Jurisprudence and Juristic Principles

Jurisprudence and Juristic Principles

6- ಉಸ್ಮಾನ್ ಬಿನ್ ಅಫ್ಫಾನ್ ರವರ ವಿಮೋಚಿತ ಗುಲಾಮರಾದ ಹುಮ್ರಾನ್ ರಿಂದ ವರದಿ: ಒಮ್ಮೆ ಉಸ್ಮಾನ್ ಬಿನ್ ಅಫ್ಫಾನ್ ವುದೂ ನಿರ್ವಹಿಸಲು ನೀರು ತರಿಸುವುದನ್ನು ಅವರು ಕಂಡರು. ಅವರು (ಉಸ್ಮಾನ್) ಪಾತ್ರೆಯಿಂದ ತಮ್ಮ ಎರಡು ಕೈಗಳಿಗೆ ನೀರು ಸುರಿದು, ಅವುಗಳನ್ನು ಮೂರು ಬಾರಿ ತೊಳೆದರು. ನಂತರ ಬಲಗೈಯನ್ನು ನೀರಿಗೆ ತೂರಿಸಿದರು. ನಂತರ ಬಾಯಿ ಮುಕ್ಕಳಿಸಿ ಮೂಗಿಗೆ ನೀರೆಳೆದು ಹೊರಬಿಟ್ಟರು. ನಂತರ ಮೂರು ಬಾರಿ ಮುಖವನ್ನು ತೊಳೆದರು. ಮೊಣಕೈಗಳ ವರೆಗೆ ಎರಡು ಕೈಗಳನ್ನು ಮೂರು ಬಾರಿ ತೊಳೆದರು. ನಂತರ ತಲೆಯನ್ನು ಸವರಿದರು. ನಂತರ ಎರಡು ಕಾಲುಗಳನ್ನು ಮೂರು ಬಾರಿ ತೊಳೆದರು. ನಂತರ ಹೇಳಿದರು: "ನಾನಿಲ್ಲಿ ವುದೂ ನಿರ್ವಹಿಸಿದಂತೆ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ವುದೂ ನಿರ್ವಹಿಸುವುದನ್ನು ನಾನು ಕಂಡಿದ್ದೇನೆ." ಅವರು (ಪ್ರವಾದಿಯವರು) ಹೇಳಿದರು: "@ಯಾರು ನಾನಿಲ್ಲಿ ವುದೂ ನಿರ್ವಹಿಸಿದಂತೆ ವುದೂ ನಿರ್ವಹಿಸಿ, ಇಹಲೋಕದ ಯಾವುದೇ ವಿಷಯದ ಬಗ್ಗೆ ಏನೂ ಯೋಚಿಸದೆ ಎರಡು ರಕಅತ್ ನಮಾಝ್ ನಿರ್ವಹಿಸುತ್ತಾರೋ ಅವರ ಗತ ಪಾಪಗಳನ್ನು ಅಲ್ಲಾಹು ಕ್ಷಮಿಸುತ್ತಾನೆ.*"

16- "ಹಲಾಲ್ ಅತ್ಯಂತ ಸ್ಪಷ್ಟವಾಗಿದೆ ಮತ್ತು ಹರಾಮ್ ಕೂಡ ಅತ್ಯಂತ ಸ್ಪಷ್ಟವಾಗಿದೆ*. ಇವೆರಡರ ಮಧ್ಯೆ ಸಂಶಯಾಸ್ಪದ ವಿಷಯಗಳಿವೆ. ಜನರಲ್ಲಿ ಹೆಚ್ಚಿನವರಿಗೂ ಅವುಗಳ ಬಗ್ಗೆ ಜ್ಞಾನವಿಲ್ಲ. ಯಾರು ಈ ಸಂಶಯಾಸ್ಪದ ವಿಷಯಗಳಿಂದ ದೂರವಿರುತ್ತಾನೋ, ಅವನು ತನ್ನ ಧರ್ಮ ಮತ್ತು ಘನತೆಯನ್ನು ಕಾಪಾಡಿಕೊಂಡನು. ಯಾರು ಈ ಸಂಶಯಾಸ್ಪದ ವಿಷಯಗಳಲ್ಲಿ ಒಳಪಡುತ್ತಾನೋ ಅವನು ಹರಾಮ್‌ನಲ್ಲಿ ಒಳಪಡುತ್ತಾನೆ. ಅವನ ಸ್ಥಿತಿಯು (ಪ್ರವೇಶಾನುಮತಿಯಿಲ್ಲದ) ಹುಲ್ಲುಗಾವಲಿನ ಅಂಚಿನಲ್ಲಿ ತನ್ನ ಕುರಿಮಂದೆಯನ್ನು ಮೇಯಿಸುವ ಒಬ್ಬ ಕುರಿಗಾಹಿಯಂತೆ. ಅವನ ಕುರಿಗಳು ಹುಲ್ಲುಗಾವಲಿನೊಳಗೆ ನುಗ್ಗಿ ಮೇಯುವ ಸಾಧ್ಯತೆಯಿದೆ. ಎಚ್ಚರಾ! ಪ್ರತಿಯೊಬ್ಬ ರಾಜನಿಗೂ ಒಂದು (ನಿಷೇಧಿತ) ವಲಯವಿದೆ. ಎಚ್ಚರಾ! ಅಲ್ಲಾಹು ನಿಷೇಧಿಸಿದ ಕಾರ್ಯಗಳು ಅವನ (ನಿಷೇಧಿತ) ವಲಯವಾಗಿದೆ. ಎಚ್ಚರಾ! ದೇಹದಲ್ಲಿ ಒಂದು ಮಾಂಸದ ತುಂಡಿದೆ. ಅದು ಸರಿಯಾದರೆ ಸಂಪೂರ್ಣ ದೇಹವು ಸರಿಯಾಗುತ್ತದೆ. ಅದು ಕೆಟ್ಟರೆ ಸಂಪೂರ್ಣ ದೇಹವು ಕೆಡುತ್ತದೆ. ಎಚ್ಚರಾ! ಅದು ಹೃದಯವಾಗಿದೆ."

17- "ನಿಶ್ಚಯವಾಗಿಯೂ ಅಲ್ಲಾಹು ಪ್ರತಿಯೊಂದು ವಿಷಯದಲ್ಲೂ ಉತ್ತಮವಾಗಿ ವರ್ತಿಸುವುದನ್ನು ಕಡ್ಡಾಯಗೊಳಿಸಿದ್ದಾನೆ*. ಆದ್ದರಿಂದ ನೀವು (ಪ್ರತೀಕಾರಕ್ಕಾಗಿ) ಕೊಲ್ಲುವಾಗ ಉತ್ತಮ ರೀತಿಯಲ್ಲಿ ಕೊಲ್ಲಿರಿ. ನೀವು (ಪ್ರಾಣಿಗಳನ್ನು ಮಾಂಸಕ್ಕಾಗಿ) ಕೊಯ್ಯುವಾಗ ಉತ್ತಮ ರೀತಿಯಲ್ಲಿ ಕೊಯ್ಯಿರಿ. ನಿಮ್ಮಲ್ಲೊಬ್ಬನು ಕೊಯ್ಯುವಾಗ ಚೂರಿಯನ್ನು ಹರಿತಗೊಳಿಸಲಿ ಮತ್ತು ಪ್ರಾಣಿಗೆ ನಿರಾಳತೆಯನ್ನು ನೀಡಲಿ."

