ಆದಮರ ಮಗನು (ಮನುಷ್ಯನು) ಹೊಟ್ಟೆಗಿಂತ ಕೆಟ್ಟ ಪಾತ್ರೆಯನ್ನು ತುಂಬಲಿಲ್ಲ. ಆದಮರ ಮಗನಿಗೆ ಅವನ ಬೆನ್ನು ನೇರವಾಗಿಡಲು ಕೆಲವು ತುತ್ತುಗಳು…

ಆದಮರ ಮಗನು (ಮನುಷ್ಯನು) ಹೊಟ್ಟೆಗಿಂತ ಕೆಟ್ಟ ಪಾತ್ರೆಯನ್ನು ತುಂಬಲಿಲ್ಲ. ಆದಮರ ಮಗನಿಗೆ ಅವನ ಬೆನ್ನು ನೇರವಾಗಿಡಲು ಕೆಲವು ತುತ್ತುಗಳು ಸಾಕಾಗುತ್ತವೆ. ಒಂದು ವೇಳೆ (ಹೆಚ್ಚು ತಿನ್ನುವುದು) ಅನಿವಾರ್ಯವಾದರೆ, (ಅವನ ಹೊಟ್ಟೆಯ) ಮೂರನೇ ಒಂದು ಭಾಗವು ಅವನ ಆಹಾರಕ್ಕಾಗಿ, ಮೂರನೇ ಒಂದು ಭಾಗವು ಅವನ ಪಾನೀಯಕ್ಕಾಗಿ, ಮತ್ತು ಮೂರನೇ ಒಂದು ಭಾಗವು ಅವನ ಉಸಿರಾಟಕ್ಕಾಗಿ (ಇರಲಿ)

ಅಲ್-ಮಿಖ್ದಾಮ್ ಇಬ್ನ್ ಮಅದೀ ಕರಿಬ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೀಗೆ ಹೇಳುವುದನ್ನು ನಾನು ಕೇಳಿದ್ದೇನೆ: "ಆದಮರ ಮಗನು (ಮನುಷ್ಯನು) ಹೊಟ್ಟೆಗಿಂತ ಕೆಟ್ಟ ಪಾತ್ರೆಯನ್ನು ತುಂಬಲಿಲ್ಲ. ಆದಮರ ಮಗನಿಗೆ ಅವನ ಬೆನ್ನು ನೇರವಾಗಿಡಲು ಕೆಲವು ತುತ್ತುಗಳು ಸಾಕಾಗುತ್ತವೆ. ಒಂದು ವೇಳೆ (ಹೆಚ್ಚು ತಿನ್ನುವುದು) ಅನಿವಾರ್ಯವಾದರೆ, (ಅವನ ಹೊಟ್ಟೆಯ) ಮೂರನೇ ಒಂದು ಭಾಗವು ಅವನ ಆಹಾರಕ್ಕಾಗಿ, ಮೂರನೇ ಒಂದು ಭಾಗವು ಅವನ ಪಾನೀಯಕ್ಕಾಗಿ, ಮತ್ತು ಮೂರನೇ ಒಂದು ಭಾಗವು ಅವನ ಉಸಿರಾಟಕ್ಕಾಗಿ (ಇರಲಿ)".

[صحيح] [رواه الإمام أحمد والترمذي والنسائي وابن ماجه]

