ಬೆಳ್ಳುಳ್ಳಿ ಅಥವಾ ಈರುಳ್ಳಿಯನ್ನು ತಿಂದವರು ನಮ್ಮಿಂದ ದೂರವಿರಲಿ - ಅಥವಾ ಅವರು ಹೀಗೆ ಹೇಳಿದರು: ಅವರು ನಮ್ಮ ಮಸೀದಿಯಿಂದ ದೂರವಿರಲಿ -…

ಬೆಳ್ಳುಳ್ಳಿ ಅಥವಾ ಈರುಳ್ಳಿಯನ್ನು ತಿಂದವರು ನಮ್ಮಿಂದ ದೂರವಿರಲಿ - ಅಥವಾ ಅವರು ಹೀಗೆ ಹೇಳಿದರು: ಅವರು ನಮ್ಮ ಮಸೀದಿಯಿಂದ ದೂರವಿರಲಿ - ಮತ್ತು ತಮ್ಮ ಮನೆಯಲ್ಲೇ ಉಳಿದುಕೊಳ್ಳಲಿ

ಜಾಬಿರ್ ಬಿನ್ ಅಬ್ದುಲ್ಲಾ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಬೆಳ್ಳುಳ್ಳಿ ಅಥವಾ ಈರುಳ್ಳಿಯನ್ನು ತಿಂದವರು ನಮ್ಮಿಂದ ದೂರವಿರಲಿ - ಅಥವಾ ಅವರು ಹೀಗೆ ಹೇಳಿದರು: ಅವರು ನಮ್ಮ ಮಸೀದಿಯಿಂದ ದೂರವಿರಲಿ - ಮತ್ತು ತಮ್ಮ ಮನೆಯಲ್ಲೇ ಉಳಿದುಕೊಳ್ಳಲಿ." ಒಮ್ಮೆ ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬಳಿಗೆ ತರಕಾರಿ ಸೊಪ್ಪುಗಳಿರುವ ಮಡಿಕೆಯನ್ನು ತರಲಾಯಿತು. ಅವರಿಗೆ ಅದರಿಂದ ಕೆಟ್ಟ ವಾಸನೆ ಅನುಭವವಾಯಿತು. ಅವರು ಅದರ ಬಗ್ಗೆ ವಿಚಾರಿಸಿದಾಗ, ಅದರಲ್ಲಿರುವ ಸೊಪ್ಪುಗಳ ಬಗ್ಗೆ ಅವರಿಗೆ ತಿಳಿಸಲಾಯಿತು. ಅವರು ಅದನ್ನು ಹತ್ತಿರ ತರುವಂತೆ ತಮ್ಮ ಬಳಿಯಲ್ಲಿದ್ದ ಒಬ್ಬ ಸಂಗಡಿಗರಿಗೆ ಆದೇಶಿಸಿದರು. ಅದನ್ನು ಕಂಡಾಗ ಅವರು ಅದನ್ನು ತಿನ್ನಲು ಅಸಹ್ಯಪಟ್ಟರು. ಅವರು ಹೇಳಿದರು: "ತಿನ್ನಿರಿ! ಏಕೆಂದರೆ, ನಿಶ್ಚಯವಾಗಿಯೂ ನೀವು ಸಂಭಾಷಣೆ ಮಾಡದವನೊಂದಿಗೆ ನಾನು ಸಂಭಾಷಣೆ ಮಾಡುತ್ತೇನೆ."

[صحيح] [متفق عليه]