28- ಇಬ್ನ್ ಝುಬೈರ್ ಪ್ರತಿಯೊಂದು ನಮಾಝ್‌ನಲ್ಲೂ ಸಲಾಂ ಹೇಳಿದ ನಂತರ ಇದನ್ನು ಪಠಿಸುತ್ತಿದ್ದರು: "ಲಾ ಇಲಾಹ ಇಲ್ಲಲ್ಲಾಹು ವಹ್ದಹೂ ಲಾ ಶರೀಕ ಲಹೂ, ಲಹುಲ್ ಮುಲ್ಕು ವಲಹುಲ್ ಹಮ್ದು ವಹುವ ಅಲಾ ಕುಲ್ಲಿ ಶೈಇನ್ ಕದೀರ್. ಲಾ ಹೌಲ ವಲಾ ಕುವ್ವತ ಇಲ್ಲಾ ಬಿಲ್ಲಾಹ್. ಲಾ ಇಲಾಹ ಇಲ್ಲಲ್ಲಾಹು, ವಲಾ ನಅ್‌ಬುದು ಇಲ್ಲಾ ಇಯ್ಯಾಹು, ಲಹು ನ್ನಿಅ್‌‌ಮತು ವಲಹುಲ್ ಫದ್ಲು, ವಲಹು ಸ್ಸನಾಉಲ್ ಹಸನು, ಲಾ ಇಲಾಹ ಇಲ್ಲಲ್ಲಾಹು ಮುಖ್ಲಿಸೀನ ಲಹು ದ್ದೀನ ವಲವ್ ಕರಿಹಲ್ ಕಾಫಿರೂನ್." (ಅಲ್ಲಾಹನ ಹೊರತು ಆರಾಧನೆಗೆ ಅರ್ಹರಾದ ಅನ್ಯ ಆರಾಧ್ಯರಿಲ್ಲ, ಅವನು ಏಕೈಕನು ಮತ್ತು ಸಹಭಾಗಿಗಳಿಲ್ಲದವನು, ಆಧಿಪತ್ಯವು ಅವನದ್ದು ಮತ್ತು ಸ್ತುತಿಯು ಅವನಿಗೆ, ಅವನು ಎಲ್ಲಾ ವಿಷಯಗಳಲ್ಲೂ ಸಾಮರ್ಥ್ಯವುಳ್ಳವನಾಗಿದ್ದಾನೆ. ಅಲ್ಲಾಹನ ಹೊರತು ಶಕ್ತಿಯಾಗಲಿ ಸಾಮರ್ಥ್ಯವಾಗಲಿ ಇಲ್ಲ. ಅಲ್ಲಾಹನ ಹೊರತು ಆರಾಧನೆಗೆ ಅರ್ಹರಾದ ಅನ್ಯ ಆರಾಧ್ಯರಿಲ್ಲ, ನಾವು ಅವನನ್ನಲ್ಲದೆ ಇನ್ನಾರನ್ನೂ ಆರಾಧಿಸುವುದಿಲ್ಲ. ಅನುಗ್ರಹವು ಅವನದ್ದು, ಔದಾರ್ಯವು ಅವನದ್ದು ಮತ್ತು ಉತ್ತಮವಾದ ಪ್ರಶಂಸೆಯು ಅವನಿಗೆ. ಅಲ್ಲಾಹನ ಹೊರತು ಆರಾಧನೆಗೆ ಅರ್ಹರಾದ ಅನ್ಯ ಆರಾಧ್ಯರಿಲ್ಲ, ಸತ್ಯನಿಷೇಧಿಗಳು ಅಸಹ್ಯಪಟ್ಟರೂ ಸಹ ನಾವು ಧರ್ಮವನ್ನು ಅವನಿಗೆ ನಿಷ್ಕಳಂಕಗೊಳಿಸುತ್ತೇವೆ). ನಂತರ ಅವರು ಹೇಳಿದರು: "@ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಎಲ್ಲಾ ನಮಾಝ್‌ಗಳ ನಂತರ ಇವುಗಳ ಮೂಲಕ ತಹ್ಲೀಲ್ (ಲಾಇಲಾಹ ಇಲ್ಲಲ್ಲಾಹ್) ಪಠಿಸುತ್ತಿದ್ದರು."

35- ಒಮ್ಮೆ ಉಮ್ಮು ಸಲಮ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ಅಬಿಸೀನಿಯಾದಲ್ಲಿ ನೋಡಿದ ಮಾರಿಯ ಎಂಬ ಹೆಸರಿನ ಇಗರ್ಜಿಯ ಬಗ್ಗೆ ಮತ್ತು ಅದರಲ್ಲಿ ಅವರು ನೋಡಿದ ಚಿತ್ರಗಳ ಬಗ್ಗೆ ಅಲ್ಲಾಹನ ಸಂದೇಶವಾಹಕರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಗಮನ ಸೆಳೆದಾಗ, ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "@ಅವರು ಎಂತಹ ಜನರೆಂದರೆ, ಅವರಲ್ಲಿ ಒಬ್ಬ ನೀತಿವಂತ ದಾಸ ಅಥವಾ ಒಬ್ಬ ನೀತಿವಂತ ವ್ಯಕ್ತಿ ಮರಣಹೊಂದಿದರೆ, ಅವರು ಅವನ ಸಮಾಧಿಯ ಮೇಲೆ ಆರಾಧನಾಲಯವನ್ನು ನಿರ್ಮಿಸುತ್ತಿದ್ದರು* ಮತ್ತು ಅದರಲ್ಲಿ ಆ ಚಿತ್ರಗಳನ್ನು ರಚಿಸುತ್ತಿದ್ದರು. ಅವರು ಅಲ್ಲಾಹನ ದೃಷ್ಟಿಯಲ್ಲಿ ಸೃಷ್ಟಿಗಳಲ್ಲೇ ಅತ್ಯಂತ ನಿಕೃಷ್ಟರು."

38- ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನಮಾಝ್ ಮುಗಿಸಿದರೆ ಮೂರು ಬಾರಿ ಇಸ್ತಿಗ್ಫಾರ್ (ಕ್ಷಮೆಯಾಚನೆ) ಮಾಡುತ್ತಿದ್ದರು. ನಂತರ ಹೀಗೆ ಹೇಳುತ್ತಿದ್ದರು: "@ಅಲ್ಲಾಹುಮ್ಮ ಅನ್ತ ಸ್ಸಲಾಂ, ವಮಿನ್ಕ ಸ್ಸಲಾಂ, ತಬಾರಕ್ತ ದಲ್ ಜಲಾಲಿ ವಲ್ ಇಕ್ರಾಮ್*" (ಓ ಅಲ್ಲಾಹ್! ನೀನು ಅಸ್ಸಲಾಂ (ಶಾಂತಿ) ಮತ್ತು ನಿನ್ನಿಂದಲೇ ಶಾಂತಿ. ಓ ಮಹಿಮೆ ಪ್ರತಿಷ್ಠೆಗಳನ್ನು ಹೊಂದಿರುವವನೇ! ನೀನು ಅನುಗ್ರಹಪೂರ್ಣನಾಗಿರುವೆ.” (ವರದಿಗಾರರಲ್ಲಿ ಒಬ್ಬರಾದ) ವಲೀದ್ ಹೇಳುತ್ತಾರೆ: ನಾನು ಔಝಾಈರೊಡನೆ ಕೇಳಿದೆ: "ನಾನು ಕ್ಷಮೆಯಾಚನೆ ಮಾಡುವುದು ಹೇಗೆ?" ಅವರು ಉತ್ತರಿಸಿದರು: "ಅಸ್ತಗ್ಫಿರುಲ್ಲಾಹ್, ಅಸ್ತಗ್ಫಿರುಲ್ಲಾಹ್ ಎಂದು ಹೇಳುವುದು."

41- ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನಮಗೆ ಅಗತ್ಯದ ಪ್ರವಚನವನ್ನು (ಖುತ್ಬತುಲ್ ಹಾಜ) ಕಲಿಸಿಕೊಟ್ಟರು*: "ನಿಶ್ಚಯವಾಗಿಯೂ ಸರ್ವಸ್ತುತಿಗಳು ಅಲ್ಲಾಹನಿಗೆ ಮೀಸಲು. ನಾವು ಅವನಲ್ಲಿ ಸಹಾಯ ಬೇಡುತ್ತೇವೆ ಮತ್ತು ಅವನಲ್ಲಿ ಕ್ಷಮೆ ಯಾಚಿಸುತ್ತೇವೆ. ನಮ್ಮ ಶರೀರಗಳ ಕೆಡುಕುಗಳಿಂದ ನಾವು ಅಲ್ಲಾಹನಲ್ಲಿ ರಕ್ಷೆ ಬೇಡುತ್ತೇವೆ. ಅಲ್ಲಾಹನ ಮಾರ್ಗದರ್ಶನದಲ್ಲಿರುವವನು ಪಥಭ್ರಷ್ಟನಾಗಲಾರ. ಅಲ್ಲಾಹು ಪಥಭ್ರಷ್ಟಗೊಳಿಸಿದವನು ಮಾರ್ಗದರ್ಶನವನ್ನು ಪಡೆಯಲಾರ. ಅಲ್ಲಾಹನ ಹೊರತು ಆರಾಧನೆಗೆ ಅರ್ಹರಾದ ಅನ್ಯ ಆರಾಧ್ಯರಿಲ್ಲ ಎಂದು ನಾನು ಸಾಕ್ಷಿ ವಹಿಸುತ್ತೇನೆ, ಮತ್ತು ಮುಹಮ್ಮದ್ ಅವನ ದಾಸರು ಮತ್ತು ಸಂದೇಶವಾಹಕರೆಂದು ನಾನು ಸಾಕ್ಷಿ ವಹಿಸುತ್ತೇನೆ. "ಓ ಜನರೇ! ನಿಮ್ಮನ್ನು ಒಂದೇ ದೇಹದಿಂದ ಸೃಷ್ಟಿಸಿದ ನಿಮ್ಮ ಪರಿಪಾಲಕನನ್ನು (ಅಲ್ಲಾಹನನ್ನು) ಭಯಪಡಿರಿ. ಅವನು ಅದರಿಂದಲೇ ಅದರ ಸಂಗಾತಿಯನ್ನು ಸೃಷ್ಟಿಸಿದನು. ಅವರಿಬ್ಬರಿಂದ ಅನೇಕ ಪುರುಷರನ್ನು ಮತ್ತು ಸ್ತ್ರೀಯರನ್ನು ಹಬ್ಬಿಸಿದನು. ಯಾರ ಬಗ್ಗೆ ನೀವು ಪರಸ್ಪರ ಕೇಳುತ್ತಿರುವಿರೋ ಆ ಅಲ್ಲಾಹನನ್ನು ಮತ್ತು ಕುಟುಂಬ ಸಂಬಂಧಗಳನ್ನು ಭಯಪಡಿರಿ. ಅಲ್ಲಾಹು ನಿಮ್ಮನ್ನು ಸದಾ ಗಮನಿಸುತ್ತಲೇ ಇದ್ದಾನೆ." [ನಿಸಾಅ್‌ 1]. "ಓ ಸತ್ಯವಿಶ್ವಾಸಿಗಳೇ! ಅಲ್ಲಾಹನನ್ನು ಭಯಪಡಬೇಕಾದ ರೀತಿಯಲ್ಲೇ ಭಯಪಡಿರಿ. ಮುಸ್ಲಿಮರಾಗಿಯೇ ಹೊರತು ನೀವು ಮರಣಹೊಂದುವಂತಾಗದಿರಲಿ." [ಆಲು ಇಮ್ರಾನ್:102]. "ಓ ಸತ್ಯವಿಶ್ವಾಸಿಗಳೇ! ಅಲ್ಲಾಹನನ್ನು ಭಯಪಡಿರಿ ಮತ್ತು ಸರಿಯಾದ ಮಾತನ್ನೇ ಆಡಿರಿ. ಅವನು ನಿಮ್ಮ ಕರ್ಮಗಳನ್ನು ಸರಿಪಡಿಸುವನು ಮತ್ತು ನಿಮ್ಮ ಪಾಪಗಳನ್ನು ಕ್ಷಮಿಸುವನು. ಯಾರು ಅಲ್ಲಾಹನನ್ನು ಮತ್ತು ಅವನ ಸಂದೇಶವಾಹಕರನ್ನು ಅನುಸರಿಸುತ್ತಾನೋ ಅವನು ಮಹಾ ವಿಜಯವನ್ನು ಪಡೆದನು." [ಅಹ್‌ಝಾಬ್:70-71].

46- ಒಬ್ಬ ವ್ಯಕ್ತಿ ಅಲ್ಲಾಹನ ಸಂದೇಶವಾಹಕರೊಂದಿಗೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಕೇಳಿದರು: "@ನಾನು ಐದು ವೇಳೆಯ ಕಡ್ಡಾಯ ನಮಾಝ್‌ಗಳನ್ನು ನಿರ್ವಹಿಸಿದರೆ, ರಮದಾನ್ ತಿಂಗಳಲ್ಲಿ ಉಪವಾಸ ಆಚರಿಸಿದರೆ, ಧರ್ಮಸಮ್ಮತವಾಗಿರುವುದನ್ನು ಧರ್ಮಸಮ್ಮತವೆಂದು ಮತ್ತು ಧರ್ಮನಿಷಿದ್ಧವಾಗಿರುವುದನ್ನು ಧರ್ಮನಿಷಿದ್ಧವೆಂದು ಪರಿಗಣಿಸಿದರೆ*, ಮತ್ತು ಇವುಗಳಿಗಿಂತ ಹೆಚ್ಚು ಏನೂ ನಿರ್ವಹಿಸದಿದ್ದರೆ, ನಾನು ಸ್ವರ್ಗಕ್ಕೆ ಹೋಗುವೆನೇ?" ಅವರು ಉತ್ತರಿಸಿದರು: "ಹೌದು." ಆ ವ್ಯಕ್ತಿ ಹೇಳಿದರು: "ಅಲ್ಲಾಹನಾಣೆ! ನಾನು ಅವುಗಳಿಗಿಂತ ಏನೂ ಹೆಚ್ಚಿಸುವುದಿಲ್ಲ."

