ಒಮ್ಮೆ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಒಂದು ವಿಷಯವನ್ನು ಪ್ರಸ್ತಾಪಿಸುತ್ತಾ ಹೇಳಿದರು: "ಅದು ಜ್ಞಾನವು…

ಒಮ್ಮೆ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಒಂದು ವಿಷಯವನ್ನು ಪ್ರಸ್ತಾಪಿಸುತ್ತಾ ಹೇಳಿದರು: "ಅದು ಜ್ಞಾನವು ಹೊರಟುಹೋಗುವ ಸಮಯದಲ್ಲಾಗಿದೆ

ಝಿಯಾದ್ ಬಿನ್ ಲಬೀದ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಒಮ್ಮೆ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಒಂದು ವಿಷಯವನ್ನು ಪ್ರಸ್ತಾಪಿಸುತ್ತಾ ಹೇಳಿದರು: "ಅದು ಜ್ಞಾನವು ಹೊರಟುಹೋಗುವ ಸಮಯದಲ್ಲಾಗಿದೆ." ನಾನು ಕೇಳಿದೆ: "ಓ ಅಲ್ಲಾಹನ ಸಂದೇಶವಾಹಕರೇ! ಜ್ಞಾನವು ಹೊರಟುಹೋಗುವುದು ಹೇಗೆ? ನಾವಂತೂ ಕುರ್‌ಆನ್ ಪಠಿಸುತ್ತೇವೆ ಮತ್ತು ನಮ್ಮ ಮಕ್ಕಳಿಗೆ ಪಠಿಸಲು ಕಲಿಸುತ್ತಿದ್ದೇವೆ. ನಮ್ಮ ಮಕ್ಕಳು ಅವರ ಮಕ್ಕಳಿಗೆ ಅದರ ಪಠಣವನ್ನು ಕಲಿಸುತ್ತಾರೆ ಹೀಗೆ ಪುನರುತ್ಥಾನ ದಿನದ ತನಕ ನಡೆಯುತ್ತದೆಯಲ್ಲವೇ?" ಅವರು ಹೇಳಿದರು: "ತಮ್ಮ ತಾಯಿ ತಮ್ಮನ್ನು ಕಳೆದುಕೊಳ್ಳಲಿ. ಓ ಝಿಯಾದ್! ನಾನು ತಮ್ಮನ್ನು ಮದೀನದಲ್ಲಿ ಅತ್ಯಧಿಕ ಪಾಂಡಿತ್ಯವಿರುವ ವ್ಯಕ್ತಿ ಎಂದು ಭಾವಿಸಿದ್ದೆ. ಈ ಯಹೂದಿಗಳು ಮತ್ತು ಕ್ರೈಸ್ತರು ತೌರಾತ್ ಮತ್ತು ಇಂಜೀಲನ್ನು ಪಠಿಸುವುದಿಲ್ಲವೇ? ಆದರೆ ಅವರು ಅದರಲ್ಲಿರುವಂತೆ ಅನುಸರಿಸುತ್ತಿರುವರೇ?"

[Sahih/Authentic by virtue of corroborating evidence.] [Ibn Maajah]

