ನೀವು ಗ್ರಂಥದವರ ಮಾತುಗಳನ್ನು ಅಂಗೀಕರಿಸಬೇಡಿ ಮತ್ತು ನಿಷೇಧಿಸಬೇಡಿ. ಬದಲಿಗೆ, ಹೀಗೆ ಹೇಳಿರಿ: ನಾವು ಅಲ್ಲಾಹನಲ್ಲಿ ಮತ್ತು ನಮಗೆ…

ನೀವು ಗ್ರಂಥದವರ ಮಾತುಗಳನ್ನು ಅಂಗೀಕರಿಸಬೇಡಿ ಮತ್ತು ನಿಷೇಧಿಸಬೇಡಿ. ಬದಲಿಗೆ, ಹೀಗೆ ಹೇಳಿರಿ: ನಾವು ಅಲ್ಲಾಹನಲ್ಲಿ ಮತ್ತು ನಮಗೆ ಅವತೀರ್ಣವಾದ ಸಂದೇಶದಲ್ಲಿ ವಿಶ್ವಾಸವಿಟ್ಟಿದ್ದೇವೆ

ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಗ್ರಂಥದವರು ಹಿಬ್ರೂ ಭಾಷೆಯಲ್ಲಿ ತೌರಾತ್ ಪಠಿಸುತ್ತಿದ್ದರು ಮತ್ತು ಅರಬ್ಬಿ ಭಾಷೆಯಲ್ಲಿ ಅದರ ಅರ್ಥವನ್ನು ಮುಸ್ಲಿಮರಿಗೆ ವಿವರಿಸುತ್ತಿದ್ದರು. ಆದ್ದರಿಂದ, ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ನೀವು ಗ್ರಂಥದವರ ಮಾತುಗಳನ್ನು ಅಂಗೀಕರಿಸಬೇಡಿ ಮತ್ತು ನಿಷೇಧಿಸಬೇಡಿ. ಬದಲಿಗೆ, ಹೀಗೆ ಹೇಳಿರಿ: ನಾವು ಅಲ್ಲಾಹನಲ್ಲಿ ಮತ್ತು ನಮಗೆ ಅವತೀರ್ಣವಾದ ಸಂದೇಶದಲ್ಲಿ ವಿಶ್ವಾಸವಿಟ್ಟಿದ್ದೇವೆ. [ಬಕರ:136]."

[Sahih/Authentic.] [Al-Bukhari]