الشرح

ಈರುಳ್ಳಿ ಅಥವಾ ಬೆಳ್ಳುಳ್ಳಿ ತಿಂದವರು ಮಸೀದಿಗೆ ಬರದಂತೆ ಪ್ರವಾದಿಯವರು ತಡೆದರು. ಇದು ಸಾಮೂಹಿಕ ನಮಾಝ್ ನಿರ್ವಹಿಸಲು ಬರುವ ಇತರ ಸಹೋದರರಿಗೆ ಅದರ ದುರ್ಗಂಧದಿಂದ ತೊಂದರೆಯಾಗದಿರುವುದಕ್ಕಾಗಿದೆ. ಇದು ಮಸೀದಿಗೆ ಬರದಂತೆ ತಡೆಯುವ ನಿಷೇಧವಾಗಿದೆಯೇ ಹೊರತು ಅವುಗಳನ್ನು ತಿನ್ನುವುದನ್ನು ತಡೆಯುವ ನಿಷೇಧವಲ್ಲ. ಏಕೆಂದರೆ, ಅವು ಧರ್ಮಸಮ್ಮತ ಆಹಾರಗಳಾಗಿವೆ. ಒಮ್ಮೆ ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬಳಿಕ ಒಂದು ತರಕಾರಿಯ ಮಡಿಕೆ ತರಲಾಯಿತು. ಅವರಿಗೆ ಅದರಿಂದ ಕೆಟ್ಟ ವಾಸನೆ ಅನುಭವವಾದಾಗ ಅದರಲ್ಲಿ ಏನಿದೆಯೆಂದು ಕೇಳಿದರು. ಅದರಲ್ಲಿರುವುದರ ಬಗ್ಗೆ ಅವರಿಗೆ ತಿಳಿಸಲಾದಾಗ, ಅವರು ಅದನ್ನು ತಿನ್ನಲು ಅಸಹ್ಯಪಟ್ಟು ಅದನ್ನು ತಿನ್ನುವಂತೆ ತನ್ನ ಒಬ್ಬ ಸಂಗಡಿಗರಿಗೆ ಸೂಚಿಸಿದರು. ಆದರೆ ಆ ಸಂಗಡಿಗರು ಕೂಡ ಅವರಂತೆ ಅದನ್ನು ತಿನ್ನಲು ಅಸಹ್ಯಪಟ್ಟರು. ಇದನ್ನು ಕಂಡಾಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ತಿನ್ನಿರಿ. ಏಕೆಂದರೆ ನಾನು ದೇವವಾಣಿ ಪಡೆಯಲು ದೇವದೂತರೊಂದಿಗೆ ಸಂಭಾಷಣೆ ಮಾಡುತ್ತೇನೆ." ಕೆಟ್ಟ ದುರ್ಗಂಧದಿಂದ ಮನುಷ್ಯರು ತೊಂದರೆ ಅನುಭವಿಸುವಂತೆ ದೇವದೂತರುಗಳು ಕೂಡ ತೊಂದರೆ ಅನುಭವಿಸುತ್ತಾರೆ ಎಂದು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಿಳಿಸಿದರು.

فوائد الحديث

ಬೆಳ್ಳುಳ್ಳಿ, ಈರುಳ್ಳಿ ಅಥವಾ ಉರುಳಿ ತಿಂದವರು ಮಸೀದಿಗೆ ತೆರಳುವುದನ್ನು ನಿಷೇಧಿಸಲಾಗಿದೆ.

ನಮಾಝ್ ಮಾಡುವವರಿಗೆ ತೊಂದರೆಯಾಗುವ ರೀತಿಯಲ್ಲಿರುವ ಇಂತಹುದೇ ದುರ್ಗಂಧವನ್ನು ಹೊಂದಿರುವ ಬೀಡಿ, ಸಿಗರೇಟು, ತಂಬಾಕು ಮುಂತಾದವುಗಳೆಲ್ಲವೂ ಇದೇ ವಿಧಿಯನ್ನು ಹೊಂದಿವೆ.

ಮಸೀದಿ ತಡೆಯಲ್ಪಡಲು ಕಾರಣ ದುರ್ಗಂಧವಾಗಿದೆ. ಆದ್ದರಿಂದ ಹೆಚ್ಚು ಬೇಯಿಸುವ ಮೂಲಕ ಅಥವಾ ಇತರ ವಿಧಾನಗಳಿಂದ ದುರ್ಗಂಧವನ್ನು ನಿವಾರಿಸಲು ಸಾಧ್ಯವಾದರೆ, ಅಸಹ್ಯತೆಯು ಕೂಡ ನಿವಾರಣೆಯಾಗುತ್ತದೆ.

