನವನ್ನು (ಸದಕಾ) ನೀಡಿದ ವ್ಯಕ್ತಿ - ಅವನು ಅದನ್ನು ಎಷ್ಟು ಗುಪ್ತವಾಗಿಟ್ಟನೆಂದರೆ ಅವನ ಬಲಗೈ ಖರ್ಚು (ದಾನ) ಮಾಡಿದ್ದು ಅವನ ಎಡಗೈಗೆ ತಿಳಿಯಲಿಲ್ಲ ಮತ್ತು ಏಕಾಂತದಲ್ಲಿ ಅಲ್ಲಾಹುವನ್ನು ಸ್ಮರಿಸಿ, ಕಣ್ಣುಗಳು ಕಣ್ಣೀರಿನಿಂದ ತುಂಬಿ ಹರಿದ ವ್ಯಕ್ತಿ."

[صحيح] [متفق عليه]

الشرح

ಪ್ರವಾದಿಯವರು (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ಸತ್ಯವಿಶ್ವಾಸಿಗಳಲ್ಲಿ ಏಳು ರೀತಿಯ ಜನರಿಗೆ ಶುಭವಾರ್ತೆ ನೀಡಿದ್ದಾರೆ. ಯಾವ ದಿನ ಅಲ್ಲಾಹುವಿನ ನೆರಳಲ್ಲದೆ ಬೇರೆ ನೆರಳಿಲ್ಲವೋ ಅಂದು, ಸರ್ವೋನ್ನತನಾದ ಅಲ್ಲಾಹು ಅವರಿಗೆ ತನ್ನ 'ಅರ್ಶ್' (ಸಿಂಹಾಸನ) ನ ನೆರಳಿನಲ್ಲಿ ಆಶ್ರಯ ನೀಡುತ್ತಾನೆ: ಮೊದಲನೆಯವನು: ತನ್ನ ವಿಷಯದಲ್ಲಿ ದುಷ್ಕರ್ಮಗಳನ್ನು ಮಾಡದೆ ನ್ಯಾಯ ಪಾಲಿಸುವ ಮತ್ತು ತನ್ನ ಪ್ರಜೆಗಳ ನಡುವೆ ಅನ್ಯಾಯ ಮಾಡದೆ ನ್ಯಾಯ ಪಾಲಿಸುವ ಆಡಳಿತಗಾರ. ಅವನು ಅತ್ಯುನ್ನತ ಅಧಿಕಾರ ಹೊಂದಿರುವವನು. ಮುಸ್ಲಿಮರ ವಿಷಯದಲ್ಲಿ ಯಾವುದೇ ಜವಾಬ್ದಾರಿಯನ್ನು ವಹಿಸಿಕೊಂಡು ಅದರಲ್ಲಿ ನ್ಯಾಯ ಪಾಲಿಸುವ ಪ್ರತಿಯೊಬ್ಬನೂ ಈ ವಿಧದಲ್ಲಿ ಸೇರುತ್ತಾನೆ. ಎರಡನೆಯವನು: ಅಲ್ಲಾಹುವಿನ ಆರಾಧನೆಯಲ್ಲಿಯೇ ಬೆಳೆದು, ತನ್ನ ಯೌವನ ಮತ್ತು ಚೈತನ್ಯವನ್ನು ಅದರಲ್ಲಿಯೇ ವಿನಿಯೋಗಿಸಿ, ಅದೇ ಸ್ಥಿತಿಯಲ್ಲಿ ಮರಣ ಹೊಂದುವ ಯುವಕ. ಮೂರನೆಯವನು: ಮಸೀದಿಯೊಂದಿಗೆ ಹೃದಯವು ಗಾಢವಾಗಿ ಸಂಬಂಧ ಹೊಂದಿರುವ ವ್ಯಕ್ತಿ. ಅವನು ಮಸೀದಿಯಿಂದ ಹೊರಬಂದರೂ ಮತ್ತೆ ಅದಕ್ಕೆ ಮರಳಲು ಹಂಬಲಿಸುತ್ತಾನೆ. ಏಕೆಂದರೆ, ಅವನಿಗೆ ಮಸೀದಿಯ ಮೇಲಿನ ತೀವ್ರ ಪ್ರೀತಿಯಿದೆ, ಸದಾ ಮಸೀದಿಯಲ್ಲೇ ಇರಲು ಬಯಸುತ್ತಾನೆ ಮತ್ತು ಅವನಿಗೆ ದೈಹಿಕವಾದ ಅನಿವಾರ್ಯ ಕಾರಣಗಳಿಂದ ಮಸೀದಿಗೆ ಹೋಗಲು ಸಾಧ್ಯವಾಗದಿದ್ದರೂ ಹೃದಯದಿಂದ ನಿರಂತರವಾಗಿ ಮಸೀದಿಯೊಂದಿಗೆ ಸಂಪರ್ಕದಲ್ಲಿರುತ್ತಾನೆ. ನಾಲ್ಕನೆಯವನು: ಇಬ್ಬರು ವ್ಯಕ್ತಿಗಳು ಒಬ್ಬರನ್ನೊಬ್ಬರು ನಿಜವಾಗಿಯೂ ಅಲ್ಲಾಹುವಿಗಾಗಿಯೇ ಪ್ರೀತಿಸಿದರು. ಅವರು ಭೌತಿಕವಾಗಿ ಒಟ್ಟಿಗೆ ಇರಲಿ ಅಥವಾ ಇಲ್ಲದಿರಲಿ, ಮರಣವು ಅವರನ್ನು ಬೇರ್ಪಡಿಸುವವರೆಗೆ ಯಾವುದೇ ಲೌಕಿಕ ಕಾರಣಕ್ಕಾಗಿ ಆ ಧಾರ್ಮಿಕ ಪ್ರೀತಿಯನ್ನು ಅವರು ಮುರಿಯಲಿಲ್ಲ. ಐದನೆಯವನು: ಉತ್ತಮ ವಂಶ, ಗೌರವ, ಪ್ರತಿಷ್ಠೆ, ಸ್ಥಾನಮಾನ, ಸಂಪತ್ತು ಮತ್ತು ಸೌಂದರ್ಯವುಳ್ಳ ಮಹಿಳೆಯೊಬ್ಬಳು ಕೆಟ್ಟ ಕಾರ್ಯಕ್ಕಾಗಿ (ವ್ಯಭಿಚಾರಕ್ಕಾಗಿ) ತನ್ನ ಕಡೆಗೆ ಆಹ್ವಾನಿಸಿದಾಗ, ಅದನ್ನು ನಿರಾಕರಿಸಿ 'ಖಂಡಿತವಾಗಿಯೂ ನಾನು ಅಲ್ಲಾಹುವನ್ನು ಭಯಪಡುತ್ತೇನೆ' ಎಂದು ಹೇಳಿದ ವ್ಯಕ್ತಿ. ಆರನೆಯವನು: ಸ್ವಲ್ಪ ಅಥವಾ ಹೆಚ್ಚು ದಾನವನ್ನು ನೀಡಿ, ಅದರಲ್ಲಿ ಯಾವುದೇ ತೋರಿಕೆ ಮಾಡದ ವ್ಯಕ್ತಿ. ಅವನು ಅದನ್ನು ಎಷ್ಟೊಂದು ಗುಪ್ತವಾಗಿಟ್ಟನೆಂದರೆ, ಅವನ ಬಲಗೈ ನೀಡಿದ್ದು ಅವನ ಎಡಗೈಗೂ ತಿಳಿಯಲಿಲ್ಲ. ಏಳನೆಯವರು: ಜನರಿಂದ ದೂರವಿದ್ದು ಏಕಾಂತದಲ್ಲಿ, ಹೃದಯದ ಸ್ಮರಣೆಯಿಂದ ಅಥವಾ ಧಿಕ್ರ್‌ ಹೇಳುವ ಮೂಲಕ ತನ್ನ ನಾಲಿಗೆಯಿಂದ ಅಲ್ಲಾಹುವನ್ನು ಸ್ಮರಿಸಿದ ವ್ಯಕ್ತಿ. ಆಗ ಅಲ್ಲಾಹುವಿನ ಭಯ ಮತ್ತು ಗೌರವದಿಂದ ಅವನ ಕಣ್ಣುಗಳಿಂದ ಕಣ್ಣೀರು ತುಂಬಿ ಹರಿಯಿತು.

