ಓ ನನ್ನ ದಾಸರೇ! ನಾನು ಸ್ವಯಂ ನನ್ನ ಮೇಲೆ ಅನ್ಯಾಯವನ್ನು ನಿಷೇಧಿಸಿದ್ದೇನೆ. ಅದೇ ರೀತಿ ಅದನ್ನು ನಿಮಗೂ ನಿಷೇಧಿಸಿದ್ದೇನೆ. ಆದ್ದರಿಂದ…

ಓ ನನ್ನ ದಾಸರೇ! ನಾನು ಸ್ವಯಂ ನನ್ನ ಮೇಲೆ ಅನ್ಯಾಯವನ್ನು ನಿಷೇಧಿಸಿದ್ದೇನೆ. ಅದೇ ರೀತಿ ಅದನ್ನು ನಿಮಗೂ ನಿಷೇಧಿಸಿದ್ದೇನೆ. ಆದ್ದರಿಂದ ನೀವು ಪರಸ್ಪರ ಅನ್ಯಾಯ ಮಾಡಬೇಡಿ

ಅಬೂ ದರ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಸರ್ವಶಕ್ತನಾದ ಅವರ ಪರಿಪಾಲಕನಿಂದ (ಅಲ್ಲಾಹನಿಂದ) ವರದಿ ಮಾಡುತ್ತಾ ಹೇಳುತ್ತಾರೆ: "ಓ ನನ್ನ ದಾಸರೇ! ನಾನು ಸ್ವಯಂ ನನ್ನ ಮೇಲೆ ಅನ್ಯಾಯವನ್ನು ನಿಷೇಧಿಸಿದ್ದೇನೆ. ಅದೇ ರೀತಿ ಅದನ್ನು ನಿಮಗೂ ನಿಷೇಧಿಸಿದ್ದೇನೆ. ಆದ್ದರಿಂದ ನೀವು ಪರಸ್ಪರ ಅನ್ಯಾಯ ಮಾಡಬೇಡಿ. ಓ ನನ್ನ ದಾಸರೇ! ನಾನು ಸನ್ಮಾರ್ಗ ತೋರಿಸಿದವರ ಹೊರತು ನೀವೆಲ್ಲರೂ ದಾರಿ ತಪ್ಪಿದವರು. ಆದ್ದರಿಂದ ನನ್ನಲ್ಲಿ ಸನ್ಮಾರ್ಗವನ್ನು ಬೇಡಿರಿ. ನಾನು ನಿಮಗೆ ಸನ್ಮಾರ್ಗ ತೋರಿಸುತ್ತೇನೆ. ಓ ನನ್ನ ದಾಸರೇ! ನಾನು ಆಹಾರ ನೀಡಿದವರ ಹೊರತು ನೀವೆಲ್ಲರೂ ಹಸಿದವರು. ಆದ್ದರಿಂದ ನನ್ನಲ್ಲಿ ಆಹಾರವನ್ನು ಬೇಡಿರಿ. ನಾನು ನಿಮಗೆ ಆಹಾರ ನೀಡುತ್ತೇನೆ. ಓ ನನ್ನ ದಾಸರೇ! ನಾನು ಬಟ್ಟೆ ಉಡಿಸಿದವರ ಹೊರತು ನೀವೆಲ್ಲರೂ ನಗ್ನರು. ಆದ್ದರಿಂದ ನನ್ನಲ್ಲಿ ಬಟ್ಟೆಯನ್ನು ಬೇಡಿರಿ. ನಾನು ನಿಮಗೆ ಬಟ್ಟೆ ಉಡಿಸುತ್ತೇನೆ. ಓ ನನ್ನ ದಾಸರೇ! ನೀವು ಹಗಲೂ-ರಾತ್ರಿ ಪಾಪ ಮಾಡುತ್ತೀರಿ. ನಾನು ಎಲ್ಲಾ ಪಾಪಗಳನ್ನೂ ಕ್ಷಮಿಸುತ್ತೇನೆ. ಆದ್ದರಿಂದ ನನ್ನಲ್ಲಿ ಕ್ಷಮೆಯಾಚಿಸಿರಿ. ನಾನು ನಿಮ್ಮನ್ನು ಕ್ಷಮಿಸುತ್ತೇನೆ. ಓ ನನ್ನ ದಾಸರೇ! ನನಗೆ ಯಾವುದೇ ತೊಂದರೆ ಮಾಡಲು ನಿಮಗೆ ಎಂದಿಗೂ ಸಾಧ್ಯವಿಲ್ಲ. ಅದೇ ರೀತಿ ನನಗೆ ಯಾವುದೇ ಉಪಕಾರ ಮಾಡಲೂ ನಿಮಗೆ ಎಂದಿಗೂ ಸಾಧ್ಯವಿಲ್ಲ. ಓ ನನ್ನ ದಾಸರೇ! ನಿಮಗಿಂತ ಮೊದಲಿನವರು, ನಿಮಗಿಂತ ನಂತರದವರು, ನಿಮ್ಮಲ್ಲಿರುವ ಮನುಷ್ಯರು ಮತ್ತು ನಿಮ್ಮಲ್ಲಿರುವ ಜಿನ್ನ್‌ಗಳು—ಎಲ್ಲರೂ ನಿಮ್ಮ ಪೈಕಿ ಮಹಾ ದೇವಭಯವುಳ್ಳವನಿಗೆ ಇರುವಂತಹ ಹೃದಯದಂತೆಯಾದರೂ, ಅದರಿಂದ ನನ್ನ ಆಧಿಪತ್ಯದಲ್ಲಿ ಏನೂ ಹೆಚ್ಚಾಗುವುದಿಲ್ಲ. ಓ ನನ್ನ ದಾಸರೇ! ನಿಮಗಿಂತ ಮೊದಲಿನವರು, ನಿಮಗಿಂತ ನಂತರದವರು, ನಿಮ್ಮಲ್ಲಿರುವ ಮನುಷ್ಯರು ಮತ್ತು ನಿಮ್ಮಲ್ಲಿರುವ ಜಿನ್ನ್‌ಗಳು—ಎಲ್ಲರೂ ನಿಮ್ಮ ಪೈಕಿ ಮಹಾ ದುಷ್ಟನಿಗೆ ಇರುವಂತಹ ಹೃದಯದಂತೆಯಾದರೂ, ಅದರಿಂದ ನನ್ನ ಆಧಿಪತ್ಯದಲ್ಲಿ ಏನೂ ಕಡಿಮೆಯಾಗುವುದಿಲ್ಲ. ಓ ನನ್ನ ದಾಸರೇ! ನಿಮಗಿಂತ ಮೊದಲಿನವರು, ನಿಮಗಿಂತ ನಂತರದವರು, ನಿಮ್ಮಲ್ಲಿರುವ ಮನುಷ್ಯರು ಮತ್ತು ನಿಮ್ಮಲ್ಲಿರುವ ಜಿನ್ನ್‌ಗಳು—ಎಲ್ಲರೂ ಒಂದೇ ಬಯಲು ಪ್ರದೇಶದಲ್ಲಿ ನಿಂತು, (ಎಲ್ಲರೂ) ನನ್ನಲ್ಲಿ ಬೇಡಿಕೆಯಿಟ್ಟು, ನಾನು ಪ್ರತಿಯೊಬ್ಬ ಮನುಷ್ಯನ ಬೇಡಿಕೆಯನ್ನು ಈಡೇರಿಸಿದರೂ, ಒಂದು ಸೂಜಿಯನ್ನು ಸಮುದ್ರಕ್ಕೆ ಚುಚ್ಚಿದರೆ (ಸಮುದ್ರದಲ್ಲಿ) ಏನು ಕಡಿಮೆಯಾಗಬಹುದೋ ಅಷ್ಟಲ್ಲದೆ ನನ್ನ ಆಧಿಪತ್ಯದಲ್ಲಿ ಏನೂ ಕಡಿಮೆಯಾಗುವುದಿಲ್ಲ. ಓ ನನ್ನ ದಾಸರೇ! ನಾನು ನಿಮಗೆ ನಿಮ್ಮ ಕರ್ಮಗಳನ್ನು ಮಾತ್ರ ಎಣಿಸಿಡುತ್ತೇನೆ. ನಂತರ ಅವುಗಳಿಗೆ ಪ್ರತಿಫಲ ನೀಡುತ್ತೇನೆ. ಆದ್ದರಿಂದ ಯಾರಾದರೂ ಒಳಿತನ್ನು ಪಡೆದರೆ ಅವನು ಅಲ್ಲಾಹನನ್ನು ಸ್ತುತಿಸಲಿ. ಯಾರಾದರೂ ಅದಲ್ಲದೆ ಬೇರೇನಾದರೂ ಪಡೆದರೆ, ಅವನು ಸ್ವತಃ ಅವನನ್ನಲ್ಲದೆ ಇನ್ನಾರನ್ನೂ ದೂಷಿಸದಿರಲಿ.”