49- "ಮುಅಝ್ಝಿನ್ 'ಅಲ್ಲಾಹು ಅಕ್ಬರ್ ಅಲ್ಲಾಹು ಅಕ್ಬರ್' ಎಂದು ಹೇಳುವಾಗ ನಿಮ್ಮಲ್ಲೊಬ್ಬರು ಹೃದಯಾಂತರಾಳದಿಂದ 'ಅಲ್ಲಾಹು ಅಕ್ಬರ್ ಅಲ್ಲಾಹು ಅಕ್ಬರ್' ಎಂದು ಹೇಳಿದರೆ*, ಮುಅಝ್ಝಿನ್ 'ಅಶ್‌ಹದು ಅನ್ ಲಾಇಲಾಹ ಇಲ್ಲಲ್ಲಾಹ್' ಎಂದು ಹೇಳುವಾಗ 'ಅಶ್‌ಹದು ಅನ್ ಲಾಇಲಾಹ ಇಲ್ಲಲ್ಲಾಹ್' ಎಂದು ಹೇಳಿದರೆ, ಮುಅಝ್ಝಿನ್ 'ಅಶ್‌ಹದು ಅನ್ನ ಮುಹಮ್ಮದನ್ ರಸೂಲುಲ್ಲಾಹ್' ಎಂದು ಹೇಳುವಾಗ 'ಅಶ್‌ಹದು ಅನ್ನ ಮುಹಮ್ಮದನ್ ರಸೂಲುಲ್ಲಾಹ್' ಎಂದು ಹೇಳಿದರೆ, ಮುಅಝ್ಝಿನ್ 'ಹಯ್ಯ ಅಲಸ್ಸಲಾಹ್' ಎಂದು ಹೇಳುವಾಗ 'ಲಾ ಹೌಲ ವಲಾ ಕುವ್ವತ ಇಲ್ಲಾ ಬಿಲ್ಲಾಹ್' ಎಂದು ಹೇಳಿದರೆ, ಮುಅಝ್ಝಿನ್ 'ಹಯ್ಯ ಅಲಲ್ ಫಲಾಹ್' ಎಂದು ಹೇಳುವಾಗ 'ಲಾ ಹೌಲ ವಲಾ ಕುವ್ವತ ಇಲ್ಲಾ ಬಿಲ್ಲಾಹ್' ಎಂದು ಹೇಳಿದರೆ, ಮುಅಝ್ಝಿನ್ 'ಅಲ್ಲಾಹು ಅಕ್ಬರ್ ಅಲ್ಲಾಹು ಅಕ್ಬರ್' ಎಂದು ಹೇಳುವಾಗ 'ಅಲ್ಲಾಹು ಅಕ್ಬರ್ ಅಲ್ಲಾಹು ಅಕ್ಬರ್' ಎಂದು ಹೇಳಿದರೆ, ಮುಅಝ್ಝಿನ್ 'ಲಾಇಲಾಹ ಇಲ್ಲಲ್ಲಾಹ್' ಎಂದು ಹೇಳುವಾಗ 'ಲಾಇಲಾಹ ಇಲ್ಲಲ್ಲಾಹ್' ಎಂದು ಹೇಳಿದರೆ, ಅವರು ಸ್ವರ್ಗವನ್ನು ಪ್ರವೇಶಿಸುತ್ತಾರೆ."

55- ನಾನು ಅಶ್‌ಅರಿಗಳಲ್ಲಿ ಸೇರಿದ ಕೆಲವು ಜನರೊಂದಿಗೆ ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬಳಿಗೆ ಹೋಗಿ ಸವಾರಿ ಮಾಡಲು ಏನಾದರೂ ನೀಡಬೇಕೆಂದು ವಿನಂತಿಸಿದೆ. ಅವರು ಹೇಳಿದರು: "ಅಲ್ಲಾಹನಾಣೆ! ನಿಮಗೆ ಸವಾರಿ ಮಾಡಲು ನಾನು ಏನೂ ನೀಡುವುದಿಲ್ಲ. ನನ್ನ ಬಳಿ ನೀವು ಸವಾರಿ ಮಾಡುವಂತದ್ದು ಏನೂ ಇಲ್ಲ." ನಂತರ, ಅಲ್ಲಾಹು ಇಚ್ಛಿಸಿದಷ್ಟು ಕಾಲ ನಾವು ಕಾದು ಕುಳಿತೆವು. ಆಗ ಅವರ ಬಳಿಗೆ ಕೆಲವು ಒಂಟೆಗಳನ್ನು ತರಲಾಯಿತು. ಅವರು ನಮಗೆ ಮೂರು ಒಂಟೆಗಳನ್ನು ನೀಡಲು ಆದೇಶಿಸಿದರು. ನಾವು ಅಲ್ಲಿಂದ ಹೊರಟಾಗ ನಾವು ಪರಸ್ಪರ ಹೇಳಿದೆವು: "ಅಲ್ಲಾಹು ನಮಗೆ ಸಮೃದ್ಧಿಯನ್ನು ನೀಡಲಾರ. ನಾವು ಅಲ್ಲಾಹನ ಸಂದೇಶವಾಹಕರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬಳಿಗೆ ಹೋಗಿ ಸವಾರಿ ಮಾಡಲು ಏನಾದರೂ ನೀಡಬೇಕೆಂದು ವಿನಂತಿಸಿದ್ದೆವು. ಆದರೆ ಅವರು ನಮಗೆ ಸವಾರಿ ಮಾಡಲು ಏನೂ ನೀಡುವುದಿಲ್ಲವೆಂದು ಆಣೆ ಮಾಡಿ, ನಂತರ ನಮಗೆ ಸವಾರಿ ಮಾಡಲು ನೀಡಿದರು." ಅಬೂ ಮೂಸಾ ಹೇಳಿದರು: ಆದ್ದರಿಂದ, ನಾವು ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬಳಿಗೆ ಹೋಗಿ ಅವರಿಗೆ ವಿಷಯವನ್ನು ತಿಳಿಸಿದೆವು. ಆಗ ಅವರು ಹೇಳಿದರು: "ನಿಮಗೆ ಸವಾರಿ ಮಾಡಲು ನೀಡಿದ್ದು ನಾನಲ್ಲ. ಬದಲಿಗೆ, ನಿಮಗೆ ಸವಾರಿ ಮಾಡಲು ನೀಡಿದ್ದು ಅಲ್ಲಾಹು. @ನಿಶ್ಚಯವಾಗಿಯೂ, ಅಲ್ಲಾಹನಾಣೆ! ಅಲ್ಲಾಹು ಇಚ್ಛಿಸಿದರೆ, ನಾನು ಒಂದು ಕಾರ್ಯವನ್ನು ಮಾಡುತ್ತೇನೆಂದು ಪ್ರತಿಜ್ಞೆ ಮಾಡಿ, ನಂತರ ನನಗೆ ಇನ್ನೊಂದು ಕಾರ್ಯವು ಅದಕ್ಕಿಂತ ಉತ್ತಮವೆಂದು ಕಂಡರೆ, ನಾನು ನನ್ನ ಪ್ರತಿಜ್ಞೆಗೆ ಪರಿಹಾರ ನೀಡಿ, ಆ ಉತ್ತಮವಾದ ಕಾರ್ಯವನ್ನು ಮಾಡುತ್ತೇನೆ."