فوائد الحديث

ಉಲ್ಲೇಖಿಸಲಾದ ಏಳು ವರ್ಗಗಳ ಶ್ರೇಷ್ಠತೆಯನ್ನು ತಿಳಿಸಲಾಗಿದೆ ಮತ್ತು ಅವರನ್ನು ಅನುಸರಿಸಲು ಪ್ರೋತ್ಸಾಹಿಸಲಾಗಿದೆ.

ಇಬ್ನ್ ಹಜರ್ ರವರು "ತನ್ನ ನೆರಳಿನಲ್ಲಿ" ಎಂಬ ಮಾತಿನ ಬಗ್ಗೆ ಹೇಳುತ್ತಾರೆ: ಇದರ ಅರ್ಥ 'ಅರ್ಶ್' (ಸಿಂಹಾಸನ) ನ ನೆರಳು ಎಂದು ಹೇಳಲಾಗಿದೆ. ಸಈದ್ ಇಬ್ನ್ ಮನ್ಸೂರ್ ಹಸನ್ ದರ್ಜೆಯ ಸನದ್‌ನೊಂದಿಗೆ ವರದಿ ಮಾಡಿದರು ಸಲ್ಮಾನ್ ರವರ ಹದೀಸ್ ಇದನ್ನು ಸೂಚಿಸುತ್ತದೆ: "ಏಳು ಜನರಿಗೆ ಅಲ್ಲಾಹು ತನ್ನ ಅರ್ಶ್‌ನ ನೆರಳಿನಲ್ಲಿ ನೆರಳು ನೀಡುವನು"."

ಇಬ್ನ್ ಹಜರ್ ಹೇಳುತ್ತಾರೆ: "ನ್ಯಾಯವಂತ (ಆದಿಲ್) ಆಡಳಿತಗಾರನಿಗೆ ನೀಡಲಾದ ಅತ್ಯುತ್ತಮ ವ್ಯಾಖ್ಯಾನವೆಂದರೆ, ಪ್ರತಿಯೊಂದು ವಸ್ತುವನ್ನು ಅದರ ಸ್ಥಾನದಲ್ಲಿಡುವ ಮೂಲಕ, ಅತಿರೇಕವೆಸಗದೆ ಅಥವಾ ನಿರ್ಲಕ್ಷ್ಯ ಮಾಡದೆ, ಅಲ್ಲಾಹುವಿನ ಆದೇಶವನ್ನು ಅನುಸರಿಸುವವನು. ಅವನಿಂದ ಉಂಟಾಗುವ ಸಾರ್ವತ್ರಿಕ ಪ್ರಯೋಜನದಿಂದಾಗಿ ಅವನನ್ನು ಮೊದಲು ಉಲ್ಲೇಖಿಸಲಾಗಿದೆ."

ಒಂದು ನಮಾಝ್‌ನ ನಂತರ ಇನ್ನೊಂದು ನಮಾಝ್‌ಗಾಗಿ ಕಾಯುವುದರ ಶ್ರೇಷ್ಠತೆಯನ್ನು ತಿಳಿಸಲಾಗಿದೆ. (ಮಸೀದಿಗೆ ಅಂಟಿಕೊಂಡಿರುವುದರ ಭಾಗವಾಗಿ).

