ಯಾರಾದರೂ ಲಾತ್ ಮತ್ತು ಉಝ್ಝನ ಮೇಲಾಣೆ ಎಂದು ಹೇಳುತ್ತಾ ಆಣೆ ಮಾಡಿದರೆ, ಅವನು ಲಾಇಲಾಹ ಇಲ್ಲಲ್ಲಾಹ್ (ಅಲ್ಲಾಹನ ಹೊರತು ಆರಾಧನೆಗೆ…

ಯಾರಾದರೂ ಲಾತ್ ಮತ್ತು ಉಝ್ಝನ ಮೇಲಾಣೆ ಎಂದು ಹೇಳುತ್ತಾ ಆಣೆ ಮಾಡಿದರೆ, ಅವನು ಲಾಇಲಾಹ ಇಲ್ಲಲ್ಲಾಹ್ (ಅಲ್ಲಾಹನ ಹೊರತು ಆರಾಧನೆಗೆ ಅರ್ಹರಾದ ಬೇರೆ ದೇವರಿಲ್ಲ) ಎಂದು ಹೇಳಬೇಕು. ಯಾರಾದರೂ ತನ್ನ ಸಂಗಡಿಗನೊಡನೆ ಬಾ ಜೂಜಾಡೋಣ ಎಂದು ಹೇಳಿದರೆ, ಅವನು ದಾನ-ಧರ್ಮ ಮಾಡಬೇಕು

ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಯಾರಾದರೂ ಲಾತ್ ಮತ್ತು ಉಝ್ಝನ ಮೇಲಾಣೆ ಎಂದು ಹೇಳುತ್ತಾ ಆಣೆ ಮಾಡಿದರೆ, ಅವನು ಲಾಇಲಾಹ ಇಲ್ಲಲ್ಲಾಹ್ (ಅಲ್ಲಾಹನ ಹೊರತು ಆರಾಧನೆಗೆ ಅರ್ಹರಾದ ಬೇರೆ ದೇವರಿಲ್ಲ) ಎಂದು ಹೇಳಬೇಕು. ಯಾರಾದರೂ ತನ್ನ ಸಂಗಡಿಗನೊಡನೆ ಬಾ ಜೂಜಾಡೋಣ ಎಂದು ಹೇಳಿದರೆ, ಅವನು ದಾನ-ಧರ್ಮ ಮಾಡಬೇಕು."

[صحيح] [متفق عليه]

الشرح

ಅಲ್ಲಾಹೇತರರ ಮೇಲೆ ಆಣೆ ಮಾಡುವುದರ ಬಗ್ಗೆ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ಎಚ್ಚರಿಕೆ ನೀಡುತ್ತಿದ್ದಾರೆ. ಏಕೆಂದರೆ, ಸತ್ಯವಿಶ್ವಾಸಿಯು ಅಲ್ಲಾಹನ ಮೇಲೆ ಮಾತ್ರ ಆಣೆ ಮಾಡಬೇಕು. ನಂತರ ಅವರು ತಿಳಿಸುವುದೇನೆಂದರೆ, ಯಾರು ಅಲ್ಲಾಹೇತರರ ಮೇಲೆ ಆಣೆ ಮಾಡುತ್ತಾರೋ, ಅಂದರೆ ಉದಾಹರಣೆಗೆ, ಲಾತ್ ಮತ್ತು ಉಝ್ಝನ ಮೇಲಾಣೆ ಎಂದು ಹೇಳುತ್ತಾರೋ, (ಇವೆರಡು ಅಜ್ಞಾನಕಾಲದ ಜನರು ಪೂಜಿಸುತ್ತಿದ್ದ ಎರಡು ವಿಗ್ರಹಗಳಾಗಿದ್ದವು), ಅವರು ಶಿರ್ಕ್‌ನಿಂದ ಮುಕ್ತರಾಗಲು ಮತ್ತು ಆ ಆಣೆಗೆ ಪ್ರಾಯಶ್ಚಿತ ಮಾಡಿಕೊಳ್ಳಲು ಲಾಇಲಾಹ ಇಲ್ಲಲ್ಲಾಹ್ (ಅಲ್ಲಾಹನ ಹೊರತು ಆರಾಧನೆಗೆ ಅರ್ಹರಾದ ಬೇರೆ ದೇವರಿಲ್ಲ) ಎಂದು ಹೇಳಿ ತಮ್ಮನ್ನು ತಾವೇ ಸರಿಪಡಿಸಿಕೊಳ್ಳುವುದು ಕಡ್ಡಾಯವಾಗಿದೆ. ನಂತರ, ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಿಳಿಸುವುದೇನೆಂದರೆ, ಯಾರಾದರೂ ತನ್ನ ಸಂಗಡಿಗನಿಗೆ, ಬಾ ನಾವು ಜೂಜಾಡೋಣ ಎಂದು ಹೇಳಿದರೆ, (ಜೂಜು ಎಂದರೆ ಇಬ್ಬರು ಅಥವಾ ಅದಕ್ಕಿಂತ ಹೆಚ್ಚು ಜನರು ಹಣವಿಟ್ಟು ಆಡಿ ಅವರಲ್ಲೊಬ್ಬನು ಅದನ್ನು ಗೆಲ್ಲುವುದು. ಈ ಆಟದಿಂದ ಒಬ್ಬರು ಗೆಲ್ಲುವುದು ಮತ್ತು ಉಳಿದವರು ಸೋಲುವುದು ನಿಶ್ಚಿತ), ತಾನು ಕರೆದುದಕ್ಕೆ ಪ್ರಾಯಶ್ಚಿತವಾಗಿ ದಾನ-ಧರ್ಮ ಮಾಡುವುದು ಅಪೇಕ್ಷಣೀಯವಾಗಿದೆ.

فوائد الحديث

ಅಲ್ಲಾಹನ ಮೇಲೆ, ಅವನ ಹೆಸರು ಹಾಗೂ ಗುಣಲಕ್ಷಣಗಳ ಮೇಲೆ ಮಾತ್ರ ಆಣೆ ಮಾಡಬೇಕು.

ಅಲ್ಲಾಹೇತರರ ಮೇಲೆ ಆಣೆ ಮಾಡುವುದನ್ನು ನಿಷೇಧಿಸಲಾಗಿದೆ. ಅದು ಲಾತ್, ಉಝ್ಝ ಮುಂತಾದ ವಿಗ್ರಹಗಳು, ವಿಶ್ವಾಸರ್ಹತೆ, ಪ್ರವಾದಿ ಮುಂತಾದ ಯಾವುದರ ಮೇಲಾದರೂ ಸರಿ.

ಖತ್ತಾಬಿ ಹೇಳಿದರು: "ಜನರು ತಾವು ಅತಿಯಾಗಿ ಆದರಿಸುವ ದೇವನ ಮೇಲೆ ಆಣೆ ಮಾಡುತ್ತಾರೆ. ಆದ್ದರಿಂದ, ಯಾರಾದರೂ ಲಾತ್, ಉಝ್ಝ ಮುಂತಾದವರ ಮೇಲೆ ಆಣೆ ಮಾಡಿದರೆ, ಅವನು ಸತ್ಯನಿಷೇಧಿಗಳನ್ನು ಅನುಕರಿಸಿದ್ದಾನೆ. ಆದ್ದರಿಂದ, ಅವನು ಏಕದೇವವಿಶ್ವಾಸದ ವಚನವನ್ನು ಪಠಿಸಿ ತನ್ನನ್ನು ಸರಿಪಡಿಸಿಕೊಳ್ಳಬೇಕೆಂದು ಅವರು ಆದೇಶಿಸಿದರು."

ಅಲ್ಲಾಹೇತರರ ಮೇಲೆ ಆಣೆ ಮಾಡಿದವನು ಶಪಥದ ಪ್ರಾಯಶ್ಚಿತ್ತವನ್ನು ನೀಡಬೇಕಾಗಿಲ್ಲ. ಆದರೆ ಅವನು ಪಶ್ಚಾತ್ತಾಪಪಡಬೇಕು ಮತ್ತು ಅಲ್ಲಾಹನಲ್ಲಿ ಕ್ಷಮೆಯಾಚಿಸಬೇಕು. ಏಕೆಂದರೆ, ಅದು ಪಶ್ಚಾತ್ತಾಪದ ಮೂಲಕವಲ್ಲದೆ ಅಳಿಸಿಹಾಕಲು ಸಾಧ್ಯವಿಲ್ಲದಷ್ಟು ದೊಡ್ಡ ಪಾಪವಾಗಿದೆ.

ಜೂಜಿನ ಎಲ್ಲಾ ರೂಪ ಮತ್ತು ವಿಧಗಳನ್ನು ನಿಷೇಧಿಸಲಾಗಿದೆ. ಸರ್ವಶಕ್ತನಾದ ಅಲ್ಲಾಹು ಜೂಜನ್ನು ಮದ್ಯ ಮತ್ತು ವಿಗ್ರಹಗಳೊಂದಿಗೆ ಸೇರಿಸಿ ಹೇಳಿದ್ದಾನೆ.

ಪಾಪವು ಸಂಭವಿಸಿದರೆ ತಕ್ಷಣ ಅದರಿಂದ ಮುಕ್ತನಾಗುವುದು ಕಡ್ಡಾಯವಾಗಿದೆ.

ಪಾಪ ಮಾಡಿದವರು ಕೂಡಲೇ ಒಂದು ಸತ್ಕಾರ್ಯವನ್ನು ಮಾಡಬೇಕು. ಏಕೆಂದರೆ, ಒಳಿತುಗಳು ಕೆಡುಕುಗಳನ್ನು ಅಳಿಸುತ್ತವೆ.

التصنيفات

Forbidden Utterances and Tongue Evils