الشرح

ಗೌರವಾನ್ವಿತ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ನಮಗೆ ವೈದ್ಯಶಾಸ್ತ್ರದ ಮೂಲಭೂತ ತತ್ವಗಳಲ್ಲಿ ಒಂದನ್ನು ತಿಳಿಸಿದ್ದಾರೆ. ಅದೇನೆಂದರೆ, ಮನುಷ್ಯನು ತನ್ನ ಆರೋಗ್ಯವನ್ನು ರಕ್ಷಿಸಿಕೊಳ್ಳುವ ವಿಧಾನ. ಅಂದರೆ, ಕಡಿಮೆ ತಿನ್ನುವುದು. ಮನುಷ್ಯನು ತನ್ನ ಹಸಿವನ್ನು ನೀಗಿಸಲು ಮತ್ತು ತನ್ನ ಅಗತ್ಯ ಕಾರ್ಯಗಳಿಗಾಗಿ ತನಗೆ ಶಕ್ತಿ ನೀಡಲು ಬೇಕಾದಷ್ಟು ಮಾತ್ರ ತಿನ್ನಬೇಕು. ಏಕೆಂದರೆ, ತುಂಬಿಸಲಾಗುವ ಪಾತ್ರೆಗಳಲ್ಲಿ ಅತ್ಯಂತ ಕೆಟ್ಟದ್ದು ಹೊಟ್ಟೆಯಾಗಿದೆ. ಅತಿಯಾಗಿ ತಿನ್ನುವುದರಿಂದ ಅಸಂಖ್ಯಾತ ಮಾರಣಾಂತಿಕ ರೋಗಗಳು ಉಂಟಾಗುತ್ತವೆ. ಅವು ತಕ್ಷಣವೇ ಆಗಿರಬಹುದು ಅಥವಾ ವಿಳಂಬವಾಗಿ ಬರಬಹುದು. ಅವು ಆಂತರಿಕವಾಗಿರಬಹುದು ಅಥವಾ ಬಾಹ್ಯವಾಗಿರಬಹುದು. ನಂತರ ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: ಒಬ್ಬ ವ್ಯಕ್ತಿಗೆ ಹೊಟ್ಟೆ ತುಂಬ ತಿನ್ನುವುದು ಅನಿವಾರ್ಯವಾದರೆ, ಅವನು ತನ್ನ ಆಹಾರವನ್ನು (ಹೊಟ್ಟೆಯ) ಮೂರನೇ ಒಂದು ಭಾಗದಷ್ಟು, ಇನ್ನೊಂದು ಮೂರನೇ ಒಂದು ಭಾಗವನ್ನು ಪಾನೀಯಕ್ಕಾಗಿ, ಮತ್ತು (ಕೊನೆಯ) ಮೂರನೇ ಒಂದು ಭಾಗವನ್ನು ಉಸಿರಾಟಕ್ಕಾಗಿ ಇಟ್ಟುಕೊಳ್ಳಲಿ. ಇದರಿಂದ ಅವನಿಗೆ ಇಕ್ಕಟ್ಟು ಮತ್ತು ಹಾನಿಯುಂಟಾಗುವುದಿಲ್ಲ. ಹಾಗೆಯೇ, ಅಲ್ಲಾಹು ಅವನಿಗೆ ಕಡ್ಡಾಯಗೊಳಿಸಿದ ಧಾರ್ಮಿಕ ಮತ್ತು ಲೌಕಿಕ ಕಾರ್ಯಗಳನ್ನು ನಿರ್ವಹಿಸಲು ಅವನಿಗೆ ಸೋಮಾರಿತನ ಉಂಟಾಗುವುದಿಲ್ಲ.

فوائد الحديث

ತಿನ್ನುವುದು ಮತ್ತು ಕುಡಿಯುವುದರಲ್ಲಿ ಮಿತಿಮೀರದಿರುವುದು. ಇದು ವೈದ್ಯಶಾಸ್ತ್ರದ ಎಲ್ಲಾ ಮೂಲಭೂತ ತತ್ವಗಳನ್ನು ಒಳಗೊಂಡಿರುವ ಒಂದು ಸಮಗ್ರ ತತ್ವವಾಗಿದೆ. ಏಕೆಂದರೆ ಅತಿಯಾಗಿ ತಿನ್ನುವುದರಿಂದ ಅನೇಕ ರೋಗಗಳು ಮತ್ತು ಅಸ್ವಸ್ಥತೆಗಳು ಉಂಟಾಗುತ್ತವೆ.