ಇಮಾಮ್ ನವವಿ ಹೇಳುತ್ತಾರೆ: "ಇದರಲ್ಲಿ ಅಲ್ಲಾಹುವಿಗಾಗಿ ಪ್ರೀತಿಸಲು ಪ್ರೋತ್ಸಾಹಿಸಲಾಗಿದೆ ಮತ್ತು ಅದರ ಮಹಾ ಶ್ರೇಷ್ಠತೆಯನ್ನು ವಿವರಿಸಲಾಗಿದೆ."

ಸ್ಥಾನಮಾನ ಮತ್ತು ಸೌಂದರ್ಯವನ್ನು ವಿಶೇಷವಾಗಿ ಉಲ್ಲೇಖಿಸಿದ್ದು ಏಕೆಂದರೆ ಅವುಗಳ ಬಗ್ಗೆ ಜನರ ಬಯಕೆ ತೀವ್ರವಾಗಿರುತ್ತದೆ, ಅವುಗಳಿಗಾಗಿ ಅವರು ಹಂಬಲಿಸುತ್ತಾರೆ ಮತ್ತು ಅವುಗಳನ್ನು ಪಡೆಯುವುದು ಕಷ್ಟಕರವಾಗಿರುತ್ತದೆ.

ದಾನದಲ್ಲಿ ಅತ್ಯುತ್ತಮವಾದುದು ಗುಪ್ತವಾಗಿ ನೀಡುವುದು ಮತ್ತು ತೋರಿಕೆಯಿಂದ ದೂರವಿರುವುದು. ಆದರೂ, ತೋರಿಕೆಯಿಂದ ಸುರಕ್ಷಿತವಾಗಿದ್ದರೆ ಮತ್ತು ಇತರರನ್ನು ದಾನ ಮಾಡಲು ಪ್ರೋತ್ಸಾಹಿಸುವ ಉದ್ದೇಶವಿದ್ದರೆ, ಇತರರು ತನ್ನನ್ನು ಅನುಸರಿಸಲು, ಮತ್ತು ಇಸ್ಲಾಮಿನ ಚಿಹ್ನೆಗಳನ್ನು ಪ್ರಕಟಪಡಿಸಲು, ದಾನ ಮತ್ತು ಝಕಾತ್ ಅನ್ನು ಬಹಿರಂಗವಾಗಿ ನೀಡುವುದಕ್ಕೆ ಶರೀಅತ್ ಅನುಮತಿಸುತ್ತದೆ.

ಅಲ್ಲಾಹುವಿಗಾಗಿ ನಿಷ್ಕಳಂಕತೆ ತೋರಿದ ಕಾರಣ ಮತ್ತು ತಮ್ಮ ದೇಹೇಚ್ಚೆಗಳಿಗೆ ವಿರುದ್ಧವಾಗಿ ಸಾಗಿದ ಕಾರಣ ಈ ಏಳು ಜನರು ಆ ಅನುಗ್ರಹವನ್ನು ಪಡೆದರು.

"ಏಳು ಜನರಿಗೆ ಅಲ್ಲಾಹು ನೆರಳು ನೀಡುತ್ತಾನೆ" ಎಂಬ ವಚನದ ಬಗ್ಗೆ ಹೇಳುವುದಾದರೆ, ಇಲ್ಲಿ ಅವರನ್ನು ಈ ಸಂಖ್ಯೆಗೆ (ಏಳು) ಸೀಮಿತಗೊಳಿಸುವುದು ಉದ್ದೇಶವಲ್ಲ. ಬದಲಿಗೆ, ಹದೀಸ್‌ನಲ್ಲಿ ಉಲ್ಲೇಖಿಸಲಾದ ವರ್ಗಗಳ ಹೊರತಾಗಿ, ಅಲ್ಲಾಹು ತನ್ನ ಅರ್ಶ್‌ನ ನೆರಳಿನಲ್ಲಿ ನೆರಳು ನೀಡುವ ಇತರ ವರ್ಗದವರ ಬಗ್ಗೆ (ಬೇರೆ ಹದೀಸ್‌ಗಳಲ್ಲಿ) ಉಲ್ಲೇಖಿಸಲಾಗಿದೆ.