الشرح

ಒಮ್ಮೆ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅವರ ಸಂಗಡಿಗರ ನಡುವೆ ಕುಳಿತುಕೊಂಡಿದ್ದರು. ಆಗ ಅವರು ಹೇಳಿದರು: "ಇಂತಿಂತಹ ಸಮಯದಲ್ಲಿ ಜನರಿಂದ ಜ್ಞಾನವನ್ನು ಎತ್ತಿಕೊಳ್ಳಲಾಗುವುದು ಮತ್ತು ಹಿಂಪಡೆಯಲಾಗುವುದು." ಆಗ ಝಿಯಾದ್ ಬಿನ್ ಲಬೀದ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಗೆ ಆಶ್ಚರ್ಯವಾಯಿತು. ಅವರು ಪ್ರವಾದಿಯವರೊಡನೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಕೇಳಿದರು: "ನಮ್ಮಿಂದ ಜ್ಞಾನವು ಎತ್ತಲಾಗುವುದು ಮತ್ತು ನಾವು ಅದನ್ನು ಕಳೆದುಕೊಳ್ಳುವುದು ಹೇಗೆ? ನಾವಂತೂ ಕುರ್‌ಆನ್ ಪಠಿಸಿದ್ದೇವೆ ಮತ್ತು ಕಂಠಪಾಠ ಮಾಡಿದ್ದೇವೆ. ಅಲ್ಲಾಹನಾಣೆ! ನಾವು ಅದನ್ನು ಪಠಿಸುತ್ತಲೇ ಇರುತ್ತೇವೆ. ನಮ್ಮ ಮಹಿಳೆಯರಿಗೆ, ಮಕ್ಕಳಿಗೆ, ಮೊಮ್ಮಕ್ಕಳಿಗೆ ಅದನ್ನು ಕಲಿಸುತ್ತಲೇ ಇರುತ್ತೇವೆ." ಆಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಆಶ್ಚರ್ಯದಿಂದ ಕೇಳಿದರು: "ನಿಮ್ಮ ತಾಯಿ ನಿಮ್ಮನ್ನು ಕಳೆದುಕೊಳ್ಳಲಿ. ಓ ಝಿಯಾದ್! ನಾನು ತಮ್ಮನ್ನು ಮದೀನದ ವಿದ್ವಾಂಸರಲ್ಲಿ ಒಬ್ಬರೆಂದು ಪರಿಗಣಿಸಿದ್ದೆ!" ನಂತರ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿ ಇರಲಿ) ವಿವರಿಸುತ್ತಾ ಹೇಳಿದರು: "ಜ್ಞಾನವು ಕಳೆದುಹೋಗುವುದು ಕುರ್‌ಆನ್ ಕಳೆದುಹೋಗುವುದರಿಂದಲ್ಲ. ಬದಲಿಗೆ, ಜ್ಞಾನವು ಕಳೆದುಹೋಗುವುದು ಅದರಂತೆ ಕರ್ಮ ಮಾಡದಿರುವಾಗ. ಯಹೂದಿಗಳ ಮತ್ತು ಕ್ರೈಸ್ತರ ಬಳಿ ಈ ತೌರಾತ್ ಮತ್ತು ಇಂಜೀಲ್ ಇದೆ. ಆದರೂ ಅವರಿಗೆ ಅದು ಪ್ರಯೋಜನ ನೀಡುವುದಿಲ್ಲ. ಅದರ ಉದ್ದೇಶಕ್ಕಾಗಿ ಅವರು ಅದನ್ನು ಬಳಸಲಿಲ್ಲ. ಅಂದರೆ ಅದರಿಂದ ಅವರು ಪಡೆದ ಜ್ಞಾನದ ಪ್ರಕಾರ ಅವರು ಕರ್ಮವೆಸಗಲಿಲ್ಲ.

فوائد الحديث

ಮುಸ್‌ಹಫ್‌ಗಳು ಮತ್ತು ಗ್ರಂಥಗಳು ಜನರ ಕೈಯಲ್ಲಿದ್ದು ಅವರು ಅದರ ಪ್ರಕಾರ ಕರ್ಮವೆಸಗದಿದ್ದರೆ ಅದು ಅವರಿಗೆ ಪ್ರಯೋಜನ ನೀಡುವುದಿಲ್ಲವೆಂದು ಈ ಹದೀಸ್ ತಿಳಿಸುತ್ತದೆ.

ಜ್ಞಾನವು ಎತ್ತಲಾಗುವ ಕೆಲವು ಕಾರಣಗಳು ಹೀಗಿವೆ: ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮರಣ, ವಿದ್ವಾಂಸರ ಮರಣ, ಜ್ಞಾನದ ಪ್ರಕಾರ ಕರ್ಮ ಮಾಡದಿರುವುದು.

ಜ್ಞಾನವು ಹೊರಟುಹೋಗುವುದು ಮತ್ತು ಜನರು ಅದರ ಪ್ರಕಾರ ಕರ್ಮ ಮಾಡುವುದನ್ನು ಬಿಟ್ಟು ಬಿಡುವುದು ಪ್ರಳಯದ ಚಿಹ್ನೆಗಳಲ್ಲಿ ಒಂದಾಗಿದೆ.

ಜ್ಞಾನದ ಪ್ರಕಾರ ಕರ್ಮ ಮಾಡಲು ಈ ಹದೀಸ್ ಒತ್ತಾಯಿಸುತ್ತದೆ. ಏಕೆಂದರೆ ಅದು ಜ್ಞಾನದ ಉದ್ದೇಶವಾಗಿದೆ.