[صحيح] [رواه مسلم]

الشرح

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ವಿವರಿಸುವುದೇನೆಂದರೆ, ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ: ಅವನು ಸ್ವಯಂ ಅವನ ಮೇಲೆ ಅನ್ಯಾಯವನ್ನು ನಿಷೇಧಿಸಿದ್ದಾನೆ ಮತ್ತು ಅದನ್ನು ಅವನ ಸೃಷ್ಟಿಗಳಿಗೂ ನಿಷೇಧಿಸಿದ್ದಾನೆ. ಆದ್ದರಿಂದ ಅವರು (ಸೃಷ್ಟಿಗಳು) ಪರಸ್ಪರ ಅನ್ಯಾಯ ಮಾಡಬಾರದು. ಅಲ್ಲಾಹನ ಮಾರ್ಗದರ್ಶನ ಮತ್ತು ಅನುಗ್ರಹವನ್ನು ಪಡೆಯದ ಸೃಷ್ಟಿಗಳೆಲ್ಲರೂ ಸತ್ಯ ಮಾರ್ಗದಿಂದ ತಪ್ಪಿ ಹೋಗಿದ್ದಾರೆ. ಯಾರು ಅಲ್ಲಾಹನಲ್ಲಿ ಸನ್ಮಾರ್ಗವನ್ನು ಬೇಡುತ್ತಾರೋ ಅವರಿಗೆ ಅವನು ಸನ್ಮಾರ್ಗವನ್ನು ನೀಡಿ ಅನುಗ್ರಹಿಸುತ್ತಾನೆ. ಸೃಷ್ಟಿಗಳೆಲ್ಲರೂ ಅಲ್ಲಾಹನ ಮೇಲೆ ಅವಲಂಬಿತರಾಗಿದ್ದಾರೆ. ಅವರು ತಮ್ಮ ಎಲ್ಲಾ ಅಗತ್ಯಗಳಿಗೂ ಅವನನ್ನೇ ಆಶ್ರಯಿಸಬೇಕಾಗಿದೆ. ಯಾರು ಅಲ್ಲಾಹನಲ್ಲಿ ಬೇಡುತ್ತಾರೋ ಅವರ ಬೇಡಿಕೆಯನ್ನು ಅವನು ಈಡೇರಿಸುತ್ತಾನೆ ಮತ್ತು ಅವರ ಅಗತ್ಯಗಳನ್ನು ಪೂರೈಸುತ್ತಾನೆ. ಸೃಷ್ಟಿಗಳು ಹಗಲು ರಾತ್ರಿ ಪಾಪ ಮಾಡುತ್ತಾರೆ. ದಾಸನು ಅಲ್ಲಾಹನಲ್ಲಿ ಕ್ಷಮೆಯಾಚಿಸುವಾಗ ಅವನು ದಾಸನ ಪಾಪಗಳನ್ನು ಕ್ಷಮಿಸುತ್ತಾನೆ. ಅಲ್ಲಾಹನಿಗೆ ಯಾವುದೇ ತೊಂದರೆ ಮಾಡಲು ಅಥವಾ ಉಪಕಾರ ಮಾಡಲು ಸೃಷ್ಟಿಗಳಿಗೆ ಸಾಧ್ಯವಿಲ್ಲ. ಸೃಷ್ಟಿಗಳೆಲ್ಲರೂ ಅತಿಹೆಚ್ಚು ದೇವಭಯವುಳ್ಳ ವ್ಯಕ್ತಿಯ ಹೃದಯವನ್ನು ಹೊಂದಿದರೆ, ಅವರಲ್ಲಿರುವ ದೇವಭಯದಿಂದ ಅಲ್ಲಾಹನ ಆಧಿಪತ್ಯದಲ್ಲಿ ಏನೂ ಹೆಚ್ಚಾಗುವುದಿಲ್ಲ. ಸೃಷ್ಟಿಗಳೆಲ್ಲರೂ ಅತ್ಯಂತ ದುಷ್ಟ ವ್ಯಕ್ತಿಯ ಹೃದಯವನ್ನು ಹೊಂದಿದರೆ, ಅವರ ದುಷ್ಟತನದಿಂದ ಅಲ್ಲಾಹನ ಆಧಿಪತ್ಯದಲ್ಲಿ ಏನೂ ಕಡಿಮೆಯಾಗುವುದಿಲ್ಲ. ಏಕೆಂದರೆ ಅವರು ದುರ್ಬಲರು ಮತ್ತು ಅಲ್ಲಾಹನನ್ನು ಅವಲಂಬಿಸಿದವರು. ಎಲ್ಲಾ ಸ್ಥಿತಿ, ಕಾಲ ಮತ್ತು ಸ್ಥಳದಲ್ಲೂ ಅಲ್ಲಾಹನ ಅಗತ್ಯವಿರುವವರು. ಆದರೆ ಸರ್ವಶಕ್ತನಾದ ಅಲ್ಲಾಹು ಸೃಷ್ಟಿಗಳಲ್ಲಿ ಯಾರನ್ನೂ ಅವಲಂಬಿಸಿಲ್ಲ. ಮನುಷ್ಯರು ಮತ್ತು ಜಿನ್ನ್‌ಗಳಲ್ಲಿರುವ ಮೊದಲಿನವರು ಮತ್ತು ನಂತರದವರು ಸೇರಿದಂತೆ ಎಲ್ಲರೂ ಒಂದು ಸ್ಥಳದಲ್ಲಿ ನಿಂತು ಅಲ್ಲಾಹನಲ್ಲಿ ಬೇಡಿಕೆಯಿಡ ತೊಡಗಿದರೆ, ಮತ್ತು ಅಲ್ಲಾಹು ಅವರೆಲ್ಲರ ಬೇಡಿಕೆಗಳನ್ನು ಈಡೇರಿಸುತ್ತಾ ಬಂದರೆ, ಸಮುದ್ರಕ್ಕೆ ಸೂಜಿಯನ್ನು ಚುಚ್ಚಿ ಹೊರತೆಗೆದರೆ ಸಮುದ್ರದಲ್ಲಿ ಹೇಗೆ ಏನೂ ಕಡಿಮೆಯಾಗುವುದಿಲ್ಲವೋ ಹಾಗೆಯೇ ಅಲ್ಲಾಹನ ಖಜಾನೆಯಿಂದ ಏನೂ ಕಡಿಮೆಯಾಗುವುದಿಲ್ಲ. ಅಲ್ಲಾಹನ ಶ್ರೀಮಂತಿಕೆಯ ಸಂಪೂರ್ಣತೆಯೇ ಇದಕ್ಕೆ ಕಾರಣ. ಸರ್ವಶಕ್ತನಾದ ಅಲ್ಲಾಹು ದಾಸರ ಕರ್ಮಗಳನ್ನು ದಾಖಲಿಸುತ್ತಾನೆ ಮತ್ತು ಎಣಿಸಿಡುತ್ತಾನೆ. ನಂತರ ಪುನರುತ್ಥಾನ ದಿನದಂದು ಅವುಗಳಿಗೆ ಪ್ರತಿಫಲ ನೀಡುತ್ತಾನೆ. ಯಾರು ತನ್ನ ಕರ್ಮಗಳಿಗೆ ಉತ್ತಮ ಪ್ರತಿಫಲವನ್ನು ಪಡೆಯುತ್ತಾನೋ ಅವನು ಆ ಕರ್ಮಗಳನ್ನು ಮಾಡುವ ಸೌಭಾಗ್ಯ ನೀಡಿದ್ದಕ್ಕಾಗಿ ಅಲ್ಲಾಹನನ್ನು ಸ್ತುತಿಸಲಿ. ಯಾರು ತನ್ನ ಕರ್ಮಗಳಿಗೆ ಉತ್ತಮವಲ್ಲದ ಪ್ರತಿಫಲವನ್ನು ಪಡೆಯುತ್ತಾನೋ ಅವನು, ತನ್ನನ್ನು ನಷ್ಟಕ್ಕೊಳಪಡಿಸಿದ ದುಷ್ಕರ್ಮಗಳಿಗೆ ಪ್ರೇರೇಪಿಸುವ ತನ್ನ ಮನಸ್ಸನ್ನೇ ವಿನಾ ಇನ್ನಾರನ್ನೂ ದೂಷಿಸದಿರಲಿ.