ಇಬ್ನ್ ಹಜರ್ ಹೇಳುತ್ತಾರೆ: "ಈ ಹದೀಸ್‌ನಲ್ಲಿ ಪುರುಷರನ್ನು ಉಲ್ಲೇಖಿಸಿರುವುದು ಅವರನ್ನು ಅದಕ್ಕೆ ಸೀಮಿತಗೊಳಿಸುವುದಿಲ್ಲ. ಬದಲಿಗೆ ಇವುಗಳಲ್ಲಿ ಮಹಿಳೆಯರೂ ಕೂಡ ಪುರುಷರೊಂದಿಗೆ ಭಾಗಿಯಾಗುತ್ತಾರೆ. ಆದರೆ, ನ್ಯಾಯವಂತ ಆಡಳಿತಗಾರ ಎಂಬುದರ ಉದ್ದೇಶವು ಸರ್ವೋಚ್ಚ ನಾಯಕತ್ವವಾಗಿದ್ದರೆ ಅದು ಪುರುಷರಿಗೆ ಸೀಮಿತವಾಗಿದೆ. ಅಲ್ಲದಿದ್ದರೆ ಮಹಿಳೆಯು ಮಕ್ಕಳು ಮರಿಗಳನ್ನು ಹೊಂದಿದ್ದು ಅವರಲ್ಲಿ ನ್ಯಾಯ ಪಾಲಿಸಿದರೆ (ಈ ವರ್ಗದಲ್ಲಿ) ಪ್ರವೇಶಿಸಲು ಆಕೆಗೆ ಸಾಧ್ಯವಿದೆ. ಮಸೀದಿಯೊಂದಿಗೆ ಅವಿನಾಭಾವ ಸಂಬಂಧ ಹೊಂದುವ ಗುಣವು ಮಹಿಳೆಯರಿಗೆ ಅನ್ವಯಿಸುವುದಿಲ್ಲ. ಏಕೆಂದರೆ ಮಹಿಳೆಯು ಅವಳ ಮನೆಯಲ್ಲಿ ನಮಾಝ್ ಮಾಡುವುದು ಮಸೀದಿಯಲ್ಲಿ ನಮಾಝ್ ಮಾಡುವುದಕ್ಕಿಂತ ಉತ್ತಮವಾಗಿದೆ. ಉಳಿದಂತೆ, ಇತರ ಕಾರ್ಯಗಳಲ್ಲಿ ಮಹಿಳೆಯರಿಗೂ ಭಾಗಿಯಾಗಬಹುದಾಗಿದೆ. ಮಹಿಳೆಯು (ವ್ಯಭಿಚಾರಕ್ಕೆ) ಆಹ್ವಾನಿಸಿದ ಪುರುಷನ ವಿಷಯದಲ್ಲಿರುವಂತೆಯೇ, ಒಬ್ಬ ಸುಂದರ ರಾಜನು ಒಬ್ಬ ಮಹಿಳೆಯನ್ನು (ವ್ಯಭಿಚಾರಕ್ಕೆ) ಆಹ್ವಾನಿಸಿ, ಆಕೆಗೆ ಅಗತ್ಯವಿದ್ದರೂ ಅಲ್ಲಾಹುವಿನ ಭಯದಿಂದ ನಿರಾಕರಿಸುವುದನ್ನು ಇದರೊಂದಿಗೆ ಕಲ್ಪಿಸಿಕೊಳ್ಳಬಹುದು."

التصنيفات

ಸರ್ವಶಕ್ತ ಅಲ್ಲಾಹನನ್ನು ಸ್ಮರಿಸುವ ಪ್ರಯೋಜನಗಳು, ಆತ್ಮಸಾಕ್ಷಿಯ ಶುದ್ಧೀಕರಣ, ಮಸೀದಿಗಳ ಶಿಷ್ಟಾಚಾರ