57- ಅಲ್ಲಾಹನ ಸಂದೇಶವಾಹಕರೊಡನೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಶೌರ್ಯಕ್ಕಾಗಿ ಹೋರಾಡುವ, ಕೋಮುವಾದಕ್ಕಾಗಿ ಹೋರಾಡುವ, ಮತ್ತು ತೋರಿಕೆಗಾಗಿ ಹೋರಾಡುವ ವ್ಯಕ್ತಿಯ ಬಗ್ಗೆ—ಇವರಲ್ಲಿ ಅಲ್ಲಾಹನ ಮಾರ್ಗದಲ್ಲಿರುವವರು ಯಾರು? ಎಂದು ಕೇಳಲಾಯಿತು. ಆಗ ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಉತ್ತರಿಸಿದರು: @"ಅಲ್ಲಾಹನ ವಚನವು ಸರ್ವೋಚ್ಛವಾಗಬೇಕೆಂದು ಯಾರು ಹೋರಾಡುತ್ತಾರೋ ಅವರೇ ಅಲ್ಲಾಹನ ಮಾರ್ಗದಲ್ಲಿರುವವರು."

64- "ನಾನು ಪ್ರವಾದಿಯವರಿಂದ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹತ್ತು ರಕಅತ್‌ಗಳನ್ನು ಜ್ಞಾಪಕದಲ್ಲಿಟ್ಟಿದ್ದೇನೆ*: ಝುಹರ್ ನಮಾಝಿಗೆ ಮೊದಲು ಎರಡು ರಕಅತ್‌ಗಳು ಮತ್ತು ಅದರ ನಂತರ ಎರಡು ರಕಅತ್‌ಗಳು, ಮಗ್ರಿಬ್ ನಂತರ ಮನೆಯಲ್ಲಿ ಎರಡು ರಕಅತ್‌ಗಳು, ಇಶಾ ನಂತರ ಮನೆಯಲ್ಲಿ ಎರಡು ರಕಅತ್‌ಗಳು, ಫಜ್ರ್ ನಮಾಝಿಗೆ ಮೊದಲು ಎರಡು ರಕಅತ್‌ಗಳು. (ಇವು ಮಾತ್ರವಲ್ಲದೆ) ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬಳಿಗೆ ಯಾರೂ ಹೋಗದಂತಹ ಒಂದು ಸಮಯವಿದೆ. (ಪ್ರವಾದಿ ಪತ್ನಿ) ಹಫ್ಸ ನನಗೆ ತಿಳಿಸಿದರು: ಮುಅಝ್ಝಿನ್ ಅಝಾನ್ ನೀಡಿ ಪ್ರಭಾತವು ಉದಯವಾದಾಗ ಪ್ರವಾದಿಯವರು ಎರಡು ರಕಅತ್‌ ನಮಾಝ್ ಮಾಡುತ್ತಿದ್ದರು." ಇನ್ನೊಂದು ವರದಿಯಲ್ಲಿ: "ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಜುಮಾ ನಮಾಝಿನ ಬಳಿಕ ಎರಡು ರಕಅತ್‌ ನಮಾಝ್ ನಿರ್ವಹಿಸುತ್ತಿದ್ದರು."

70- ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನಮಾಝನ್ನು ಪ್ರಾರಂಭಿಸುವಾಗ ತಮ್ಮ ಎರಡು ಕೈಗಳನ್ನು ಹೆಗಲಿಗೆ ಸಮಾನಾಂತರವಾಗಿ ಎತ್ತುತ್ತಿದ್ದರು.* ಅದೇ ರೀತಿ, ರುಕೂ ಮಾಡುವಾಗಲೂ, ರುಕೂವಿನಿಂದ ತಲೆ ಎತ್ತುವಾಗಲೂ ಕೈಗಳನ್ನು ಎತ್ತುತ್ತಿದ್ದರು ಮತ್ತು "ಸಮಿಅಲ್ಲಾಹು ಲಿಮನ್ ಹಮಿದ, ರಬ್ಬನಾ ವಲಕಲ್ ಹಮ್ದ್" ಎಂದು ಹೇಳುತ್ತಿದ್ದರು. ಆದರೆ ಸುಜೂದ್‌ನಲ್ಲಿ ಅವರು ಹೀಗೆ ಮಾಡುತ್ತಿರಲಿಲ್ಲ.