ತಿನ್ನುವುದರ ಉದ್ದೇಶ, ಆರೋಗ್ಯ ಮತ್ತು ಶಕ್ತಿಯನ್ನು ಕಾಪಾಡಿಕೊಳ್ಳುವುದು ಮತ್ತು ಅವುಗಳ ಮೂಲಕ ಜೀವನದ ಸುಸ್ಥಿತಿಯನ್ನು ಕಾಪಾಡಿಕೊಳ್ಳುವುದಾಗಿದೆ.

ಹೊಟ್ಟೆಯನ್ನು ಆಹಾರದಿಂದ ತುಂಬಿಸುವುದರಿಂದ ದೈಹಿಕ ಮತ್ತು ಧಾರ್ಮಿಕ ಹಾನಿಗಳಿವೆ. ಉಮರ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ಹೇಳಿದರು: "ಅತಿಯಾಗಿ ತಿನ್ನುವುದರ ಬಗ್ಗೆ ಎಚ್ಚರವಾಗಿರಿ. ಏಕೆಂದರೆ ಅದು ದೇಹವನ್ನು ಹಾಳು ಮಾಡುತ್ತದೆ ಮತ್ತು ನಮಾಝ್‌ನ ಬಗ್ಗೆ ಸೋಮಾರಿತನ ಉಂಟುಮಾಡುತ್ತದೆ."

ನಿಯಮದ ದೃಷ್ಟಿಯಿಂದ ನೋಡುವಾಗ ತಿನ್ನುವುದರಲ್ಲಿ ಹಲವು ವಿಧಗಳಿವೆ: ವಾಜಿಬ್ (ಕಡ್ಡಾಯ): ಜೀವವನ್ನು ಉಳಿಸಲು ಬೇಕಾದಷ್ಟು ತಿನ್ನುವುದು. ಅದನ್ನು ಬಿಟ್ಟರೆ (ದೇಹಕ್ಕೆ) ಹಾನಿಯುಂಟಾಗುತ್ತದೆ. ಜಾಯಿಝ್ (ಅನುಮತಿಸಲ್ಪಟ್ಟದ್ದು): ಕಡ್ಡಾಯದ ಪ್ರಮಾಣಕ್ಕಿಂತ ಸ್ವಲ್ಪ ಹೆಚ್ಚು. ಆದರೆ ಅದರಿಂದ ಹಾನಿಯಾಗುವ ಭಯವಿರಬಾರದು. ಮಕ್ರೂಹ್ (ಅನಪೇಕ್ಷಿತ): ಅದರಿಂದ ಹಾನಿಯಾಗುವ ಭಯವಿರುವುದು. ಮುಹರ್ರಮ್ (ನಿಷಿದ್ಧ): ಅದರಿಂದ ಹಾನಿಯಾಗುತ್ತದೆ ಎಂದು ಸ್ಪಷ್ಟವಾಗಿ ತಿಳಿದಿರುವುದು. ಮುಸ್ತಹಬ್ (ಅಪೇಕ್ಷಿತ): ಅಲ್ಲಾಹನ ಆರಾಧನೆ ಮತ್ತು ವಿಧೇಯತೆಗೆ ಸಹಾಯವಾಗುವಷ್ಟು (ತಿನ್ನುವುದು). ಈ ಹದೀಸ್‌ನಲ್ಲಿ ಇವುಗಳನ್ನು ಮೂರು ದರ್ಜೆಗಳಲ್ಲಿ ಸಂಕ್ಷಿಪ್ತಗೊಳಿಸಲಾಗಿದೆ: ಮೊದಲನೆಯದು: ಹೊಟ್ಟೆಯನ್ನು ತುಂಬಿಸುವುದು. ಎರಡನೆಯದು: ಬೆನ್ನು ನೇರವಾಗಿಡಲು ಕೆಲವು ತುತ್ತುಗಳು. ಮೂರನೆಯದು: "ಮೂರನೇ ಒಂದು ಭಾಗ ಆಹಾರಕ್ಕೆ, ಮೂರನೇ ಒಂದು ಭಾಗ ಪಾನೀಯಕ್ಕೆ ಮತ್ತು ಮೂರನೇ ಒಂದು ಭಾಗ ಉಸಿರಾಟಕ್ಕೆ" ಎಂದು ಹೇಳಿರುವುದು. ಇವೆಲ್ಲವೂ, ತಿನ್ನುವ ವಸ್ತು ಹಲಾಲ್ ಆಗಿದ್ದರೆ (ಮಾತ್ರ ಅನ್ವಯಿಸುತ್ತದೆ).