ಮಸೀದಿಯಲ್ಲಿ ಸಾಮೂಹಿಕವಾಗಿ ನಮಾಝ್ ನಿರ್ವಹಿಸಲು ಹಾಜರಾಗಬೇಕಾದವರಿಗೆ, ಸಾಮೂಹಿಕ ನಮಾಝ್ ತಪ್ಪಿ ಹೋಗದಿರಲು ಇಂತಹ ವಸ್ತುಗಳನ್ನು ಸೇವಿಸುವುದು ಅಸಹ್ಯಪಡಲಾಗಿದೆ (ಮಕ್ರೂಹ್). ಆದರೆ ನಮಾಝನ್ನು ತಪ್ಪಿಸುವ ಉದ್ದೇಶದಿಂದ ಇವುಗಳನ್ನು ಸೇವಿಸುವುದಾದರೆ ಅದು ನಿಷಿದ್ಧವಾಗಿದೆ.

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬೆಳ್ಳುಳ್ಳಿ ಮುಂತಾದವುಗಳನ್ನು ತಿನ್ನಲು ನಿರಾಕರಿಸಿರುವುದು ಅದು ನಿಷಿದ್ಧವಾಗಿರುವ ಕಾರಣದಿಂದಲ್ಲ. ಬದಲಿಗೆ, ಜಿಬ್ರೀಲ್ (ಅವರ ಮೇಲೆ ಶಾಂತಿಯಿರಲಿ) ರೊಂದಿಗೆ ಅವರು ಸಂಭಾಷಣೆ ನಡೆಸಬೇಕಾಗಿರುವುದರಿಂದಾಗಿದೆ.

ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಉತ್ತಮ ಬೋಧನಾ ಶೈಲಿಯನ್ನು ತಿಳಿಸಲಾಗಿದೆ. ಏಕೆಂದರೆ, ಅವರು ನಿಯಮವನ್ನು ರಚಿಸುವಾಗ ಅದರ ಕಾರಣವನ್ನು ವಿವರಿಸುತ್ತಾರೆ. ಇದರಿಂದ ಸಭಿಕರು ಅದರ ಹಿಂದಿರುವ ಜಾಣ್ಮೆಯನ್ನು ಅರ್ಥಮಾಡಿಕೊಂಡು ಮನಸ್ಸಿಗೆ ಸಮಾಧಾನವನ್ನು ಪಡೆಯುತ್ತಾರೆ.

ಖಾದಿ ಹೇಳಿದರು: "ಇದರ ಮೇಲೆ ತುಲನೆ ಮಾಡಿಕೊಂಡು ವಿದ್ವಾಂಸರು ಈ ಪಟ್ಟಿಗೆ ಈದ್ ಮೈದಾನ, ಅಂತ್ಯಕ್ರಿಯೆ ಮುಂತಾದ ಜನರು ಒಟ್ಟುಗೂಡಿ ನಮಾಝ್ ಮಾಡುವ ಸ್ಥಳಗಳನ್ನು ಮತ್ತು ಜ್ಞಾನ ಸಭೆಗಳು, ದಿಕ್ರ್ ಸಭೆಗಳು, ಔತಣಗಳು ಮುಂತಾದ ಜನರು ಒಟ್ಟುಗೂಡುವ ಸ್ಥಳಗಳನ್ನು ಕೂಡ ಸೇರಿಸಿದ್ದಾರೆ. ಆದರೆ ಮಾರುಕಟ್ಟೆ ಮುಂತಾದವುಗಳು ಇದರಲ್ಲಿ ಸೇರುವುದಿಲ್ಲ."

ವಿದ್ವಾಂಸರು ಹೇಳಿದರು: "ಮಸೀದಿಯು ಜನರಿಲ್ಲದೆ ಖಾಲಿಯಾಗಿದ್ದರೂ ಸಹ ಈರುಳ್ಳಿ ಮುಂತಾದವುಗಳನ್ನು ತಿಂದವರು ಅವುಗಳನ್ನು ಪ್ರವೇಶಿಸುವುದನ್ನು ಈ ಹದೀಸ್ ನಿಷೇಧಿಸುತ್ತದೆ. ಹದೀಸ್‌ಗಳಲ್ಲಿರುವ ಸಾಮಾನ್ಯ ನಿಯಮ ಮತ್ತು ಮಸೀದಿಗಳು ದೇವದೂತರುಗಳ ವಾಸಸ್ಥಾನವಾಗಿದೆ ಎಂಬುದೇ ಇದಕ್ಕೆ ಕಾರಣ."

التصنيفات

Virtue and Rulings of Congregational Prayer