فوائد الحديث

ಇದು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅಲ್ಲಾಹನಿಂದ ವರದಿ ಮಾಡುವ ಹದೀಸ್ ಆಗಿದ್ದು ಇದನ್ನು ಪವಿತ್ರ (ಕುದ್ಸಿ) ಅಥವಾ ದೈವಿಕ ಹದೀಸ್ ಎಂದು ಕರೆಯಲಾಗುತ್ತದೆ. ಇಂತಹ ಹದೀಸ್‌ಗಳ ಪದಗಳು ಮತ್ತು ಅರ್ಥವು ಅಲ್ಲಾಹನದ್ದೇ ಆಗಿವೆ. ಆದರೆ ಇವುಗಳಿಗೆ ಕುರ್‌ಆನ್‌ನ ವಚನಗಳಿಗೆ ಇರುವ ವಿಶೇಷತೆಗಳಿಲ್ಲ. ಅಂದರೆ ಈ ವಚನಗಳನ್ನು ಪಠಿಸುವುದು ಆರಾಧನೆಯಲ್ಲ, ಇವುಗಳನ್ನು ಸ್ಪರ್ಶಿಸಲು ಶುದ್ಧಿಯಿರಬೇಕಾದ ಅಗತ್ಯವಿಲ್ಲ ಮತ್ತು ಇವು ಸವಾಲಿನ ರೂಪದಲ್ಲಿ ಅಥವಾ ಪವಾಡದ ರೂಪದಲ್ಲಿ ಅವತೀರ್ಣವಾಗಿಲ್ಲ.

ಮನುಷ್ಯರು ಪಡೆಯುವ ಯಾವುದೇ ಜ್ಞಾನ ಅಥವಾ ಮಾರ್ಗದರ್ಶನವು ಅಲ್ಲಾಹನ ಮಾರ್ಗದರ್ಶನ ಮತ್ತು ಬೋಧನೆಯಿಂದಲೇ ಬರುತ್ತದೆ.

ದಾಸನಿಗೆ ಏನಾದರೂ ಒಳಿತುಂಟಾದರೆ ಅದು ಅಲ್ಲಾಹನ ಅನುಗ್ರಹದಿಂದಾಗಿದೆ. ಅವನಿಗೆ ಏನಾದರೂ ಕೆಡುಕುಂಟಾದರೆ ಅದು ಅವನ ಮನಸ್ಸು ಮತ್ತು ಮೋಹದಿಂದಾಗಿದೆ.

ಯಾರಾದರೂ ಒಳಿತು ಮಾಡಿದರೆ ಅದು ಅಲ್ಲಾಹನ ಅನುಗ್ರಹದಿಂದಲೇ ಆಗಿದೆ. ಅದಕ್ಕೆ ಅಲ್ಲಾಹು ಪ್ರತಿಫಲ ನೀಡುವುದು ಕೂಡ ಅವನ ಅನುಗ್ರಹದಿಂದಲೇ ಆಗಿದೆ. ಆದ್ದರಿಂದ ಅವನು ಅದಕ್ಕಾಗಿ ಅಲ್ಲಾಹನನ್ನು ಸ್ತುತಿಸಬೇಕು. ಇನ್ನು ಯಾರಾದರೂ ಕೆಡುಕು ಮಾಡಿದರೆ ಅವನು ಅವನ ಮನಸ್ಸನ್ನೇ ಹೊರತು ಇನ್ನಾರನ್ನೂ ದೂಷಿಸಬೇಕಾಗಿಲ್ಲ.

التصنيفات

The Creed, Oneness of Allah's Names and Attributes