الشرح

ಗ್ರಂಥದವರು ಅವರ ಗ್ರಂಥಗಳಿಂದ ವರದಿ ಮಾಡುವುದನ್ನು ನಂಬಿ ವಂಚಿತರಾಗಬಾರದೆಂದು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಮ್ಮ ಸಮುದಾಯಕ್ಕೆ ಎಚ್ಚರಿಕೆ ನೀಡುತ್ತಿದ್ದಾರೆ. ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಕಾಲದಲ್ಲಿ ಯಹೂದಿಗಳು ಹೀಬ್ರೂ ಭಾಷೆಯಲ್ಲಿ ತೌರಾತ್ ಪಠಿಸುತಿದ್ದರು. ಅದು ಯಹೂದಿಗಳ ಭಾಷೆಯಾಗಿದೆ. ನಂತರ ಅವರು ಅದನ್ನು ಅರಬ್ಬಿಯಲ್ಲಿ ವಿವರಿಸುತ್ತಿದ್ದರು. ಆದ್ದರಿಂದ, ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ನೀವು ಗ್ರಂಥದವರ ಮಾತುಗಳನ್ನು ಅಂಗೀಕರಿಸಬೇಡಿ ಮತ್ತು ನಿಷೇಧಿಸಬೇಡಿ." ಅಂದರೆ, ಅವರು ಹೇಳುವುದು ಸತ್ಯವೋ ಅಥವಾ ಸುಳ್ಳೋ ಎಂದು ತಿಳಿಯಲಾಗದಿದ್ದರೆ. ಏಕೆಂದರೆ, ನಮಗೆ ಅವತೀರ್ಣವಾದ ಕುರ್‌ಆನಿನಲ್ಲಿ, ಮತ್ತು ಅವರಿಗೆ ಅವತೀರ್ಣವಾದ ಗ್ರಂಥಗಳಲ್ಲಿ ವಿಶ್ವಾಸವಿಡಬೇಕೆಂದು ಸರ್ವಶಕ್ತನಾದ ಅಲ್ಲಾಹು ನಮಗೆ ಆದೇಶಿಸಿದ್ದಾನೆ. ಆದರೆ ಅವರು ಅವರ ಗ್ರಂಥಗಳಿಂದ ಉಲ್ಲೇಖಿಸುವ ವಿಷಯಗಳು ಸತ್ಯವೋ ಅಥವಾ ಸುಳ್ಳೋ ಎಂದು ಸ್ಪಷ್ಟಪಡಿಸುವ ಯಾವುದಾದರೂ ಉಲ್ಲೇಖವು ನಮ್ಮ ಧರ್ಮದಲ್ಲಿರುವ ಹೊರತು ಅವುಗಳನ್ನು ಸತ್ಯವೋ ಅಥವಾ ಸುಳ್ಳೋ ಎಂದು ತಿಳಿದುಕೊಳ್ಳಲು ನಮಗೆ ಸಾಧ್ಯವಿಲ್ಲ. ಆದ್ದರಿಂದ ಇಂತಹ ಸಂದರ್ಭದಲ್ಲಿ ನಾವು ತಟಸ್ಥರಾಗಬೇಕು. ನಾವು ಅವರ ಮಾತನ್ನು ಅಂಗೀಕರಿಸಬಾರದು. ಏಕೆಂದರೆ ಅವರು ತಮ್ಮ ಗ್ರಂಥದಲ್ಲಿರುವುದನ್ನು ತಿರುಚಿ ಸುಳ್ಳು ಹೇಳಿದ್ದರೆ ನಾವು ಆ ಸುಳ್ಳಿನಲ್ಲಿ ಭಾಗಿಯಾಗುವ ಸಾಧ್ಯತೆ ಇದೆ. ಅದೇ ರೀತಿ, ನಾವು ಅವರ ಮಾತನ್ನು ನಿಷೇಧಿಸಲೂ ಬಾರದು. ಏಕೆಂದರೆ ಅವರ ಮಾತು ಸತ್ಯವಾಗಿದ್ದು ಅವರ ಗ್ರಂಥದಲ್ಲಿರುವುದನ್ನು ವಿಶ್ವಾಸವಿಡಬೇಕೆಂಬ ಆಜ್ಞೆಯನ್ನು ನಾವು ನಿಷೇಧಿಸಿದವರಾಗಿ ಬಿಡುವ ಸಾಧ್ಯತೆಯಿದೆ. ಆದ್ದರಿಂದ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೀಗೆ ಹೇಳಲು ಆಜ್ಞಾಪಿಸಿದರು: “ನಾವು ಅಲ್ಲಾಹನಲ್ಲಿ, ನಮಗೆ ಅವತೀರ್ಣವಾಗಿರುವುದರಲ್ಲಿ, ಇಬ್ರಾಹೀಮರಿಗೆ, ಇಸ್ಮಾಈಲರಿಗೆ, ಇಸ್‍ಹಾಕರಿಗೆ, ಯಾಕೂಬರಿಗೆ ಮತ್ತು ಯಾಕೂಬರ ಸಂತಾನಕ್ಕೆ ಅವತೀರ್ಣವಾಗಿರುವುದರಲ್ಲಿ, ಮೂಸಾ ಮತ್ತು ಈಸಾರಿಗೆ ನೀಡಲಾಗಿರುವುದರಲ್ಲಿ, ಎಲ್ಲಾ ಪ್ರವಾದಿಗಳಿಗೂ ಅವರ ಪರಿಪಾಲಕನ ಕಡೆಯಿಂದ ನೀಡಲಾಗಿರುವುದರಲ್ಲಿ ವಿಶ್ವಾಸವಿಟ್ಟಿದ್ದೇವೆ. ಅವರಲ್ಲಿ ಯಾರ ನಡುವೆಯೂ ನಾವು ಬೇಧ ಮಾಡುವುದಿಲ್ಲ. ಮತ್ತು ನಾವು ಅವನಿಗೆ ಶರಣಾಗಿ ಜೀವಿಸುತ್ತೇವೆ.” [ಬಕರ:136].

فوائد الحديث

ಗ್ರಂಥದವರ ಮಾತುಗಳನ್ನು ಮೂರು ವಿಭಾಗಗಳಾಗಿ ವಿಂಗಡಿಸಬಹುದು: ಕುರ್‌ಆನ್ ಮತ್ತು ಸುನ್ನತಿಗೆ ಹೊಂದಾಣಿಕೆಯಾಗುವ ಮಾತುಗಳು. ಇವುಗಳನ್ನು ಅಂಗೀಕರಿಸಬೇಕು. ಕುರ್‌ಆನ್ ಮತ್ತು ಸುನ್ನತಿಗೆ ವಿರುದ್ಧವಾಗಿರುವ ಮಾತುಗಳು. ಇವು ಸುಳ್ಳುಗಳಾಗಿದ್ದು ಇವುಗಳನ್ನು ನಿಷೇಧಿಸಬೇಕು. ಸತ್ಯ ಅಥವಾ ಸುಳ್ಳು ಎಂದು ಸಾಬೀತುಪಡಿಸುವ ಯಾವುದೇ ಉಲ್ಲೇಖಗಳು ಕುರ್‌ಆನ್ ಮತ್ತು ಸುನ್ನತಿನಲ್ಲಿಲ್ಲದ ಮಾತುಗಳು. ಇವುಗಳನ್ನು ವರದಿ ಮಾಡಬಹುದು. ಆದರೆ, ಇವುಗಳನ್ನು ಅಂಗೀಕರಿಸಬಾರದು ಮತ್ತು ನಿಷೇಧಿಸಬಾರದು.