71- "ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನನ್ನ ಅಂಗೈಯನ್ನು ಅವರ ಎರಡು ಅಂಗೈಗಳ ಮಧ್ಯದಲ್ಲಿಟ್ಟು, ಕುರ್‌ಆನಿನ ಒಂದು ಅಧ್ಯಾಯವನ್ನು ಕಲಿಸಿಕೊಡುವಂತೆ ನನಗೆ ತಶಹ್ಹುದ್ ಕಲಿಸಿಕೊಟ್ಟರು*: ಅತ್ತಹಿಯ್ಯಾತು ಲಿಲ್ಲಾಹಿ, ವಸ್ಸಲವಾತು, ವತ್ತಯ್ಯಿಬಾತು, ಅಸ್ಸಲಾಮು ಅಲೈಕ ಅಯ್ಯುಹನ್ನಬಿಯ್ಯು ವರಹ್ಮತುಲ್ಲಾಹಿ ವಬರಕಾತುಹು, ಅಸ್ಸಲಾಮು ಅಲೈನಾ ವಅಲಾ ಇಬಾದಿಲ್ಲಾಹಿ ಸ್ಸಾಲಿಹೀನ್. ಅಶ್‌ಹದು ಅನ್ ಲಾ ಇಲಾಹ ಇಲ್ಲಲ್ಲಾಹು ವ ಅಶ್‌ಹದು ಅನ್ನ ಮುಹಮ್ಮದನ್ ಅಬ್ದುಹೂ ವರಸೂಲುಹು." (ಅಭಿವಂದನೆಗಳು, ನಮಾಝ್‌ಗಳು ಮತ್ತು ಅತ್ಯುತ್ತಮವಾದುದೆಲ್ಲವೂ ಅಲ್ಲಾಹನಿಗೆ ಮೀಸಲು. ಓ ಪ್ರವಾದಿಯವರೇ! ನಿಮ್ಮ ಮೇಲೆ ಅಲ್ಲಾಹನ ಶಾಂತಿ, ಕರುಣೆ ಮತ್ತು ಸಮೃದ್ಧಿಯಿರಲಿ. ನಮ್ಮ ಮೇಲೆ ಮತ್ತು ಅಲ್ಲಾಹನ ನೀತಿವಂತ ದಾಸರೆಲ್ಲರ ಮೇಲೆ ಶಾಂತಿಯಿರಲಿ. ಅಲ್ಲಾಹನ ಹೊರತು ಆರಾಧಿಸಲು ಅರ್ಹರಾದ ಅನ್ಯ ದೇವರಿಲ್ಲ ಎಂದು ನಾನು ಸಾಕ್ಷ್ಯವಹಿಸುತ್ತೇನೆ ಮತ್ತು ಮುಹಮ್ಮದ್ ಅಲ್ಲಾಹನ ದಾಸರು ಮತ್ತು ಸಂದೇಶವಾಹಕರೆಂದು ನಾನು ಸಾಕ್ಷ್ಯ ವಹಿಸುತ್ತೇನೆ). ಇನ್ನೊಂದು ವರದಿಯಲ್ಲಿ: "ನಿಶ್ಚಯವಾಗಿಯೂ ಅಲ್ಲಾಹು ಶಾಂತಿಯಾಗಿದ್ದಾನೆ. ಆದ್ದರಿಂದ ನಿಮ್ಮಲ್ಲೊಬ್ಬರು ನಮಾಝಿನಲ್ಲಿ ಕುಳಿತುಕೊಳ್ಳುವಾಗ ಹೀಗೆ ಹೇಳಲಿ: ಅತ್ತಹಿಯ್ಯಾತು ಲಿಲ್ಲಾಹಿ, ವಸ್ಸಲವಾತು, ವತ್ತಯ್ಯಿಬಾತು, ಅಸ್ಸಲಾಮು ಅಲೈಕ ಅಯ್ಯುಹನ್ನಬಿಯ್ಯು ವರಹ್ಮತುಲ್ಲಾಹಿ ವಬರಕಾತುಹು, ಅಸ್ಸಲಾಮು ಅಲೈನಾ ವಅಲಾ ಇಬಾದಿಲ್ಲಾಹಿ ಸ್ಸಾಲಿಹೀನ್. (ಅಭಿವಂದನೆಗಳು, ನಮಾಝ್‌ಗಳು ಮತ್ತು ಅತ್ಯುತ್ತಮವಾದುದೆಲ್ಲವೂ ಅಲ್ಲಾಹನಿಗೆ ಮೀಸಲು. ಓ ಪ್ರವಾದಿಯವರೇ! ನಿಮ್ಮ ಮೇಲೆ ಅಲ್ಲಾಹನ ಶಾಂತಿ, ಕರುಣೆ ಮತ್ತು ಸಮೃದ್ಧಿಯಿರಲಿ. ನಮ್ಮ ಮೇಲೆ ಮತ್ತು ಅಲ್ಲಾಹನ ನೀತಿವಂತ ದಾಸರೆಲ್ಲರ ಮೇಲೆ ಶಾಂತಿಯಿರಲಿ). ಹೀಗೆ ಹೇಳಿದರೆ ಭೂಮ್ಯಾಕಾಶಗಳಲ್ಲಿರುವ ಅಲ್ಲಾಹನ ಎಲ್ಲಾ ನೀತಿವಂತ ದಾಸರಿಗೂ ಅದು ಅನ್ವಯಿಸುತ್ತದೆ. ಅಶ್‌ಹದು ಅನ್ ಲಾ ಇಲಾಹ ಇಲ್ಲಲ್ಲಾಹು ವ ಅಶ್‌ಹದು ಅನ್ನ ಮುಹಮ್ಮದನ್ ಅಬ್ದುಹೂ ವರಸೂಲುಹು. (ಅಲ್ಲಾಹನ ಹೊರತು ಆರಾಧಿಸಲು ಅರ್ಹರಾದ ಅನ್ಯ ದೇವರಿಲ್ಲ ಎಂದು ನಾನು ಸಾಕ್ಷ್ಯವಹಿಸುತ್ತೇನೆ ಮತ್ತು ಮುಹಮ್ಮದ್ ಅಲ್ಲಾಹನ ದಾಸರು ಮತ್ತು ಸಂದೇಶವಾಹಕರೆಂದು ನಾನು ಸಾಕ್ಷ್ಯ ವಹಿಸುತ್ತೇನೆ). ನಂತರ ಅವರಿಗೆ ಇಷ್ಟವಾದ ಪ್ರಾರ್ಥನೆಯನ್ನು ಪ್ರಾರ್ಥಿಸಬಹುದು."

72- ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಪ್ರಾರ್ಥಿಸುತ್ತಾ ಹೇಳುತ್ತಿದ್ದರು: "@ಓ ಅಲ್ಲಾಹ್! ನಾನು ನಿನ್ನಲ್ಲಿ ಸಮಾಧಿಯ ಶಿಕ್ಷೆಯಿಂದ, ನರಕ ಶಿಕ್ಷೆಯಿಂದ, ಜೀವನ ಮತ್ತು ಮರಣದ ಪರೀಕ್ಷೆಗಳಿಂದ ಮತ್ತು ದಜ್ಜಾಲ್‌ನ ಪರೀಕ್ಷೆಯಿಂದ ರಕ್ಷೆ ಬೇಡುತ್ತೇನೆ.*" ಮುಸ್ಲಿಂರ ಇನ್ನೊಂದು ವರದಿಯಲ್ಲಿ: "ನಿಮ್ಮಲ್ಲೊಬ್ಬನು ಕೊನೆಯ ತಶಹ್ಹುದ್ ಪಠಿಸಿದ ನಂತರ ನಾಲ್ಕು ವಿಷಯಗಳಿಂದ ಅಲ್ಲಾಹನಲ್ಲಿ ರಕ್ಷೆ ಬೇಡಲಿ. ನರಕ ಶಿಕ್ಷೆಯಿಂದ, ಸಮಾಧಿಯ ಶಿಕ್ಷೆಯಿಂದ, ಜೀವನ ಮತ್ತು ಮರಣದ ಪರೀಕ್ಷೆಗಳಿಂದ ಮತ್ತು ದಜ್ಜಾಲ್‌ನ ಕೆಡುಕಿನಿಂದ."

73- ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನಮಾಝಿಗಾಗಿ ತಕ್ಬೀರ್ ಹೇಳಿದರೆ, ಕುರ್‌ಆನ್ ಪಠಿಸುವುದಕ್ಕೆ ಮೊದಲು ಸ್ವಲ್ಪ ಹೊತ್ತು ಮೌನವಾಗಿರುತ್ತಿದ್ದರು. ನಾನು ಹೇಳಿದೆ: "ಓ ಅಲ್ಲಾಹನ ಸಂದೇಶವಾಹಕರೇ! ನನ್ನ ತಂದೆ-ತಾಯಿಗಳನ್ನು ನಿಮಗೆ ಅರ್ಪಿಸುತ್ತಿದ್ದೇನೆ. ತಕ್ಬೀರ್ ಮತ್ತು ಕುರ್‌ಆನ್ ಪಠಣದ ನಡುವೆ ನೀವು ಮೌನವಾಗಿರುತ್ತೀರಿ. ಆಗ ನೀವು ಏನು ಪಠಿಸುತ್ತೀರಿ? ಅವರು ಉತ್ತರಿಸಿದರು: "ನಾನು ಹೀಗೆ ಹೇಳುತ್ತೇನೆ: @ಓ ಅಲ್ಲಾಹ್! ಪೂರ್ವ ಮತ್ತು ಪಶ್ಚಿಮಗಳ ನಡುವೆ ಅಂತರವಿಟ್ಟಂತೆ ನನ್ನ ಮತ್ತು ನನ್ನ ಪಾಪಗಳ ನಡುವೆ ಅಂತರವಿಡು.* ಓ ಅಲ್ಲಾಹ್! ಬಿಳಿಬಟ್ಟೆಯನ್ನು ಕೊಳೆಯಿಂದ ಶುಚಿಗೊಳಿಸುವಂತೆ ನನ್ನ ಪಾಪಗಳಿಂದ ನನ್ನನ್ನು ಶುಚಿಗೊಳಿಸು. ಓ ಅಲ್ಲಾಹ್! ಮಂಜು, ನೀರು ಮತ್ತು ಹಿಮದ ಮೂಲಕ ನನ್ನ ಪಾಪಗಳಿಂದ ನನ್ನನ್ನು ತೊಳೆದುಬಿಡು."