ಈ ಹದೀಸ್ ವೈದ್ಯಶಾಸ್ತ್ರದ ನಿಯಮಗಳಲ್ಲಿ ಒಂದು ನಿಯಮವಾಗಿದೆ. ಏಕೆಂದರೆ, ವೈದ್ಯಕೀಯ ವಿಜ್ಞಾನವು ಮೂರು ತತ್ವಗಳ ಮೇಲೆ ಆಧಾರಿತವಾಗಿದೆ: ಶಕ್ತಿಯನ್ನು ಕಾಪಾಡುವುದು, ಪಥ್ಯ, ಮತ್ತು ವಿಸರ್ಜನೆ. ಈ ಹದೀಸ್ ಇವುಗಳಲ್ಲಿ ಮೊದಲ ಎರಡನ್ನು ಒಳಗೊಂಡಿದೆ. ಸರ್ವಶಕ್ತನಾದ ಅಲ್ಲಾಹನ ವಚನದಲ್ಲಿ ಹೀಗೆ ಬಂದಿದೆ: "ಮತ್ತು ತಿನ್ನಿರಿ ಹಾಗೂ ಕುಡಿಯಿರಿ, ಆದರೆ ಮಿತಿಮೀರಬೇಡಿ. ಖಂಡಿತವಾಗಿಯೂ ಮಿತಿಮೀರುವವರನ್ನು ಅವನು ಇಷ್ಟಪಡುವುದಿಲ್ಲ." [ಸೂರಃ ಅಲ್-ಅಅರಾಫ್: 31].

ಈ ಶರೀಅತ್‌ನ ಪರಿಪೂರ್ಣತೆಯನ್ನು ತಿಳಿಸಲಾಗಿದೆ. ಅದು ಹೇಗೆಂದರೆ ಅದು (ಶರೀಅತ್) ಮನುಷ್ಯನ ಧಾರ್ಮಿಕ ಮತ್ತು ಲೌಕಿಕ ಹಿತಾಸಕ್ತಿಗಳನ್ನು ಒಳಗೊಂಡಿದೆ.

ಶರೀಅತ್‌ನ ಜ್ಞಾನಗಳಲ್ಲಿ ವೈದ್ಯಶಾಸ್ತ್ರದ ಮೂಲತತ್ವಗಳು ಮತ್ತು ಅದರ ಕೆಲವು ವಿಧಗಳೂ ಸೇರಿವೆ. ಉದಾಹರಣೆಗೆ ಜೇನುತುಪ್ಪ ಮತ್ತು ಕಪ್ಪು ಜೀರಿಗೆಯ ಬಗ್ಗೆ ಬಂದಿರುವ ಹದೀಸ್‌ಗಳು.

ಶರೀಅತ್‌ನ ನಿಯಮಗಳು ವಿವೇಕವನ್ನು ಒಳಗೊಂಡಿವೆ. ಅವು ಕೆಡುಕುಗಳನ್ನು ತಡೆಯುವುದು ಮತ್ತು ಒಳಿತುಗಳನ್ನು ತರುವುದರ ಮೇಲೆ ಆಧಾರಿತವಾಗಿವೆ.

التصنيفات

Condemning Whims and Desires