82- "ನಾಳೆ ನಾನು ಈ ಪತಾಕೆಯನ್ನು ಒಬ್ಬ ವ್ಯಕ್ತಿಗೆ ಕೊಡುವೆನು. ಅವನ ಕೈಯಿಂದ ಅಲ್ಲಾಹು ವಿಜಯವನ್ನು ದಯಪಾಲಿಸುವನು. ಅವನು ಅಲ್ಲಾಹು ಮತ್ತು ಅವನ ಸಂದೇಶವಾಹಕರನ್ನು ಪ್ರೀತಿಸುತ್ತಾನೆ ಮತ್ತು ಅಲ್ಲಾಹು ಮತ್ತು ಅವನ ಸಂದೇಶವಾಹಕರು ಅವನನ್ನು ಪ್ರೀತಿಸುತ್ತಾರೆ." ಪತಾಕೆ ಯಾರ ಕೈಗೆ ಕೊಡಲಾಗಬಹುದು ಎಂದು ಮಾತನಾಡುತ್ತಾ ಜನರು ಆ ರಾತ್ರಿಯನ್ನು ಕಳೆದರು. ಬೆಳಗಾದಾಗ, ಜನರೆಲ್ಲರೂ ಅದನ್ನು ತಮ್ಮ ಕೈಗೆ ಕೊಡಲಾಗಬಹುದೆಂಬ ನಿರೀಕ್ಷೆಯಿಂದ ಬೆಳಗ್ಗೆಯೇ ಅಲ್ಲಾಹನ ಸಂದೇಶವಾಹಕರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬಳಿಗೆ ತೆರಳಿದರು. ಅವರು (ಪ್ರವಾದಿ) ಕೇಳಿದರು: "ಅಲೀ ಬಿನ್ ಅಬೂ ತಾಲಿಬ್ ಎಲ್ಲಿ?" ಅವರು ಉತ್ತರಿಸಿದರು: "ಓ ಅಲ್ಲಾಹನ ಸಂದೇಶವಾಹಕರೇ! ಅವರು ಕಣ್ಣ ನೋವಿನಿಂದ ಬಳಲುತ್ತಿದ್ದಾರೆ." ಅವರು ಹೇಳಿದರು: "ಅವನ ಬಳಿಗೆ ಜನರನ್ನು ಕಳುಹಿಸಿ." ಅವರು ಬಂದಾಗ ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅವರ ಎರಡು ಕಣ್ಣುಗಳಿಗೆ ಉಗಿದು ಪ್ರಾರ್ಥಿಸಿದರು. ಆಗ ಅವರ ಕಣ್ಣಿನಲ್ಲಿ ಯಾವುದೇ ನೋವಿರಲಿಲ್ಲವೋ ಎಂಬಂತೆ ಅದು ಗುಣವಾಯಿತು. ಅವರು ಪತಾಕೆಯನ್ನು ಅವರಿಗೆ ಕೊಟ್ಟರು. ಅಲಿ ಕೇಳಿದರು: "ಓ ಅಲ್ಲಾಹನ ಸಂದೇಶವಾಹಕರೇ! ಅವರು ನಮ್ಮಂತೆ ಆಗುವ ತನಕ ನಾನು ಅವರೊಂದಿಗೆ ಯುದ್ಧ ಮಾಡಬೇಕೇ?" ಅವರು ಉತ್ತರಿಸಿದರು: "ಅವರ ಅಂಗಳವನ್ನು ತಲುಪುವ ತನಕ ಸಾವಧಾನದಿಂದ ಮುಂದುವರಿಯಿರಿ. ನಂತರ ಅವರನ್ನು ಇಸ್ಲಾಂ ಧರ್ಮಕ್ಕೆ ಕರೆಯಿರಿ. ಅಲ್ಲಾಹನ ಹಕ್ಕಿಗೆ ಸಂಬಂಧಿಸಿದಂತೆ ಅವರಿಗೆ ಏನು ಕಡ್ಡಾಯವಾಗಿದೆಯೆಂಬುದನ್ನು ತಿಳಿಸಿಕೊಡಿ.@ಏಕೆಂದರೆ, ಅಲ್ಲಾಹನಾಣೆ! ಅಲ್ಲಾಹು ನಿನ್ನ ಮೂಲಕ ಒಬ್ಬ ವ್ಯಕ್ತಿಗೆ ಸನ್ಮಾರ್ಗವನ್ನು ಕರುಣಿಸುವುದು ನಿನಗೆ ಕೆಂಪು ಒಂಟೆಗಳಿರುವುದಕ್ಕಿಂತಲೂ ಶ್ರೇಷ್ಠವಾಗಿದೆ."

84- ಅಮ್ರ್ ಬಿನ್ ಅಬೂ ಹಸನ್ ಅಬ್ದುಲ್ಲಾ ಬಿನ್ ಝೈದ್‌ರೊಂದಿಗೆ ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ವುದೂ (ಅಂಗಸ್ನಾನ) ಬಗ್ಗೆ ವಿಚಾರಿಸುವುದನ್ನು ನೋಡಿದೆ. ಆಗ ಅಬ್ದುಲ್ಲಾ ಬಿನ್ ಝೈದ್ ನೀರಿನ ಪಾತ್ರೆಯನ್ನು ತರಿಸಿ @ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ವುದೂ ನಿರ್ವಹಿಸಿದಂತೆ ವುದೂ ನಿರ್ವಹಿಸಿ ತೋರಿಸಿದರು.* ಅವರು ಪಾತ್ರೆಯಿಂದ ತನ್ನ ಕೈಗಳಿಗೆ ನೀರನ್ನು ಸುರಿದು ಅವುಗಳನ್ನು ಮೂರು ಬಾರಿ ತೊಳೆದರು. ನಂತರ ತಮ್ಮ ಕೈಯನ್ನು ಪಾತ್ರೆಗೆ ತೂರಿಸಿ, ಬಾಯಿ ಮುಕ್ಕಳಿಸಿದರು, ನೀರನ್ನು ಮೂಗಿಗೆ ರಭಸದಿಂದ ಎಳೆದು ಹೊರಬಿಟ್ಟರು. ಅವರು ಇದನ್ನು ಮೂರು ಬಾರಿ ಮಾಡಿದರು. ನಂತರ ಕೈಯನ್ನು ಪಾತ್ರೆಗೆ ತೂರಿಸಿ ಮೂರು ಬಾರಿ ಮುಖವನ್ನು ತೊಳೆದರು. ನಂತರ ಎರಡು ಬಾರಿ ಕೈಗಳನ್ನು ಮೊಣಕೈಗಳ ತನಕ ತೊಳೆದರು. ನಂತರ ಕೈಯನ್ನು ನೀರಿಗೆ ತೂರಿಸಿ ತಲೆಯನ್ನು ಮುಂದಿನಿಂದ ಹಿಂದಕ್ಕೆ ಮತ್ತು ಹಿಂದಿನಿಂದ ಮುಂದಕ್ಕೆ ಒಂದು ಬಾರಿ ಸವರಿದರು. ನಂತರ ಹರಡುಗಂಟುಗಳ ತನಕ ಕಾಲುಗಳನ್ನು ತೊಳೆದರು.

91- "ನಿಮ್ಮಲ್ಲೊಬ್ಬನು ಮಲಗಿರುವಾಗ ಶೈತಾನನು ಅವನ ಕತ್ತಿನ ಹಿಂಭಾಗದಲ್ಲಿ ಮೂರು ಗಂಟುಗಳನ್ನು ಹಾಕಿ, ಅವುಗಳಲ್ಲಿ ಪ್ರತಿಯೊಂದು ಗಂಟಿಗೂ ಗುದ್ದುತ್ತಾ, "ರಾತ್ರಿ ಇನ್ನೂ ದೀರ್ಘವಾಗಿದೆ; ಮಲಗು" ಎನ್ನುತ್ತಿರುವನು.* ಅವನೇನಾದರೂ ಎದ್ದು ಅಲ್ಲಾಹನನ್ನು ಸ್ಮರಿಸಿದರೆ, ಒಂದು ಗಂಟು ಬಿಚ್ಚಿಹೋಗುತ್ತದೆ. ಅವನು ವುದೂ ನಿರ್ವಹಿಸಿದರೆ ಇನ್ನೊಂದು ಗಂಟು ಬಿಚ್ಚಿಹೋಗುತ್ತದೆ. ಅವನು ನಮಾಝ್ ಮಾಡಿದರೆ ಮೂರನೆಯ ಗಂಟು ಬಿಚ್ಚಿಹೋಗುತ್ತದೆ. ಆಗ ಅವನು ಉಲ್ಲಾಸದಿಂದ ಶುದ್ಧ ಮನಸ್ಸಿನೊಂದಿಗೆ ಬೆಳಗನ್ನು ಪ್ರವೇಶಿಸುತ್ತಾನೆ. ಇಲ್ಲದಿದ್ದರೆ ಅವನು ಕೆಟ್ಟ ಮನಸ್ಸಿನೊಂದಿಗೆ ಆಲಸ್ಯದಿಂದ ಬೆಳಗನ್ನು ಪ್ರವೇಶಿಸುತ್ತಾನೆ."

97- "ಒಬ್ಬ ವ್ಯಕ್ತಿ ಸಾಮೂಹಿಕವಾಗಿ (ಜಮಾಅತ್‌ನೊಂದಿಗೆ) ನಮಾಝ್ ನಿರ್ವಹಿಸುವುದು, ಆತ ತನ್ನ ಮನೆಯಲ್ಲಿ ಅಥವಾ ತನ್ನ ಮಾರುಕಟ್ಟೆಯಲ್ಲಿ ನಿರ್ವಹಿಸುವ ನಮಾಝ್‌ಗಿಂತ ಇಪ್ಪತ್ತಕ್ಕಿಂತಲೂ ಹೆಚ್ಚು ಪದವಿಗಳನ್ನು ಹೊಂದಿದೆ.* ಅದೇಕೆಂದರೆ, ಅವರಲ್ಲೊಬ್ಬನು ಅತ್ಯುತ್ತಮ ರೀತಿಯಲ್ಲಿ ವುದೂ (ಅಂಗಸ್ನಾನ) ನಿರ್ವಹಿಸಿ, ನಂತರ ಮಸೀದಿಗೆ ಹೊರಡುತ್ತಾನೆ. ನಮಾಝಿನ ಹೊರತು ಇನ್ನೇನೂ ಅವನನ್ನು (ಹೊರಡುವಂತೆ) ಪ್ರಚೋದಿಸುವುದಿಲ್ಲ. ಅವನು ನಮಾಝನ್ನಲ್ಲದೆ ಇನ್ನೇನನ್ನೂ ಉದ್ದೇಶಿಸುವುದೂ ಇಲ್ಲ. ಹಾಗಾದರೆ, ಅವನು ಮಸೀದಿಯನ್ನು ಪ್ರವೇಶಿಸುವ ತನಕ ಅವನ ಒಂದೊಂದು ಹೆಜ್ಜೆಗೂ ಅವನಿಗೆ ಒಂದೊಂದು ಪದವಿಯನ್ನು ಏರಿಸಲಾಗುತ್ತದೆ ಮತ್ತು ಅವನಿಂದ ಒಂದೊಂದು ಪಾಪವನ್ನು ಅಳಿಸಲಾಗುತ್ತದೆ. ಅವನು ಮಸೀದಿಯನ್ನು ಪ್ರವೇಶಿಸಿದ ನಂತರ, ಎಲ್ಲಿಯವರೆಗೆ ನಮಾಝ್ ಅವನನ್ನು ಅಲ್ಲಿ ತಡೆದಿರಿಸುತ್ತದೋ ಅಲ್ಲಿಯ ತನಕ ಅವನು ನಮಾಝ್ ಮಾಡುತ್ತಿದ್ದಾನೆಂದೇ ಪರಿಗಣಿಸಲಾಗುತ್ತದೆ. ನಿಮ್ಮಲ್ಲೊಬ್ಬನು ನಮಾಝ್ ಮಾಡಿದ ಸ್ಥಳದಲ್ಲೇ ಕುಳಿತಿರುವ ತನಕ ದೇವದೂತರುಗಳು, “ಓ ಅಲ್ಲಾಹ್! ಇವನಿಗೆ ದಯೆ ತೋರು! ಓ ಅಲ್ಲಾಹ್! ಇವನನ್ನು ಕ್ಷಮಿಸು! ಓ ಅಲ್ಲಾಹ್! ಇವನ ಪಶ್ಚಾತ್ತಾಪವನ್ನು ಸ್ವೀಕರಿಸು!” ಎಂದು ಅವನಿಗಾಗಿ ಪ್ರಾರ್ಥಿಸುತ್ತಲೇ ಇರುತ್ತಾರೆ. ಅವನು ಇತರರಿಗೆ ತೊಂದರೆ ಕೊಡದಿರುವ ತನಕ, ಅಥವಾ ಅವನ ವುದೂ (ಅಂಗಸ್ನಾನ) ಅಸಿಂಧುವಾಗದಿರುವ ತನಕ."